NCTC : ನಿಮಗೆ ಗೊತ್ತಿರಬೇಕಾದ 10 ಸಂಗತಿಗಳು
ನವದೆಹಲಿ, ಜೂ. 5: ಉಗ್ರರ ನಿಗ್ರಹಕ್ಕಾಗಿ ಪ್ರತ್ಯೇಕ ಕೇಂದ್ರ ಸ್ಥಾಪಿಸಲು ಯುಪಿಎ ಸರ್ಕಾರ ಮುಂದಾಗಿದೆ. ಆದರೆ, ಸಿಬಿಐ ನಂತೆ NCTC ಕೂಡಾ ದುರ್ಬಳಕೆಯಾಗುವ ಭೀತಿಯನ್ನು ಗುಜರಾತ್ ಸಿಎಂ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ.
ದೇಶದ ಮುಖ್ಯಮಂತ್ರಿಗಳು(ಅಥವಾ ಅವರ ಪ್ರತಿನಿಧಿಗಳು) ಗೃಹ ಸಚಿವರುಗಳು, ಕೇಂದ್ರಾಡಳಿತ ಪ್ರದೇಶದ ಪ್ರತಿನಿಧಿಗಳು ಬುಧವಾರ(ಜೂ.5) ಸಭೆ ಸೇರಿ ಆಂತರಿಕ ಭದ್ರತೆ ಬಗ್ಗೆ ಚರ್ಚೆ ನಡೆಸಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್, ವಿತ್ತ ಸಚಿವ ಪಿ ಚಿದಂಬರಂ ಅವರ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಆಂಧ್ರಪ್ರದೇಶ ಸಿಎಂ ಕಿರಣ್ ಕುಮಾರ್ ರೆಡ್ಡಿ, ಮಹಾರಾಷ್ಟ್ರ ಸಿಎಂ ಪೃಥ್ವಿರಾಜ್ ಚೌವಾಣ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದಾರೆ.
ಸಭೆಯಲ್ಲಿ ಬಿಜೆಪಿಯ ನರೇಂದ್ರ ಮೋದಿ vs ಯುಪಿಎಯ ಚಿದಂಬರಂ ನಡುವೆ ಭಾರಿ ಚರ್ಚೆ ನಡೆದಿದೆ. ಅಂದ ಹಾಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಎನ್ ಸಿಟಿಸಿ ಅಷ್ಟೊಂದು ಅಧಿಕಾರ ಯಾಕ್ರಪ್ಪ ಎಂದಿದ್ದಾರಂತೆ. ಈ ನಡುವೆ ನ್ಯಾಷನಲ್ ಕೌಂಟರ್ ಟೆರರಿಸಂ ಸೆಂಟರ್ (NCTC) ಬಗ್ಗೆ 10 ಪ್ರಮುಖ ಸಂಗತಿಗಳನ್ನು ಮೊದಲು ತಿಳಿಯೋಣ...ಸುದ್ದಿ ಮೂಲ: ನಿತಿ ಸೆಂಟ್ರಲ್

ಯುಎಸ್ ಎ ಮಾದರಿ
ಯುಎಸ್ ಎ ನಲ್ಲಿರುವ ಉಗ್ರ ನಿಗ್ರಹ ದಳದ ಮಾದರಿಯಲ್ಲಿ ಫೆಡರಲ್ ಭಯೋತ್ಪಾದನಾ ವಿರೋಧಿ ಘಟಕ ಸ್ಥಾಪನೆಗೆ ಯುಪಿಎ ಮುಂದಾಗಿದೆ ಇದಕ್ಕೆ ನ್ಯಾಷನಲ್ ಕೌಂಟರ್ ಟೆರರಿಸಂ ಸೆಂಟರ್ (NCTC) ಎಂದು ಹೆಸರಿಡಲಾಗಿದೆ.

