ಶ್ರೀರಾಮುಲು ಕೊರಳಿಗೆ ಭೂಉರುಳು

ಬಳ್ಳಾರಿಯ ತಿಲಕ್ ನಗರದ ನಿವಾಸಿಯಾದ ಜಿ.ಕೃಷ್ಣಮೂರ್ತಿ ಅವರು, ನ್ಯಾಯಾಲಯಕ್ಕೆ ದೂರು ಸಲ್ಲಿಸಿ, ಶ್ರೀರಾಮುಲು ನಿಯಮ ಬಾಹಿರವಾಗಿ ಬಳ್ಳಾರಿ ಹೊರವಲಯದಲ್ಲಿ 27 ಎಕರೆ ಭೂಮಿ ಖರೀದಿಸಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು ಎಂದು ಕೋರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವಿಶ್ವೇಶ್ವರ ಭಟ್, ಪ್ರಕರಣದ ತನಿಖೆ ನಡೆಸಿ, ಆಗಸ್ಟ್ 26ರೊಳಗೆ ವರದಿ ನೀಡುವಂತೆ ಲೋಕಾಯುಕ್ತರಿಗೆ ಆದೇಶ ನೀಡಿದೆ. ಇದರಿಂದಾಗಿ ಭೂ ಹಗರಣದ ಸುಳಿಗೆ ಶ್ರೀರಾಮುಲು ಸಿಕ್ಕಿಬಿದ್ದಂತಾಗಿದೆ.
ಪ್ರಕರಣವೇನು : ಶ್ರೀರಾಮುಲು ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದಾಗ, ಬಳ್ಳಾರಿ ಹೊರವಲಯದ ಬೆಳಗಲಿ ಪ್ರದೇಶದಲ್ಲಿ 27.25 ಎಕರೆ ಭೂಮಿ ಖರೀದಿಸಿದ್ದರು. ತಮ್ಮ ಪ್ರಭಾವ ಮತ್ತು ನಕಲಿ ದಾಖಲೆ ಉಪಯೋಗಿಸಿಕೊಂಡು, ರಾಮುಲು ಭೂಮಿ ಖರೀದಿಸಿದ್ದಾರೆ ಎಂಬುದು ಆರೋಪ.
ಭೂ ಅಕ್ರಮದಲ್ಲಿ ಹಿಂದೆ ಬಳ್ಳಾರಿಯ ಜಿಲ್ಲಾಧಿಕಾರಿಯಾಗಿದ್ದ ಶಿವಪ್ಪ, ಶಹಶೀಲ್ದಾರ್ ಶಶಿಧರ್ ಬಗಲಿ ಸೇರಿದಂತೆ ಐವರು ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಎಲ್ಲರ ವಿರುದ್ಧ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶ ನೀಡಿದೆ.
ಎಷ್ಟು ಭೂಮಿ : ಬೆಳಗಲಿಯಲ್ಲಿ ಒಟ್ಟು 27 ಎಕರೆ ಭೂಮಿ ಇತ್ತು. ಇದರಲ್ಲಿ 10 ಎಕರೆಯನ್ನು ತುಂಗಭದ್ರಾ ನಾಲೆಗಾಗಿ ಸರ್ಕಾರ ಮೀಸಲಾಗಿಟ್ಟಿತ್ತು. ಉಳಿದ 17 ಎಕರೆಯನ್ನು ಜನಾರ್ದನ ರೆಡ್ಡಿ ಅವರ ಮಾವ ಪರಮೇಶ್ವರ ರೆಡ್ಡಿ ಖರೀದಿಸಿದ್ದರು.
ನಂತರ ಆ ಭೂಮಿಯನ್ನು ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಅವರಿಗೆ ಉಡುಗೊರೆಯಾಗಿ ನೀಡಿದರು. ಜನಾರ್ದನ ರೆಡ್ಡಿ ಅವರಿಂದ ಎಕರೆಗೆ 10,000 ರೂ ನೀಡಿ ಶ್ರೀರಾಮುಲು ಭೂಮಿಯನ್ನು ಖರೀದಿಸಿದರು.
ನಂತರ ತಮ್ಮ ಪ್ರಭಾವ ಬಳಸಿ, ನಾಲೆಗೆ ಮೀಸಲಾಗಿದ್ದ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಶ್ರೀರಾಮುಲು ವಶಪಡಿಸಿಕೊಂಡಿದ್ದಾರೆ ಎಂಬುದು ಆರೋಪ. ತನಿಖೆ ನಡೆದು ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ.












Click it and Unblock the Notifications