ವಂಚಕಿ ಲೀನಾಳ ಪ್ರಿಯಕರನ ಜಾತಕ ಬಯಲು

ಬೆಂಗಳೂರು ನಿವಾಸಿಯಾಗಿರುವ ಬಾಲಾಜಿ ಮಹಾ ಪ್ರಳಯಾಂತಕ. ಲೀನಾ ಜೊತೆಗೂಡಿ ಹಲವಾರು ವಂಚನೆ ಪ್ರಕರಣಗಳಲ್ಲಿ ಬ್ಯಾಂಕಿಗೆ ಮತ್ತು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ. ಹಿಂದೊಮ್ಮೆ 2010ರಲ್ಲಿ ಕೂಡ ಬಾಲಾಜಿ ಮತ್ತು ಲೀನಾ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದರು.
ಬಾಲಾಜಿ ಬೆಂಗಳೂರು ಪೊಲೀಸರಿಗೆ ಸುಕೇಶ್ ಚಂದ್ರಶೇಖರ್ ಎಂದೇ ಪರಿಚಿತ. ಬೈಕ್ ಡ್ರಾಗ್ ರೇಸರ್ ಆಗಿರುವ ಸುಕೇಶ್ 2007ರಲ್ಲಿ 19 ವರ್ಷದವನಿದ್ದಾಗಲೇ ಬೆಂಗಳೂರು ಪೊಲೀಸ್ ರೆಕಾರ್ಡಿನಲ್ಲಿ ದಾಖಲಾಗಿದ್ದ. ವಂಚನೆ ಪ್ರಕರಣವೊಂದರಲ್ಲಿ 7 ಹೈಎಂಡ್ ಕಾರುಗಳನ್ನು ಪೊಲೀಸರು ಸುಕೇಶ್ ಪಾಲಕರಿಂದ ವಶಪಡಿಸಿಕೊಂಡಿದ್ದರು. ಪಾಲಕರು ಬಂಧಿತರಾಗಿದ್ದರೆ ಸುಕೇಶ್ ಪರಾರಿಯಾಗಿದ್ದ.
ಎಚ್ಡಿಕೆ ಮಗನ ಸ್ನೇಹಿತನಂತೆ! : ಕೋರಮಂಗಲದ ಫ್ಲಾಟಿನಲ್ಲಿ ವಾಸವಿದ್ದಾಗ ತಾನು ಡಿಎಂಕೆ ನಾಯಕ ಕರುಣಾನಿಧಿ ಅವರ ಮಗ ಅಳಗಿರಿಯವರ ಮಗ ಎಂದು ಹೇಳಿದ್ದ. ನಂತರ ತಾನು ತಮಿಳುನಾಡಿನಲ್ಲಿ ಕುಕ್ಕುಟ ಉದ್ಯಮ ನಡೆಸುತ್ತಿರುವುದಾಗಿ ಪೋಸ್ ನೀಡಿ ಐಎಎಸ್ ಅಧಿಕಾರಿಯೊಬ್ಬರಿಗೆ ಟೋಪಿ ಹಾಕಲು ಯತ್ನಿಸಿದ್ದ. ಹಾಗೆಯೆ, ತಾನು ಎಚ್ಡಿಕೆ ಅವರ ಮಗ ನಿಖಿಲ್ನ ಸ್ನೇಹಿತನೆಂದು ಹೇಳಿ ಗದ್ದಲವೆಬ್ಬಿಸಿದಾಗ ಪೊಲೀಸರು ಆತನ ವಿರುದ್ಧ ಕೇಸು ಜಡಿದಿದ್ದರು.
2010ರಲ್ಲಿ ವಿದೇಶಿ ಕಾರಿನಲ್ಲಿ ಸುಕೇಶ್ ಲೀನಾಳ ಜೊತೆ ಹೋಗುತ್ತಿದ್ದಾಗ ಅವರಿಬ್ಬರನ್ನು ಬಂಧಿಸಲು ಪೊಲೀಸರು ಬೆನ್ನತ್ತಿದ್ದರು. ಆದರೆ, ಟ್ರಾಫಿಕ್ನಲ್ಲಿ ಕೆಂಪು ಸಿಗ್ನಲ್ ಇದ್ದಾಗಲೇ ಸುಕೇಶ್ ಪರಾರಿಯಾಗಿಬಿಟ್ಟಿದ್ದ. ಆದರೆ, ಆ ಕಾರನ್ನು ನಂತರ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಈಗಲೂ ಆ ಕಾರು ಶಾಸಕರ ಭವನದ ಪೊಲೀಸ್ ಠಾಣೆಯಲ್ಲಿದೆ. ಇಬ್ಬರೂ ಚಂದ್ರಾ ಲೇಔಟ್ನಲ್ಲಿ ಮನೆ ಹೊಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಲೀನಾ ಬೆಂಗಳೂರಿನಲ್ಲಿದ್ದಾಗ ಬೇರೆ ಹೆಸರಿನಲ್ಲಿ ಕಾಲೇಜಿಗೆ ದಾಖಲಾಗಿದ್ದಳು. ಸುಕೇಶ್ ಕೂಡ ಹುಣಸಮಾರನಹಳ್ಳಿಯಲ್ಲಿ ದಂತ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ. ಸುಕೇಶ್ ಚಂದ್ರಶೇಖರ್ ಬೆಂಗಳೂರಿನಲ್ಲಿಯೇ ಅಡಗಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆತನನ್ನು ಬಂಧಿಸಲು ಈಗಾಗಲೆ ಪೊಲೀಸರ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಡಿಸಿಪಿ (ಕ್ರೈಂ) ಡಿ. ದೇವರಾಜು ಅವರು ತಿಳಿಸಿದ್ದಾರೆ.












Click it and Unblock the Notifications