ಶೋಭಾ ಮಧ್ಯಸ್ಥಿಕೆ: RSSನಿಂದ ಯಡಿಯೂರಪ್ಪಗೆ ಗಾಳ

ಶೋಭಾ ಕರಂದ್ಲಾಜೆ ಮಧ್ಯಸ್ಥಿಕೆಯಲ್ಲಿ:
ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪ್ ಕರೆತರಲು ಆರೆಸ್ಸೆಸ್ ಪ್ರಯತ್ನ ಆರಂಭಿಸಿದೆ. ಈ ಸಂಬಂಧ ರಾಜ್ಯ ಬಿಜೆಪಿ ಮುಖಂಡರ ಅಭಿಪ್ರಾಯ ಸಂಗ್ರಹಕ್ಕೆ ಆರೆಸ್ಸೆಸ್ ಮುಂದಾಗಿದೆ ಎನ್ನಲಾಗಿದೆ. ಕುತೂಹಲದ ಸಂಗತಿಯೆಂದರೆ ಶೋಭಾ ಕರಂದ್ಲಾಜೆ ಮಧ್ಯಸ್ಥಿಕೆಯಲ್ಲಿ ಯಡಿಯೂರಪ್ಪಗೆ ಗಾಳ ಹಾಕಲಾಗುತ್ತಿದೆ. ಅಂದಹಾಗೆ, ಶೋಭಾ ಮತ್ತು ಬಿಎಸ್ವೈ ಸದ್ಯಕ್ಕೆ ಧರ್ಮಸ್ಥಳದ ಶಾಂತಿಧಾಮದಲ್ಲಿ ಕಳೆದ ವಾರ ವೀಕೆಂಡ್ ಚಿಕಿತ್ಸೆಗೆಂದು ದಾಖಲಾಗಿದ್ದರು.
ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡು ಮಾಜಿ ಮುಖ್ಯಮಂತ್ರಿಯನ್ನು ಬಿಜೆಪಿಗೆ ಮರಳಿ ಕರೆತರುವ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲಿಸಲು ಪಕ್ಷದ ಮಾತೃ ಸಂಸ್ಥೆ ಎನಿಸಿಕೊಂಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಗಂಭೀರ ಪ್ರಯತ್ನ ಆರಂಭಿಸಿದೆ.
ಯಡಿಯೂರಪ್ಪ ನಾಯಕತ್ವ ತಾಕತ್ತನ್ನು ಅರಿತಿರುವ ಆರೆಸ್ಸೆಸ್, ವಿಧಾನಸಭಾ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಪಕ್ಷವನ್ನು ಮತ್ತೆ ಬಲಪಡಿಸಲು ಬಿಎಸ್ವೈ ಅತ್ಯಗತ್ಯ ಎಂಬುದು ಸಂಘ ಪರಿವಾರದ ಮುಖಂಡರಿಗೆ ಮನವರಿಕೆಯಾದಂತಿದೆ. ಹಾಗಾಗಿ, ಅವರು ಬಿಜೆಪಿಯ ಪ್ರಮುಖ ಶಾಸಕರು ಹಾಗೂ ಮುಖಂಡರೊಂದಿಗೆ ವೈಯಕ್ತಿಕವಾಗಿ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆರೆಸ್ಸೆಸ್ ಕಾರಸ್ಥಾನವಾದ 'ಕೇಶವ ಶಿಲ್ಪ'ಕ್ಕೆ ಒಬ್ಬೊಬ್ಬರನ್ನಾಗಿ ಕರೆಸಿಕೊಂಡು ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿನ ಪಕ್ಷದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೆ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು? ಅದಕ್ಕಾಗಿ ಯಡಿಯೂರಪ್ಪ ಅವರನ್ನು ವಾಪಸ್ ಕರೆತರಬೇಕೆ? ಯಡಿಯೂರಪ್ಪ ಅವರನ್ನು ಕರೆತರದಿದ್ದರೆ ಪರಿಸ್ಥಿತಿ ಏನಾಗುತ್ತದೆ? ಎಂಬ ಪ್ರಶ್ನೆಗಳನ್ನು ಪಕ್ಷದ ಮುಖಂಡರ ಮುಂದಿಟ್ಟು, ಅವರಿಂದ ಮಹತ್ವದ ಮಾಹಿತಿ ಸಂಗ್ರಹಿಸುತ್ತಿದೆ ಎನ್ನಲಾಗಿದೆ.
ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಿಜೆಪಿ ರಾಷ್ಟ್ರೀಯ ನಾಯಕರಿಗೆ ಯಡಿಯೂರಪ್ಪ ಅವರನ್ನು ಕರೆತರುವ ಕುರಿತು ತಮ್ಮ ಅಭಿಪ್ರಾಯವನ್ನು ರವಾನಿಸಲಿದ್ದಾರೆ ಎಂದು ಆರೆಸ್ಸೆಸ್ ವಿಶ್ವಸನೀಯ ಮೂಲಗಳು ತಿಳಿಸಿವೆ.
ಬಿಜೆಪಿ ಶಾಸಕರೊಂದಿಗಿಷ್ಟೇ ಅಲ್ಲ ಸಂಘದ ಮುಖಂಡರು ಯಡಿಯೂರಪ್ಪ ಅವರನ್ನೂ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕಾಗಿ ಕಟ್ಟರ್ ಆರೆಸ್ಸೆಸ್ ಕಾರ್ಯಕರ್ತೆ, ಯಡಿಯೂರಪ್ಪಗೆ ಆಪ್ತರಾದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಜತೆಗೆ ಮಾತುಕತೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಕರಂದ್ಲಾಜೆ ಅವರು 'ಕೇಶವ ಶಿಲ್ಪ'ಕ್ಕೆ ಪದೇ ಪದೇ ಭೇಟಿ ಕೊಡುತ್ತಿದ್ದಾರೆ. ಸಂಘದ ಮುಖಂಡರೊಂದಿಗೆ ಸಮಾಲೋಚನೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ಅವರನ್ನು ಕರೆತರಲು ರಾಜ್ಯ ಬಿಜೆಪಿ ನಾಯಕರು ಹಾಗೂ ರಾಷ್ಟ್ರೀಯ ನಾಯಕರಾದ ಲಾಲ್ಕೃಷ್ಣ ಅಡ್ವಾಣಿ ಸುಲಭವಾಗಿ ಒಪ್ಪುತ್ತಾರಾ ಎಂಬ ಪ್ರಶ್ನೆಯೂ ದೊಡ್ಡದಾಗಿಯೇ ಎದುರಾಗಿದೆ. ಅದೇ ರೀತಿ ಯಡಿಯೂರಪ್ಪ ಅವರೂ ಯಾವುದೇ ಷರತ್ತುಗಳಿಲ್ಲದೆ ಬಿಜೆಪಿಯನ್ನು ಸೇರಲು ಒಪ್ಪಿಕೊಳ್ಳುತ್ತಾರೆ ಎಂಬುದನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.
ಇದಕ್ಕಾಗಿಯೇ ಶಾಸಕರು ಹಾಗೂ ಮುಖಂಡರ ಅಭಿಪ್ರಾಯದ ನಂತರ ಬಿಜೆಪಿ ನಾಯಕರು ಮತ್ತು ಯಡಿಯೂರಪ್ಪ ಅವರಿಬ್ಬರಿಗೂ ಸರಿಹೋಗುವಂಥ ಸಂಧಾನ ಸೂತ್ರವನ್ನೂ ರೂಪಿಸಲು ಸಂಘ ಪರಿವಾರದ ಮುಖಂಡರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications