ದೇವೇಗೌಡರ JDSನಲ್ಲಿ ಒಂದಷ್ಟು ಸಂಚಲನಗಳು
ಬೆಂಗಳೂರು, ಜೂನ್ 6: ರಾಜ್ಯ ರಾಜಕೀದಯಲ್ಲಿ ಸದ್ಯದ ಮಟ್ಟಿಗೆ ಸಕ್ರಿಯವಾಗಿರುವ ಇಬ್ಬರು ಹಿರಿಯ ಘಟಾನುಘಟಿ 24/7 ರಾಜಕಾರಣಿಗಳು ಇತ್ತೀಚೆಗೆ ಜ್ಯೋತಿಷಿಯೊಬ್ಬರ ಮನೆಯಲ್ಲಿ ಸಂಧಿಸಿದ್ದರು ಎಂಬ ಸುದ್ದಿಗೆ ಜೀವ ಬಂದಿದ್ದು, ರಾಜ್ಯ ರಾಜಕೀಯದಲ್ಲಿ ಒಂದಷ್ಟು ಸಂಲನ ಸೃಷ್ಟಿಸಿದೆ.
ಪ್ರಸಕ್ತ ಸನ್ನಿವೇಶದಲ್ಲಿ ಜೆಡಿಎಸ್ ಏಕಾಂಗಿಯಾಗಿ ಹೋರಾಟ ನಡೆಸಿ, ಯಶ ಸಾಧಿಸುವುದು ಕಷ್ಟ ಕಷ್ಟ ಎಂಬ ಆಲೋಚನೆಗೆ ಬಿದ್ದಿರುವ ದೇವೇಗೌಡರು, ಕರ್ನಾಟಕದ ಮಿತಿಯೊಳಗೆತೃತೀಯ ರಂಗ ರಚಿಸಲು ಮುಂದಾಗಿದ್ದಾರೆ. ಇದೇ ಆಲೋಚನೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜತೆ ಈಗಾಗಲೇ ಪ್ರಾರಂಭಿಕ ಹಂತದ ಮಾತುಕತೆಯೂ ನಡೆದಿದೆ. ಸದ್ಯದಲ್ಲೇ ಶ್ರೀರಾಮುಲು ಜತೆಗೂ ಮಾತುಕತೆ ನಡೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಆದರೆ, ಕೆಜೆಪಿ ಜತೆ ಸೇರಿ ತೃತೀಯ ರಂಗ ಸ್ಥಾಪನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಗೆ ಸುತರಾಂ ಇಷ್ಟವಿಲ್ಲ. ಭ್ರಷ್ಟಾಚಾರದ ವಿಷಯದಲ್ಲಿ ಯಡಿಯೂರಪ್ಪ ವಿರುದ್ಧವೇ ಹೋರಾಟ ಮಾಡಿ ಮತ್ತೆ ಅವರ ಜತೆಯೇ ಕೈಜೋಡಿಸುವುದು ಸೂಕ್ತವಲ್ಲ ಎಂಬ ಸ್ಪಷ್ಟ/ ದಿಟ್ಟ ಅಭಿಪ್ರಾಯ ಕುಮಾರಸ್ವಾಮಿ ಅವರದ್ದಾಗಿದೆ.
ಮೈತ್ರಿಯ ಜತೆಗೆ ಜತೆಗೆ ಗೌಡರು ಈಗಾಗಲೇ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೂ ಚಾಲನೆ ನೀಡಿದ್ದಾರೆ. ಜನತಾ ಪರಿವಾರ ಮೂಲದ ನಾಯಕರು ಹಾಗೂ ನಿವೃತ್ತ ಐಎಎಸ್ ಅಧಿಕಾರಿಗಳಿಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ.

ತೃತೀಯ ರಂಗ ರಚನೆಗೆ ಮೂರು ಕಾರಣ
ರಾಜ್ಯದಿಂದ ಹೆಚ್ಚು ಸ್ಥಾನ ಪಡೆದರೆ ಮುಂದೆ ಕೇಂದ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನೂ ಮಣಿಸಬಹುದು.

ಸಿದ್ದರಾಮಯ್ಯ 'ಹರಕೆಯ ಕುರಿ':
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಕಡಿಮೆ ಸ್ಥಾನ ಬಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ 'ಹರಕೆಯ ಕುರಿ'ಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಕುಮಾರಸ್ವಾಮಿಗೆ OL ಸ್ಥಾನ ಭದ್ರತೆ:
ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಬಿಜೆಪಿ ಜತೆ ವಿಲೀನವಾಗದಂತೆ ತಡೆದು ವಿಧಾನಸಭೆಯಲ್ಲಿ ಪ್ರತಿಪಕ್ಷ ಸ್ಥಾನ (Opposition Leader) ಭದ್ರಪಡಿಸಿಕೊಳ್ಳುವ ಸದುದ್ದೇಶವೂ ಇದೆ.

ಬಚ್ಚೇಗೌಡರು JDS ತೆಕ್ಕೆಗೆ:
ಮೊನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿಯಲ್ಲಿದ್ದು ಸೋಲುಂಡಿರುವ, ಜೆಡಿಎಸ್ ಮಾಜಿ ನಾಯಕ ಬಿಎನ್ ಬಚ್ಚೇಗೌಡ ಅವರನ್ನು ಪಕ್ಷಕ್ಕೆ ಕರೆತರಲು ಮಾತುಕತೆ ನಡೆಸಿದ್ದು ಅವರನ್ನು ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

ಮಾಜಿ ಐಎಎಸ್ ಸಿದ್ದಯ್ಯಗೆ ಮಣೆ:
ಇನ್ನು, ಬಿಬಿಎಂಪಿ ಆಯುಕ್ತರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಕೋಲಾರ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಯಿದೆ.

ಅನಿತಾಗೆ ಮತ್ತೊಂದು ಅದೃಷ್ಟ ಪರೀಕ್ಷೆ
ಹಾಗೆಯೇ, ಮಂಡ್ಯದಿಂದ ಅಶೋಕ್ ಜಯರಾಂ ಅಥವಾ ಮಾಜಿ ಶಾಸಕ ಪುಟ್ಟರಾಜು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಅನಿತಾ ಕುಮಾರಸ್ವಾಮಿ, ತುಮಕೂರಿನಿಂದ ಮುದ್ದ ಹನುಮೇಗೌಡ ಅಥವಾ ಹುಲಿನಾಯ್ಕರ್, ಬೆಂಗಳೂರು ಉತ್ತರ ಕ್ಷೇತ್ರದಿಂದ ಎ ಕೃಷ್ಣಪ್ಪ ಸ್ಪರ್ಧೆಗಿಳಿಯುವ ಸೂಚನೆಗಳಿವೆ.

ಭವಾನಿ ರೇವಣ್ಣ ಈ ಬಾರಿಯೂ ಕಣಕ್ಕಿಲ್ಲ:
ಹಾಸನದಿಂದ ದೇವೇಗೌಡರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಅದರ ಉಸ್ತುವಾರಿಯನ್ನು ರೇವಣ್ಣ ಹಾಗೂ ಭವಾನಿ ರೇವಣ್ಣ ಅವರೇ ವಹಿಸಬೇಕಿದೆ. ಹಾಗಾಗಿ, ಭವಾನಿ ರೇವಣ್ಣ ಅವರನ್ನು ದೇವೇಗೌಡರು ಚುನಾವಣಾ ಕಣಕ್ಕಿಳಿಸುವುದಿಲ್ಲ ಎನ್ನಲಾಗಿದೆ.












Click it and Unblock the Notifications