ಅಪಘಾತ : ಬಿ.ಟಿ.ಲಲಿತಾ ನಾಯಕ್ ಸೋದರಿ ಸಾವು

ಭಾನುವಾರ ನಗರದ ಪೀಣ್ಯ ಬಳಿ ತುಮಕೂರು ರಸ್ತೆಯಲ್ಲಿ ಮಗನ ಜೊತೆ ಕುಮುದಾ ನಾಯಕ್ (52) ಬೈಕ್ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ, ಚೂಡಿದಾರದ ದುಪಟ್ಟಾ ಬೈಕ್ನ ಚಕ್ರಕ್ಕೆ ಸಿಲುಕಿ ಅವರ ಕೊರಳಿಗೆ ಸುತ್ತಿಕೊಂಡಿದೆ.
ದುಪಟ್ಟಾ ಎಳೆದ ರಭಸಕ್ಕೆ ಅವರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಕುಮುದಾ ಅವರು, ಲಲಿತಾ ನಾಯಕ್ ಅವರ ನಿವಾಸದಿಂದ ಎಚ್ಎಂಟಿ ಲೇಔಟ್ನಲ್ಲಿರುವ ತಮ್ಮ ಮನೆಗೆ ಮಗ ಪೃಥ್ವಿರಾಜ್ನೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದರು.
ಮಕ್ಕಳ ನೋಡಲು ಬಂದಿದ್ದರು : ನೆಹರು ಯುವ ಕೇಂದ್ರ ಚಿತ್ರದುರ್ಗದ ಜಿಲ್ಲಾ ಸಮನ್ವಯಾಧಿಕಾರಿಯಾಗಿದ್ದ ಕುಮುದಾ ನಾಯಕ್ ದಂಪತಿಗಳು, ಅಲ್ಲೇ ನೆಲೆಸಿದ್ದಾರೆ. ಮಕ್ಕಳಾದ ಪೃಥ್ವಿರಾಜ್, ಪ್ರತಿಮಾ ಮತ್ತು ಪಾರಿತೋಷಕ ಅವರ ವಿದ್ಯಾಭ್ಯಾಸಕ್ಕಾಗಿ ಎಚ್ಎಂಟಿ ಲೇಜೌಟ್ ನಲ್ಲಿ ಮನೆ ಮಾಡಿಕೊಂಡಿದ್ದಾರೆ.
ಪ್ರತಿ ಶನಿವಾರ ಬೆಂಗಳೂರಿಗೆ ಬಂದು ಮಕ್ಕಳೊಂದಿಗೆ ಕಾಲ ಕಳೆದು ಚಿತ್ರದುರ್ಗಕ್ಕೆ ಮರಳುತ್ತಿದ್ದರು. ಶನಿವಾರ ನಗರಕ್ಕೆ ಆಗಮಿಸಿದ್ದ ಕುಮುದಾ ನಾಯಕ್, ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ನಂತರ ಸೋದರಿ ಲಲಿತಾ ನಾಯಕ್ ನಿವಾಸಕ್ಕೆ ಹೋಗಿ ಅವರೊಂದಿಗೆ ಊಟ ಮಾಡಿ, ಅಲ್ಲಿಂದ ಹೊರಟಿದ್ದರು.
ಇಂದು ಅಂತ್ಯಸಂಸ್ಕಾರ : ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಆಶಿಹಾಳ ತಾಂಡದಲ್ಲಿ ಕುಮುದಾ ನಾಯಕ್ ಅವರ ಅಂತ್ಯಸಂಸ್ಕಾರ ಸೋಮವಾರ ನಡೆಯಲಿದೆ.












Click it and Unblock the Notifications