ಬೆಲೆ ಏರಿಕೆ ವಿರುದ್ಧ ಬೀದಿಗಿಳಿದ ಬಿಜೆಪಿ

ಸೋಮವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ನಾಯಕತು ಪ್ರತಿಭಟನೆ ನಡೆಸಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳಿನಲ್ಲಿ ಬೆಲೆ ಏರಿಕೆ ಮೂಲಕ ಜನರಿಗೆ ಹೊರೆ ಉಂಟುಮಾಡಿದೆ. ಬಸ್ ಪ್ರಯಾಣದರ ಏರಿಕೆಯನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೇಂದ್ರ ಸರ್ಕಾರದ ನೀತಿಯಿಂದಾಗಿ ಪೆಟ್ರೋಲ್ ಬೆಲೆಗಳು ಹೆಚ್ಚಾಗುತ್ತಿವೆ. ಕೇಂದ್ರದ ಯುಪಿಎ ಸರ್ಕಾರ 14 ಬಾರಿ ಪೆಟ್ರೋಲ್ ಬೆಲೆ ಹೆಚ್ಚಳಮಾಡಿದೆ. ತೈಲ ಮಾಫಿಯಾಕ್ಕೆ ಮಣಿದಿರುವ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಕಡಿಮೆ ಮಾಡಲು ವಿಫಲವಾಗಿದೆ ಎಂದು ಅನಂತ್ ಕುಮಾರ್ ದೂರಿದರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಕಾರ್ಮಿಕರ ವೇತನ ಹೆಚ್ಚಿಸಲು, ಪ್ರಯಾಣದರ ಹೆಚ್ಚಳ ಮಾಡಲಾಗಿದೆ ಎಂದು ಸಚಿವರು ಸಮರ್ಥನೆ ನೀಡಿರುವುದು ಸರಿಯಲ್ಲ. ಶೇ 10ರಷ್ಟು ಪ್ರಯಾಣದರ ಏರಿಸುವ ಅವಶ್ಯಕತೆ ಇರಲಿಲ್ಲ.(ಕೆಎಸ್ಆರ್ ಟಿಸಿ ನೂತನ ದರ ಪಟ್ಟಿ)
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಪ್ರಯಾಣದರ ಏರಿಕೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಬಸ್ ಪ್ರಯಾಣದರನ್ನು ಇಳಿಕೆ ಮಾಡಬೇಕು ಎಂದು ಅಶೋಕ್ ಒತ್ತಾಯಿಸಿದರು.(ಬೆಲೆ ಏರಿಕೆ ಸರಿ ಎಂದ ಸಚಿವರು)
ಮಾಫಿಯಾಕ್ಕೆ ಬಲಿ : ಬಾರ್ ಮತ್ತು ಪಬ್ ಗಳಿಗೆ ಲೈಸೆನ್ಸ್ ನೀಡುವ ಬಗ್ಗೆ ಚರ್ಚಿಸಲು ಸರ್ಕಾರ ಸರ್ವಪಕ್ಷ ಸಭೆ ಕರೆಯುತ್ತೇನೆ ಎಂದು ಹೇಳಿತ್ತು. ಆದರೆ, ಅದನ್ನು ಮರೆತು ಲೈಸೆನ್ಸ್ ನೀಡಲು ಸರ್ಕಾರ ಪ್ರಾರಂಭಿಸಿದೆ.
ಚುನಾವಣಾ ಪೂರ್ವ ಮಾಫಿಯಾಗಳಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಇಂತಹ ನೀತಿ ಅನುಸರಿಸುತ್ತಿದೆ ಎಂದು ಅಶೋಕ್ ಆರೋಪಿಸಿದರು. ಒಂದು ತಿಂಗಳಿನಲ್ಲಿ ಜನರ ಹಿತ ಕಾಯಲು ವಿಫಲವಾದ ಕಾಂಗ್ರೆಸ್ ಸರ್ಕಾರ ಐದು ವರ್ಷ ಹೇಗೆ ಆಡಳಿತ ನಡೆಸಲಿದೆ ಎಂದು ಅಶೋಕ್ ಪ್ರಶ್ನಿಸಿದರು.












Click it and Unblock the Notifications