ಸದನ ಸ್ವಾರಸ್ಯ : ಹಸಿರು ಟೀಶರ್ಟಲ್ಲಿ ಸದನಕ್ಕೆ ಬಂದ ಸಚಿವ

ವಾಕಿಂಗ್ ನಿಂದ ಬಂದ್ರಾ : ವಿಧಾನಪರಿಷತ್ ನಲ್ಲಿ ಇಂದು ಅರಣ್ಯ ಸಚಿವರ ಟಿ ಶರ್ಟ್ ಬಗ್ಗೆ ಸ್ವಾರಸ್ಯಕರವಾದ ಚರ್ಚೆ ನಡೆಯಿತು. ಪರಿಷತ್ ಕಲಾಪದಲ್ಲಿ ಗುಟ್ಕಾ ನಿಷೇಧ ಮೇಲಿನ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಅರಣ್ಯ ಸಚಿವ ರಮಾನಾಥ್ ರೈ ಆಗಮಿಸಿದರು. ಸದನದಲ್ಲಿ ಮಾತನಾಡುತ್ತಿದ್ದ ವಿಪಕ್ಷ ನಾಯಕ ಡಿ.ವಿ.ಸದಾನಂಗೌಡ ಅರಣ್ಯ ಸಚಿವರು ಹಸಿರು ಹಸಿರಾಗಿ ಕಾಣುತ್ತಿದ್ದಾರೆ.
ಟಿ ಶರ್ಟ್ ಧರಿಸಿ ಸದನಕ್ಕೆ ಆಗಮಿಸಿದ್ದಾರೆ. ಬಹುಶಃ ವಾಕಿಂಗ್ ಹೋದವರು ಹಾಗೆಯೇ ಸದನಕ್ಕೆ ಆಗಮಿಸಿರಬೇಕು ಎಂದು ಛೇಡಿಸಿದರು. ಸದಾನಂದ ಗೌಡರ ಮಾತಿಗೆ ಉತ್ತರಿಸಿದ ರಮಾನಾಥ ರೈ, ಇಂದು ಪರಿಸರ ದಿನ ಆದ್ದರಿಂದ ಹಸಿರು ಶರ್ಟ್ ಧರಿಸಿದ್ದೇನೆ ನನ್ನನ್ನು ಅಭಿನಂದಿಸಿ ಎಂದು ಕೇಳಿಕೊಂಡರು.
ಹೌದು ನೀವು ಹಸಿರಾಗೇ ಇದ್ದೀರಿ ಆದರೆ, ಗುಟ್ಕಾ ನಿಷೇಧ ಮಾಡಿದ್ದರಿಂದ ಅಡಿಕೆ ಬೆಳೆ ಕೆಂಪಾಗುತ್ತಿದೆ ಎಂದು ತಮ್ಮ ಗುಟ್ಕಾ ನಿಷೇಧದ ಬಗ್ಗೆ ಮುಂದುವರೆಸಿದರು. ರಮಾನಾಥ್ ರೈ ಅವರ ಹಸಿರು ಶರ್ಟ್, ಕಲಾಪದ ನಡುವೆ ಸ್ಪಲ್ಟ ನಗುವಿನ ಅಲೆ ಉಕ್ಕಿಸಿತ್ತು.
ಇಂದು ಗೈರು : ಆಡಳಿತ ಪಕ್ಷದ ನಾಯಕ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದು, ಸದನದಲ್ಲಿ ಹಾಜರಿರಲಿಲ್ಲ. ಆಡಳಿತ ಪಕ್ಷದ ಅನೇಕ ಶಾಸಕರು ಮತ್ತು ಸಚಿವರು ಇಂದು ಗೈರು ಹಾಜರಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಕೋಪಕ್ಕೆ ತುತ್ತಾದರು. ಆಡಳಿತ ಪಕ್ಷದ ಸದಸ್ಯರಿಗೆ ಸದನಕ್ಕೆ ಬರದಷ್ಟು ಕೆಲಸಗಳು ಎಂದು ಬಿಜೆಪಿ ಶಾಸಕರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಹಿಂದಿನ ಸುದ್ದಿ : ಬುಧವಾರ ಬೆಳಗ್ಗೆ 11 ಗಂಟೆಗೆ ಅಧಿವೇಶನ ಪ್ರಾರಂಭವಾಯಿತು. ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ, ರಮಾನಾಥ್ ರೈ ಅವರು ವಿಧಾನಸೌಧದ ಗೋಡೆ ಒಡೆಸಿದ ಪ್ರಕರಣದ ಬಗ್ಗೆ ಮೊದಲು ಚರ್ಚೆ ಆಗಬೇಕು ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಮನವಿ ಮಾಡಿದರು.
ಶಾಸಕ ಮತ್ತು ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ, ಯಡಿಯೂರಪ್ಪ ಹೇಳಿದ ವಿಚಾರಕ್ಕೆ ಬೆಂಬಲ ಸೂಚಿಸಿ, ವಾಸ್ತು ಸರಿ ಇಲ್ಲ ಎಂದು ಕಿವಿ ಮತ್ತು ಮೂಗನ್ನು ಬೇರೆ ಸ್ಥಳದಲ್ಲಿ ಇಡಲಾಗುತ್ತದೆಯೇ? ಯಾವುದೇ ಸರ್ಕಾರ ಬಂದರೂ, ವಿಧಾನಸೌಧದ ಗೋಡೆ ಒಡೆಯಬಾರದು ಎಂದು ನಿಯಮ ರೂಪಿಸಿ ಎಂದು ಒತ್ತಾಯಿಸಿದರು. (ಗೋಡೆ ಒಡೆಸಿದ ಅರಣ್ಯ ಸಚಿವರು!)
ಸದನದಲ್ಲಿ ಹಾಜರಿದ್ದ ರಮಾನಾಥ್ ರೈ ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ ಕೊಠಡಿ ತುಂಬಾ ಚಿಕ್ಕದಾಗಿದೆ. ಅಲ್ಲಿ ಕೆಲಸ ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ಕೊಠಡಿ ನವೀಕರಣಕ್ಕೆ ಚಾಲನೆ ನೀಡಲಾಗಿದೆ. ಇದಕ್ಕೆ ಅನುಮತಿಯನ್ನು ಪಡೆಯಲಾಗಿದೆ. ಉತ್ತಮ ಕೊಠಡಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ, ಅದರ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅವರು ಗೋಡೆ ಒಡೆಸಿ ಹಾಕಿದ್ದಾರೆ ಎಂದು ಅಧಿಕಾರಿಗಳ ಮೇಲೆ ಗೂಬೆ ಕೂರಿಸಿದರು.












Click it and Unblock the Notifications