ಚಿದಂಬರಂ ಆಲೋಚನೆ
26/11ರ ಮುಂಬೈ ಉಗ್ರರ ದಾಳಿ ನಡೆದ ನಂತರವೇ ಈ ಪ್ರಸ್ತಾವನೆ ಸರ್ಕಾರದ ಮುಂದೆ ಬಂದಿತ್ತು. ಅಂದು ಪಿ ಚಿದಂಬರಂ ಅವರು ಗೃಹ ಸಚಿವರಾಗಿದ್ದರು ಎಂಬುದು ಗಮನಾರ್ಹ. ಭಾರತದಲ್ಲಿ ತ್ವರಿತಗತಿಯಲ್ಲಿ ಉಗ್ರರ ವಿರುದ್ಧ ಸಮರ ಸಾರಲು ಪ್ರತ್ಯೇಕ ಕೇಂದ್ರ ಅಗತ್ಯವಿದೆ ಎಂದು ಯುಪಿಎ ಹಿರಿಯ ನಾಯಕರು ನಿರ್ಧರಿಸಿದರು.

ಆರಂಭದಲ್ಲೇ ವಿರೋಧ
ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ NCTC ಯನ್ನು ಸುಮಾರು 9 ಕ್ಕೂ ಅಧಿಕ ಮುಖ್ಯಮಂತ್ರಿಗಳು ವಿರೋಧಿಸಿದ್ದಾರೆ. ವಿರೋಧ ವ್ಯಕ್ತಪಡಿಸಿರುವ ರಾಜ್ಯಗಳಲ್ಲಿ ಬಹುತೇಕ ಉಗ್ರರ ದಾಳಿ ಟಾರ್ಗೆಟ್ ಹೊಂದಿರುವ ನಗರಗಳಿದೆ ಎಂಬುದು ವಿಶೇಷ

ರಾಜ್ಯಗಳಿಂದ ಏಕೆ ವಿರೋಧ
NCTC ಮಾದರಿಯ ಕೇಂದ್ರಗಳ ಸ್ಥಾಪನೆಯಿಂದ ಸ್ಥಳೀಯ ಆಡಳಿತದ ಹಕ್ಕು ಕಳೆದುಕೊಂಡಂತೆ ಆಗುತ್ತದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಗೌರವಿಸುವಂತಿರಬೇಕು. ರಾಜ್ಯಗಳಿಗೆ ಈಗಿರುವ ಸ್ಥಾನ ಮಾನ ಮಾನ್ಯತೆ ಜೊತೆ NCTC ಕಾರ್ಯ ನಿರ್ವಹಿಸುವಂತಿದ್ದರೆ ಮಾತ್ರ ಒಪ್ಪಿಕೊಳ್ಳಲು ಸಾಧ್ಯ.

ಐಬಿ ಅಡಿಯಲ್ಲಿ ಎನ್ ಸಿಟಿಸಿ
ರಿಯಲ್ ಟೈಮ್ ಮಾಹಿತಿಯೊಂದಿಗೆ ಕಾರ್ಯ ನಿರ್ವಹಿಸಲಿರುವ NCTC ಬಹುತೇಕ ರಾಜ್ಯಗಳಲ್ಲಿ ಸಣ್ಣ ಕಚೇರಿ ಸ್ಥಾಪಿಸಲಿದೆ. ಈ ಕಚೇರಿಗಳ ಮುಖ್ಯಸ್ಥರಾಗಿ ಗುಪ್ತಚರ ಇಲಾಖೆ(IB) ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಇವರು ಕೇಂದ್ರ ಗೃಹ ಇಲಾಖೆಗೆ ಪ್ರತಿ ಹೆಜ್ಜೆಯ ವರದಿ ನೀಡಬೇಕಾಗುತ್ತದೆ.

