ಕಾರ್ಪೋರೇಟರ್ ರಮೇಶ್ ವಿರುದ್ಧ ಬಿಬಿಎಂಪಿ ಬಂದ್
ಬೆಂಗಳೂರು, ಮೇ.30: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕಚೇರಿ ಸಹಾಯಕರೊಬ್ಬರ ಕೆನ್ನೆಗೆ ಬಾರಿಸಿದ ಆರೋಪ ಹೊತ್ತಿರುವ ಕಾರ್ಪೊರೇಟರ್ ರಮೇಶ್ ಈಗ ಪ್ರತಿಭಟನೆಯ ಬಿಸಿ ಎದುರಿಸುತ್ತಿದ್ದಾರೆ.
ಬಿಬಿಎಂಪಿ ಯಡಿಯೂರು ವಾರ್ಡ್ ಕಚೇರಿ ಸಹಾಯಕ ಈ. ಸುರೇಶ್ ಅವರ ಕೆನ್ನೆಗೆ ಬಾರಿಸಿದ ಯಡಿಯೂರು ವಾರ್ಡ್ ಬಿಬಿಎಂಪಿ ಸದಸ್ಯ ಬಿಜೆಪಿ ಪಕ್ಷದ ಎನ್ ಆರ್ ರಮೇಶ್ ಅವರ ವಿರುದ್ಧ ಬಿಬಿಎಂಪಿ ನೌಕರರು ಗುರುವಾರ(ಮೇ.30) ಪ್ರತಿಭಟನೆ ನಡೆಸಿದ್ದಾರೆ.
ಯಡಿಯೂರನ್ನು ಬೆಂಗಳೂರಿನ ನಂ.1 ವಾರ್ಡ್ ಮಾಡುವ ಕನಸು ಹೊತ್ತಿದ್ದ ಎನ್ ಆರ್ ರಮೇಶ್ ಅವರಿಗೆ ಇದರಿಂದ ಭಾರಿ ಮುಜುಗರ ಅನುಭವಿಸುವಂತಾಗಿದೆ.
ಆರು ರಸ್ತೆಗಳು ಕೂಡುವ ಸೌತ್ ಎಂಡ್ ವೃತ್ತದ ನಡುವೆ ಖಾಲಿಯಾಗಿದ್ದ ಈ ಅನುಪಯುಕ್ತ ಜಾಗವನ್ನೇ ಬಳಸಿಕೊಂಡು ಬೃಹತ್ ಗಡಿಯಾರ ಗೋಪುರ ನಿರ್ಮಿಸುವ ಕನಸು ಹೊತ್ತಿದ್ದ ಬಿಬಿಎಂಪಿ ಸದಸ್ಯ ಎನ್.ಆರ್. ರಮೇಶ್ ಅವರ ಪ್ರಯತ್ನ ಕಳೆದ ಫೆ.16 ರಂದು ಅಂಬರ ಚುಂಬನವಾಗಿ ಸಾಕಾರಗೊಂಡಿತ್ತು.
ಯಡಿಯೂರು ವಾರ್ಡ್ ನಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ, ಕೆರೆ ಸ್ವಚ್ಛತೆ, ಪಾರ್ಕ್ ಗಳ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ರಮೇಶ್ ಜನಪ್ರಿಯತೆ ಗಳಿಸಿದ್ದರು.

