ಡ್ಯಾಮೇಜೇ ಎಲ್ಲ; ಕಂಟ್ರೋಲಿಗೆ ಸಿಗೋಂಥಾದ್ದೂ ಅಲ್ಲ

ಸದ್ಯಕ್ಕೆ ಈ ಮರ್ಮಾಘಾತದಿಂದ ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳೂ ಪಕ್ಷದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆದರೂ ಹಿರಿಯ ನಾಯಕರು ಎಲ್ಲ ಸರ್ಕಸ್ಸೂ ಮಾಡುತ್ತಿದ್ದಾರೆ. ಆದರೆ ಅಡ್ಡವಾಣಿ ಪಲುಕಿರುವುದು ಪಕ್ಷಕ್ಕೆ ಡ್ಯಾಮೇಜೇ ಎಲ್ಲ. damage control ಕಂಟ್ರೋಲಿಗೆ ಸಿಗ್ತಾ ಇಲ್ಲ. ಏಕೆಂದರೆ ಅಲ್ಲಿ ಇತ್ತೀಚೆಗೆ ಯಾರದೂ ಕಂಟ್ರೋಲ್ ಇಲ್ಲ.
ಈಗಂತೂ ಬಿಡಿ. ಅಡ್ವಾಣಿ (ರಾಜೀನಾಮೆ) ಪತ್ರ ಭಾರಿ ಡ್ಯಾಮೇಜು ಮಾಡಿಬಿಟ್ಟಿದೆ. BJP has gone to dogs. ಅಂದರೆ ಅಚ್ಚಕನ್ನಡದಲ್ಲಿ ಹೇಳಬೇಕೆಂದರೆ ಬಿಜೆಪಿ ಈಗ ನಾಯಿನರಿಗಳ ಪಾಲಾಗಿದೆ.
ಖುದ್ದು ವಾಜಪೇಯಿ ಅವರೇ ಹಾಸಿಗೆಯಿಂದ ಎದ್ದುಬಂದು ಅಡ್ವಾಣಿ ಮತ್ತು ಮೋದಿ ಅವರ ಕೈ-ಕೈ ಹಿಡಿದು ಮುನ್ನಡೆಸಿದರೂ ಪಕ್ಷದ ಕಾರ್ಯಕರ್ತರು ಚೇತರಿಸಿಕೊಳ್ಳುವುದು ದೂರದ ಮಾತಾಗಿದೆ. ಇತ್ತ ಜನರಿಗೂ ಅಷ್ಟೇ, ಅಡ್ವಾಣಿ ಬರೆದಿರುವ ಪತ್ರದಲ್ಲಿ ಸಾಲುಗಳ ಮಧ್ಯೆ ಅನುಮಾನದ ಹುತ್ತಗಳು ಗೋಚರಿಸುತ್ತಿವೆ. ಬೇರೆಯದೇ ಮುಖವಾಡಗಳು ಥಕ ಥೈ ಎನ್ನುತ್ತಿವೆ.
ಬಿಜೆಪಿ ಸಂಸದೀಯ ಮಂಡಳಿಯು 'ಅಡ್ವಾಣಿ ರಾಜೀನಾಮೆ ಅಂಗೀಕರಿಸೋಲ್ಲ; ಪಕ್ಷಕ್ಕೆ ಅಡ್ವಾಣಿ ಮಾರ್ಗದರ್ಶನ ಅತ್ಯಗತ್ಯ' ಎಂಬ ಒಕ್ಕಣೆಯ ಒಕ್ಕೊರಲಿನ ನಿರ್ಧಾರ ತೆಗೆದುಕೊಂಡಿದೆ. ಆರೆಸ್ಸೆಸ್ ನಾಯಕರೂ ಅಡ್ವಾಣಿಯ ಮನವೊಲಿಕೆ ಕಸರತ್ತು ನಡೆಸುತ್ತಿದ್ದಾರೆ. ಇನ್ನು ಕೇಂದ್ರಬಿಂದು ಮೋದಿ ಸಾಹೇಬರು ಅಡ್ವಾಣಿಗೆ ಫೋನ್ ಮಾಡಿ ರಾಜೀನಾಮೆ ಹಿಂಪಡೆಯಿರಿ ಎಂದು ಪರಿಪರಿಯಾಗಿ ಕೇಳಿಕೊಂಡಿದ್ದಾರೆ.
ಆದರೆ ಅತ್ತ ಕಡೆಯಿಂದ ಯಾವುದೇ ಪ್ರತಿಸ್ಪಂದನೆ ದೊರೆತಿಲ್ಲ.
ಬಿಜೆಪಿ ಈಗ ನಿಜಕ್ಕೂ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಒಂದು ವೇಳೆ, ಅಡ್ವಾಣಿ ವಾಪಸಾಗುವ ಪ್ರಮೇಯ ಏರ್ಪಟ್ಟರೆ ಅದರಿಂದ ಪಕ್ಷಕ್ಕೆ ಒಳಿತಾಗುತ್ತದೆ ಎನ್ನುವ ಹಾಗೂ ಇಲ್ಲ. ಏಕೆಂದರೆ ಅದೊಂದು ರೀತಿ ಅಡ್ವಾಣಿಯ ನಿರ್ಧಾರವನ್ನು ಒಪ್ಪಿದಂತಾಗುತ್ತದೆ. ಅದು ಡ್ಯಾಮೇಜು ಜತೆಗೆ ಡೇಂಜರು ಸಹ. ಏಕೆಂದರೆ ಅಡ್ವಾಣಿ ತಮ್ಮ ಪತ್ರದಲ್ಲಿ ಎತ್ತಿರುವ ಎಲ್ಲ ಪ್ರಶ್ನೆಗಳಿಗೂ ಪಕ್ಷದ ಮೌನವೇ ಉತ್ತರವಾಗಿ ಅಡ್ವಾಣಿ ಮಾತು ನಿಜ ಎಂಬುದು ಒಪ್ಪಿಕೊಂಡಂತಾಗುತ್ತದೆ.
ಅದು ಪಕ್ಷಕ್ಕೆ ನಿಜಕ್ಕೂ ಸೂಸೈಡಲ್ ಆಗುತ್ತದೆ. ಏಕೆಂದರೆ ಅಡ್ವಾಣಿ ಅವರು ಎತ್ತಿರುವ ಪ್ರಶ್ನೆಗಳು ನಿಜಕ್ಕೂ ಗಂಭೀರವಾಗಿವೆ. ಅದರಲ್ಲಿ ಬಿಜೆಪಿ ಗಳಿಸಿ/ಉಳಿಸಿಕೊಂಡಿದ್ದ ಮರ್ಯಾದೆಯನ್ನು ಸಾರಾಸಗಟಾಗಿ ಹರಾಜು ಹಾಕಲಾಗಿದೆ.
ಅಡ್ವಾಣಿ ಪತ್ರದಿಂದ ಬಿಜೆಪಿ ಒಡೆದ ಗಾಜಿನಂತಾಗಿದೆ ಅನ್ನುವುದಕ್ಕಿಂತ ಭೀಷ್ಮ ಪಿತಾಮಹ ವಜ್ರದಿಂದ ಪಕ್ಷವನ್ನು ನೀಟಾಗಿ ಎರಡು ಹೋಳಾಗಿ ಸೀಳಿದ್ದಾರೆ. ಒಂದು ಅಡ್ವಾಣಿ ಕ್ಯಾಂಪ್ ಮತ್ತೊಂದು ಸಹಜವಾಗಿಯೇ, ಅಡ್ವಾಣಿ ವಿರೋಧಿ ಗ್ಯಾಂಗ್ ಎಂದು. ಅಡ್ವಾಣಿ ಹಠಕ್ಕೆ ಮಣೆ ಹಾಕಿದರೆ ಮೋದಿಯನ್ನು ಬಿಟ್ಟುಕೊಡಬೇಕಾಗುತ್ತದೆ. ಚುನಾವಣೆಯ ಹಿತದೃಷ್ಟಿಯಿಂದ ಇದು ಅಸಾಧ್ಯದ ಮಾತು. ಆರೆಸ್ಸೆಸ್ ಈಗಾಗಲೇ ಸ್ಪಷ್ಟಪಡಿಸಿರುವಂತೆ ಅಡ್ವಾಣಿಯನ್ನು ಬೇಕಾದರೆ ಬಿಟ್ಟುಕೊಡುತ್ತೇವೆ; ಮೋದಿಯನ್ನು ಬಿಟ್ಟುಕೊಡುವುದಿಲ್ಲ ಎಂಬ ನಿರ್ಣಯಕ್ಕೆ ಆರೆಸ್ಸೆಸ್ ಬಂದಾಗಿದೆ.
ಆದರೆ ಇದು ಇಷ್ಟಕ್ಕೇ ನಿಲ್ಲುವುದಿಲ್ಲ. Pre-Advani resignation ಮತ್ತು Post-Advani resignation ಎಂಬ ಎರಡು ಕಾಲಘಟ್ಟಗಳನ್ನು ಗುರುತಿಸಿದಂತಾಗಿದೆ. ನಿಜಕ್ಕೂ ಪಕ್ಷಕ್ಕೆ ಸಂಕಷ್ಟ ತಂದಿರುವುದು ಈ ವ್ಯತ್ಯಾಸವೇ. ಏಕೆಂದರೆ ಪಕ್ಷದ ಭವಿಷ್ಯ ಅಡಗಿರುವುದು ಇದರಲ್ಲೇ.
ಏಕೆಂದರೆ ರಾಜೀನಾಮೆ ಪ್ರಹಸನದ ಒಂದು ದಿನಕ್ಕೆ ಮುಂಚೆ ಮೋದಿಗೆ ಪಟ್ಟ ಕಟ್ಟಿ ಆಡಳಿತ ಹಿಡಿಯಲು ಮೂರೇಗೇಣು ಎಂದು ಬೀಗಿದ್ದ ಪಕ್ಷ, ಅಡ್ವಾಣಿಯ ರಾಜೀನಾಮೆ ಪತ್ರವನ್ನು ಫಲ-ತಾಂಬೂಲದೊಂದಿಗೆ ತಟ್ಟೆಯಲ್ಲಿಟ್ಟು ಪ್ರತಿಪಕ್ಷಗಳಿಗೆ ಹಸ್ತಾಂತರಿಸಿದೆ. ಇದರಿಂದ ಮಿತ್ರ ಪಕ್ಷಗಳೂ ಘಾಸಿಗೊಂಡಿವೆ.
ಸದ್ಯಕ್ಕೆ ಅಡ್ವಾಣಿಯನ್ನು ಕೈಬಿಡುವುದೇ ಬಿಜೆಪಿಗೆ ಇರುವ ಏಕೈಕ ಮಾರ್ಗವಾಗಿದೆ.












Click it and Unblock the Notifications