ಆರ್ ಟಿಐ ಅಡಿಗೆ ಬರಲು ಪಕ್ಷಗಳಿಗೆ ಅಂಜಿಕೆ

ಮಾಹಿತಿ ಹಕ್ಕು ಕಾಯ್ದೆ ಸೆಕ್ಷನ್ 2 (ಎಚ್) ವ್ಯಾಪ್ತಿಗೆ ಎಲ್ಲಾ ರಾಜಕೀಯ ಪಕ್ಷಗಳು ಒಳಪಡಲಿವೆ ಎಂದು ಕೇಂದ್ರ ಮಾಹಿತಿ ಆಯೋಗ(ಸಿಐಸಿ) ಸೋಮವಾರ(ಜೂ.3) ಸ್ಪಷ್ಟಪಡಿಸಿದೆ. ಈ ಮೂಲಕ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳ ಖರ್ಚು ವೆಚ್ಚ, ಸೇರಿದಂತೆ ಅನೇಕ ಚಟುವಟಿಕೆ ಮೇಲೆ ಜನಸಾಮಾನ್ಯರು ಕ್ಷ ಕಿರಣ ಬೀರಲು ಸಾಧ್ಯವಾಗಿದೆ.
ಸಿಐಸಿ ಕ್ರಮವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಅದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ. ಇಂತಹ ಸಾಹಸಿ ಕ್ರಮಗಳಿಂದ ಪ್ರಜಾಪ್ರಭುತ್ವ ಸಂಸ್ಥೆಗಳಿಗೆ ಧಕ್ಕೆಯಾಗಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ್ ದ್ವಿವೇದಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಾಜಕೀಯದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸೋಮವಾರ ಕೇಂದ್ರ ಮಾಹಿತಿ ಆಯೋಗ(ಸಿಐಸಿ) ಇಂಥದೊಂದು ಕ್ರಾಂತಿಕಾರಿ ಆದೇಶ ನೀಡಿದೆ.
ಜೆಡಿಯು ವಿರೋಧ: ಲೆಕ್ಕಾಚಾರ ಇಡಲು ರಾಜಕೀಯ ಪಕ್ಷಗಳು ಏನು ಅಂಗಡಿಗಳೇ? ರಾಜಕೀಯ ಪಕ್ಷಗಳ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿರುತ್ತದೆ. ಹಲವು ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆಗೆ ಜನಪ್ರತಿನಿಧಿಗಳು ತಮ್ಮ ಆಸ್ತಿ ವಿವರ ಸಲ್ಲಿಸಿರುತ್ತಾರೆ. ಸಣ್ಣ ಪುಟ್ಟ ದೋಷಗಳಿಗೂ ಎರಡು ಸಂಸ್ಥೆಗಳಿಂದ ನೋಟಿಸ್ ಬರುತ್ತದೆ. ಪರಿಸ್ಥಿತಿ ಹೀಗಿರುವಾಗ ಸಿಐಸಿ ಮಧ್ಯ ಪ್ರವೇಶ ಅನಗತ್ಯ ಎಂದು ಜೆಡಿಯು ಮುಖಂಡ ಶರದ್ ಯಾದವ್ ಹೇಳಿದ್ದಾರೆ.
ಪಾರದರ್ಶಕತೆ ಹಾಗೂ ಉತ್ತರದಾಯಿತ್ವದ ಪ್ರಶ್ನೆ ಬಂದಾಗ ಯಾವುದೇ ಕ್ರಮಕ್ಕೆ ಬಿಜೆಪಿ ಆಕ್ಷೇಪಿಸುವುದಿಲ್ಲ ಎಂದು ಬಿಜೆಪಿ ವಕ್ತಾರ ಕ್ಯಾ. ಅಭಿಮನ್ಯು ಹೇಳಿದ್ದಾರೆ. ಸಿಪಿಐ ಹಾಗೂ ಸಿಪಿಐ ಎಂ ಪಕ್ಷಗಳಲ್ಲಿ ಆದೇಶವನ್ನು ಒಪ್ಪಿಕೊಳ್ಳುವ ಬಗ್ಗೆ ಒಮ್ಮತ ಮೂಡಿಲ್ಲ.
ಆರ್ ಟಿಐ ಅರ್ಜಿಯೊಂದರಡಿ ಕೇಳಿದ ಪ್ರಶ್ನೆಗಳಿಗೆ ಕಾಂಗ್ರೆಸ್, ಬಿಜೆಪಿ, ಸಿಪಿಐ-ಎಂ, ಸಿಪಿಐ, ಎನ್ಸಿಪಿ ಮತ್ತು ಬಿಎಸ್ಪಿ ಪಕ್ಷಗಳು ಉತ್ತರ ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಮಾಹಿತಿ ಆಯುಕ್ತ ಸತ್ಯಾನಂದ ಮಿಶ್ರಾ, ಮಾಹಿತಿ ಆಯುಕ್ತ ಎಂ.ಎಲ್. ಶರ್ಮಾ ಮತ್ತು ಅನ್ನಪೂರ್ಣಾ ದೀಕ್ಷಿತ್ ಅವರಿದ್ದ ಪೂರ್ಣ ಪೀಠ ಸೂಚಿಸಿದೆ.
6 ವಾರಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮಾಹಿತಿ ಅಧಿಕಾರಿ(CPIO)ಗಳನ್ನು ನೇಮಿಸಬೇಕು. ದೇಣಿಗೆ ಹಾಗೂ ಇತರೆ ಖರ್ಚಿನ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಮುಖ್ಯ ಮಾಹಿತಿ ಆಯುಕ್ತ ಸತ್ಯಾನಂದ ಮಿಶ್ರಾ, ಅನ್ನಪೂರ್ಣ ದೀಕ್ಷಿತ್ ಹಾಗೂ ಎಂಎಲ್ ಶರ್ಮ ಅವರನ್ನೊಳಗೊಂಡ ಕೇಂದ್ರೀಯ ಮಾಹಿತಿ ಆಯೋಗ(ಸಿಐಸಿ)ದ ತಂಡ ಈ ಮಹತ್ವದ ಆದೇಶ ನೀಡಿದೆ.
ಅಣ್ಣಾ ಹಜಾರೆ ತಂಡದ ಪ್ರಮುಖ ಸದಸ್ಯ, ಆರ್ ಟಿಐ ಪ್ರತಿಪಾದಕ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹಾಗೂ ಆರ್ಟಿಐ ಕಾರ್ಯಕರ್ತ ಸುಭಾಷ್ ಅಗರವಾಲ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿ, ರಾಜಕೀಯ ಪಕ್ಷಗಳನ್ನು ಆರ್ ಟಿಐ ವ್ಯಾಪ್ತಿಗೆ ತರುವಂತೆ ಕೋರಿದ್ದರು.












Click it and Unblock the Notifications