ಕಪಾಳಮೋಕ್ಷ ಪ್ರಕರಣ: ಬುಧವಾರ ಯಡಿಯೂರು ವಾರ್ಡ್ ಕಚೇರಿಗೆ ನುಗ್ಗಿದ ರಮೇಶ್ ಅವರು ಬೆಳಗ್ಗೆ ಸುಮಾರು 10.45ರ ವೇಳೆಗೆ ಕಂಪ್ಯೂಟರ್ ಕಚೇರಿ ಬಳಿ ಬಂದಿದ್ದಾರೆ. ಬಿಬಿಎಂಪಿ ಐಟಿ ಸಲಹೆಗಾರ ಶೇಷಾದ್ರಿ ಕಚೇರಿ ಕಡೆ ಬಂದ ರಮೇಶ್ ಅವರನ್ನು ಸುರೇಶ್ ತಡೆದು ಏನಾಗಬೇಕಿತ್ತು ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೋಪಗೊಂಡ ರಮೇಶ್ ಅವರು ಸುಮಾರು ಐದು ಬಾರಿ ಸುರೇಶ್ ಕೆನ್ನೆಗೆ ಬಾರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕಪಾಳಮೋಕ್ಷದಿಂದ ಅಸ್ವಸ್ಥನಾದ ಸುರೇಶ್ ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕುತ್ತಿಗೆ ನೋವು ಇನ್ನೂ ಹೋಗಿಲ್ಲ. ನಾನು ಮಾಡಿದ ತಪ್ಪಾದರೂ ಏನು ಎಂದು ಸುರೇಶ್ ಪ್ರಶ್ನಿಸುತ್ತಾರೆ.
ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕಾರ್ಪೊರೇಟ್ ರಮೇಶ್ ವಿರುದ್ಧ ಐಪಿಸಿ ಸೆಕ್ಷನ್ 153ರ ಅನ್ವಯ ಹಲ್ಲೆ ಪ್ರಕರಣ ದಾಖಲಾಗಿದೆ. ಬಿಬಿಎಂಪಿ ಆಯುಕ್ತ ಸಿದ್ದಯ್ಯ ಅವರಿಗೂ ದೂರು ನೀಡಲಾಗಿದೆ.
ಈ ಹಿಂದೆ ಮಹಿಳಾ ಸಿಬ್ಬಂದಿ ಮೇಲೂ ರಮೇಶ್ ಅವರು ಹಲ್ಲೆ ಮಾಡಿದ್ದರು. ಡಿ ಗುಂಪಿನ ನೌಕರರ ಮೇಲೆ ಕಾರ್ಪೊರೇಟರ್ ಗಳ ಕಿರುಕುಳ ಅತಿಯಾಗುತ್ತಿದೆ. ಕಾರ್ಪೊರೇಟರ್ ರಮೇಶ್ ಮೇಲೆ ತಕ್ಷಣವೇ ಕ್ರಮ ಜರುಗಿಸದಿದ್ದರೆ ನಮ್ಮ ಪ್ರತಿಭಟನೆ ಮುಂದುವರೆಸಲಾಗುತ್ತದೆ ಎಂದು ಬಿಬಿಎಂಪಿ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಬಾಬು ಹೇಳಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್, ಒಳ್ಳೆಯದು ಮಾಡಲು ಹೋದರೆ ಈ ರೀತಿ ನೂರೆಂಟು ವಿಘ್ನ ಎದುರಾಗುತ್ತದೆ. ಕಸದ ಸಮಸ್ಯೆ ಮಾಫಿಯಾ, ಅಸ್ತಿ ವಿವಾದ, ಟೆಲಿಕಾಂ ಕಂಪನಿಗಳ ಮಸಲತ್ತನ್ನು ಬಹಿರಂಗಗೊಳಿಸದಂತೆ ತಡೆಯಲು ನನ್ನ ವಿರುದ್ಧ ಆರೋಪಗಳನ್ನು ಹೇರಲಾಗುತ್ತಿದೆ. ಶೇ 90 ರಷ್ಟು ಕ್ಲಾಸ್ ಒನ್ ಅಧಿಕಾರಿಗಳು ಭ್ರಷ್ಟರಾಗಿದ್ದಾರೆ. ಸದ್ಯವಾದರೆ ಅವರ ಮೇಲೆ ಕ್ರಮ ಜರುಗಿಸಲಿ ಎಂದಿದ್ದಾರೆ.












Click it and Unblock the Notifications