ರಾಜ್ಯಗಳ ಸ್ವಯುತ್ತತ್ತೆ ಪ್ರಶ್ನೆ
ಪ್ರತಿ ರಾಜ್ಯಗಳಿಗೂ ತನ್ನದೇ ಆದ ಸುರಕ್ಷತಾ ನಿಯಮಗಳಿರುತ್ತದೆ. ಭದ್ರತಾ ವಿಷಯದಲ್ಲಿ ರಾಜ್ಯಗಳು ಗುಪ್ತಚರ ಇಲಾಖೆಯ ಮಾಹಿತಿಗೆ ಬದ್ಧವಾಗಿರುತ್ತದೆ. ಆದರೆ, NCTC ಸ್ಥಾಪಿತವಾದರೆ, ಎಲ್ಲಾ ಮಾಹಿತಿಗಳು ಕೇಂದ್ರಕ್ಕೆ ರವಾನೆಯಾಗುತ್ತದೆ.
ಉದಾ: ಕಾಂಗ್ರೆಸ್ಸೇತರ ಸರ್ಕಾರ ಇರುವ ರಾಜ್ಯಗಳ ಆಂತರಿಕ ಭದ್ರತಾ ಮಾಹಿತಿ ಕೂಡಾ ಗೃಹ ಇಲಾಖೆಗೆ ತಲುಪುತ್ತದೆ. ರಾಜ್ಯಗಳ ಸ್ವಯುತ್ತತ್ತೆಗೆ ಇದು ಧಕ್ಕೆಯಾಗುವ ಸಂಭವವೇ ಹೆಚ್ಚು.
ಯಾರ ಮೇಲೆ ಬೇಕಾದರೂ ದಾಳಿ
ಯಾವುದೇ ಮುನ್ಸೂಚನೆ ಇಲ್ಲದೆ ಶಂಕಿತರ ಮೇಲೆ NCTC ಅಧಿಕಾರಿಗಳು ದಾಳಿ ನಡೆಸಬಹುದಾಗಿದೆ. ಇದು ಎಲ್ಲಾ ರಾಜ್ಯಗಳಿಗೂ ಅನ್ವಯಿಸಲಿದೆ. ಭಯೋತ್ಪಾದನಾ ಸಂಬಂಧಿತ ಕಾರಣ ನೀಡಿ ಯಾರನ್ನು ಬೇಕಾದರೂ ಬಂಧಿಸಬಹುದಾಗಿದೆ. ಈ ಬಗ್ಗೆ ಐಬಿ ಹಾಗೂ ಗೃಹ ಇಲಾಖೆ ಮಾತ್ರ ಮಾಹಿತಿ ಇರುತ್ತದೆ. ಆ ರಾಜ್ಯದ ಮುಖ್ಯಮಂತ್ರಿಗೂ ಏನು ತಿಳಿಯುವುದಿಲ್ಲ.

ಎಲ್ಲವೂ ರಿಯಲ್ ಟೈಮ್
NCTC ಕೇಳಿದ ಮಾಹಿತಿಯನ್ನು ಒಪ್ಪಿಸುವುದಷ್ಟೇ ರಾಜ್ಯಗಳ ಕರ್ತವ್ಯ. ಯಾವುದೇ ಗುಪ್ತ ವಿಷಯವನ್ನು ಅವರು ರಾಜ್ಯಗಳಿಂದ ಪಡೆಯಬಹುದು. ರಿಯಲ್ ಟೈಮ್ ಮಾಹಿತಿ ಅವಶ್ಯವಾದ್ದರಿಂದ ರಿಯಲ್ ಟೈಮ್ ನಲ್ಲಿ ಎಲ್ಲಾ ಚಲನವಲನಗಳನ್ನು ಟ್ರ್ಯಾಕ್ ಮಾಡಲಾಗುತ್ತದೆ.

NCTC ಬಿಗ್ ಬಾಸ್ ಕಣ್ರಪ್ಪ
NCTC ಬಯಸಿದರೆ ಪೊಲೀಸ್, ಕಮ್ಯಾಂಡೋ ಸೇರಿದಂತೆ ಯಾವುದೇ ಪಡೆಯನ್ನು ಒದಗಿಸಬೇಕಾಗುತ್ತದೆ. ನ್ಯಾಷನಲ್ ಸೆಕ್ಯುರಿಟಿ ಗಾರ್ಡ್(ಎನ್ ಎಸ್ ಜಿ) ಕಮ್ಯಾಂಡೋಗಳು NCTC ಗೆ ನೆರವಾಗಬೇಕಾಗುತ್ತದೆ.

NCTC ಸ್ಥಾಪನೆ ಸಾಧ್ಯವೇ?
ಸುಮಾರು 9 ರಿಂದ 10 ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮತನ ಕಳೆದುಕೊಳ್ಳುವ ಭೀತಿಯಿಂದ NCTCಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಕೆಲವೊಂದು ನಿಯಮಗಳ ಬದಲಾವಣೆಗಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಗ್ರಹಿಸಿದ್ದಾರೆ. ನರೇಂದ್ರ ಮೋದಿ ಹೇಳಿದಂತೆ NCTC ರಾಜಕೀಯ ಪಕ್ಷಗಳ ಕೈಗೊಂಬೆಯಾಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ











Click it and Unblock the Notifications