ಈ ಶಾಸಕರಿಗೆ ಸಚಿವ ಸ್ಥಾನ ಬಯಸದೇ ಬಂದ ಭಾಗ್ಯ
ಒಂದು ಕಡೆ ನಾನೂ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿದ್ದ ಕೆಲವರಿಗೆ ಸಚಿವ ಸ್ಥಾನ, ಇನ್ನೊಂದೆಡೆ ಇದೇ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದವರಿಗೆ ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆಸಿದರೂ ಕನಿಷ್ಠ ಸಿಎಂ ಇರಲಿ ಸಚಿವ ಸ್ಥಾನವೂ ಲಭ್ಯವಾಗಿಲ್ಲ.
ಇನ್ನೇನು ಪ್ರಮಾಣವಚನಕ್ಕೆ ತಯಾರಿ ನಡೆಸುತ್ತಿದ್ದವರಿಗೆ ಕೊನೇ ಗಳಿಗೆಯಲ್ಲಿ ಮಂತ್ರಿಗಿರಿ ಕೈತಪ್ಪಿತು.ಇದಕ್ಕೆ ಕಾರಣ ಶಾಸಕರ ಹಿನ್ನಲೆ, ರಾಜಕೀಯ ಮೇಲಾಟ ಮತ್ತು ಪ್ರಮುಖವಾಗಿ ಜಾತಿ ಲೆಕ್ಕಾಚಾರ. ಎಲ್ಲಾ ಜಾತಿಯವರನ್ನು ತೃಪ್ತಿಗೊಳಿಸಿ ಸಂಪುಟ ರಚಿಸುವ ಸಂಪ್ರದಾಯಕ್ಕೆ ಸಿಎಂ ಸಿದ್ದರಾಮಯ್ಯ ಕೂಡಾ ತಲೆಬಾಗಲೇ ಬೇಕಾಯಿತು.
ಡಿ ಕೆ ಶಿವಕುಮಾರ್, ರಮೇಶ್ ಕುಮಾರ್, ಅನಿಲ್ ಲಾಡ್, ಕಾಗೋಡು ತಿಮ್ಮಪ್ಪ, ಮೋಟಮ್ಮ ಮುಂತಾದವರ ಪ್ರಯತ್ನ, ಬೆಂಬಲಿಗರ ಆರ್ಭಟ ಲಕ್ಷೀ ಪಟಾಕಿ ಆಗಿ ಸಿಡಿಯುವಲ್ಲಿ ವಿಫಲವಾಯಿತು.

ಕಿಮ್ಮನೆ ರತ್ನಾಕರ
ತೀರ್ಥಹಳ್ಳಿ ಕ್ಷೇತ್ರದ ಶಾಸಕ ಮತ್ತು ಒಕ್ಕಲಿಗ ಸಮುದಾಯದವರು. ಡಿ ಕೆ ಶಿವಕುಮಾರ್ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದರಿಂದ ಎ ಮಂಜು ಅವರಿಗೆ ಸ್ಥಾನ ನೀಡಲು ಚಿಂತಿಸಲಾಗಿತ್ತು. ಆದರೆ ಎಸ್ ಎಂ ಕೃಷ್ಣ ಆದೇಶದಂತೆ ಕಿಮ್ಮನೆ ರತ್ನಾಕರ ಅವರಿಗೆ ಸಚಿವ ಸ್ಥಾನ ಲಭ್ಯವಾಯಿತು.

ಬಾಬೂರಾವ್ ಚಿಂಚನಸೂರ
ಯಾದಗಿರಿ ಜಿಲ್ಲಾ ಕೋಟಾದಡಿಯಲಿ ಪಕ್ಷದ ಹಿರಿಯ ಮುಖಂಡ ಮಾಲಕರೆಡ್ಡಿಗೆ ಸಚಿವ ಸ್ಥಾನ ನಿಶ್ಚಿತ ಎನ್ನಲಾಗಿತ್ತು. ಆದರೆ ವಯಸ್ಸಿನ ನೆಪವೊಡ್ಡಿ ಮಾಲಕರೆಡ್ಡಿ ಅವರನ್ನು ದೂರವಿಟ್ಟು ಬಾಬೂರಾವ್ ಚಿಂಚನಸೂರಗೆ ಸಚಿವ ಸ್ಥಾನ ಹುಡುಕಿಕೊಂಡು ಬಂತು.

ವಿನಯ್ ಕುಮಾರ್ ಸೊರಕೆ
ಬಿಲ್ಲವ ಸಮುದಾಯದ ಸೊರಕೆ ಕಾಪು ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಕಾಪು ಕ್ಷೇತ್ರಕ್ಕೆ ಸೊರಕೆ ಹೊರಗಿನವರು. ಆದರೆ ಬಿಜೆಪಿ ವಿರೋಧಿ ಅಲೆಯಿಂದಾಗಿ ಸುಲಭವಾಗಿ ಜಯಗಳಿಸಿದರು. ಹಿರಿಯ ಮುಖಂಡರಾಗಿರುವ ಇವರು ಸಚಿವ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ.

ಉಮಾಶ್ರೀ
ದೇವಾಂಗ ಸಮುದಾಯದ ಸಚಿವ ಸಂಪುಟದ ಏಕೈಕ ಮಹಿಳೆ ಉಮಾಶ್ರೀ ತೇರದಾಳ ಕ್ಷೇತ್ರದ ಶಾಸಕಿ. ಇದೇ ಮೊದಲ ಬಾರಿಗೆ ಆಯ್ಕೆಯಾಗಿದ್ದ ಉಮಾಶ್ರೀ ಕೂಡಾ ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸಿರಲಿಲ್ಲ.

ಡಾ.ಶರಣಪ್ರಕಾಶ್ ಪಾಟೀಲ್
ಲಿಂಗಾಯಿತ ಸಮುದಾಯದ ಪಾಟೀಲ್ ಸೇಡಂ ಕ್ಷೇತ್ರದ ಶಾಸಕ. ಇದೇ ಮೊದಲ ಬಾರಿಗೆ ಸಚಿವರಾಗಿ ಆಯ್ಕೆಯಾಗಿರುವ ಶರಣ ಪ್ರಕಾಶ್ ಕೂಡಾ ಸಚಿವ ಸ್ಥಾನಕ್ಕೆ ತೀವ್ರ ಲಾಬಿ ಏನೂ ನಡೆಸಿರಲಿಲ್ಲ. ಆದರೆ ರಾಜ್ಯ ಸಚಿವರಾಗಿ ಆಯ್ಕೆಯಾದಾಗ ಬೇಸರಗೊಂಡಿದ್ದರು. ನಂತರ ವೈದ್ಯಕೀಯ ಶಿಕ್ಷಣ ಖಾತೆ ನೀಡಿ ಸಮಾಧಾನಗೊಳಿಸಲಾಯಿತು ಎನ್ನಲಾಗುತ್ತಿದೆ.












Click it and Unblock the Notifications