ಮಠಗಳಿಗೆ ಅನುದಾನ: ಕಂಡೀಷನ್ಸ್ ಅಪ್ಲೈ ಎಂದ ಸಿದ್ದು

ಮಠಗಳಿಗೆ ಸರಕಾರ ಅನುದಾನ ಕೊಡಬೇಕೋ/ಬೇಡ್ವಾ ಎಂಬ ಚರ್ಚೆಯನ್ನು ಪಕ್ಕಕ್ಕಿಟ್ಟು, 'ಹಿಂದಿನ ಸರಕಾರದ ಮುಖ್ಯಮಂತ್ರಿಗಳು ಜಿದ್ದಿಗೆ ಬಿದ್ದವರಂತೆ ಮಠ ಮಾನ್ಯಗಳಿಗೆ ಹಣ ಹರಿಸಿದ್ದನ್ನು ಖಂಡಿಸುತ್ತಾ ಮಠಗಳು ಕೇಳಿಯೇ ಇರಲಿಲ್ಲ. ಇವರೇ ಎತ್ತೆತ್ತಿ ಕೊಡುತ್ತಿದ್ದರು. ನನ್ನ ಆಡಳಿತದಲ್ಲಿ ಹಾಗೆಲ್ಲ ನಡೆಯೋಲ್ಲ' ಎಂದಿದ್ದ ಸನ್ಮಾನ್ಯ ಸಿದ್ದರಾಮಯ್ಯ ಅವರು ತುಮಕೂರು ಸಿದ್ದಗಂಗಾ ಮಠದ ಅಂಗಳದಲ್ಲಿ ತಮ್ಮ ವರಸೆ ಬದಲಿಸಿದ್ದಾರೆ.
ಶಿಕ್ಷಣ, ದಾಸೋಹ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಮಠ ಮಾನ್ಯಗಳಿಗೆ ಮಾತ್ರ ಸರಕಾರ ಅನುದಾನವನ್ನು ಮುಂದುವರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ. ಅದೂ ಮಠಗಳು ಆ ಸಂಬಂಧ ಅರ್ಜಿ ಹಾಕಿಕೊಂಡರೆ ಧನಸಹಾಯ ನೀಡುವುದಾಗಿ ಹೇಳಿದ್ದಾರೆ. ಅಂದರೆ ಅಳಿಯ ಅಲ್ಲ ಮಗಳ ಗಂಡ ಎಂಬ ನೀತಿ ತನ್ನದು ಎಂದು ಸಿದ್ದು ಹೇಳಿದಂತಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದನಂತರ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿದ್ದಗಂಗಾ ಮಠಕ್ಕೆ ಭಾನುವಾರ ಭೇಟಿ ನೀಡಿದ್ದರು. ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ಶಾಲು ಹೊದಿಸಿ, ಅವರ ಆಶೀರ್ವಾದ ಪಡೆದರು.
ಪಿರಿಯಾಪಟ್ಟಣ ವಿಧಾನಸಭಾ ಚುನಾವಣಾ ಪ್ರಚಾರಾರ್ಥ ಮೈಸೂರು ಜಿಲ್ಲೆಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಸುತ್ತೂರು ಮಠಕ್ಕೂ ಭೇಟಿ ನೀಡಿದರು.












Click it and Unblock the Notifications