ಎಲ್ಪಿಜಿ ಸಬ್ಸಿಡಿ: ಜೂನ್ ನಿಂದ ಬ್ಯಾಂಕ್ ಖಾತೆಗೆ

ಸಬ್ಸಿಡಿ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಎಂ.ವೀರಪ್ಪ ಮೊಯ್ಲಿ ಗೋವಾ, ಉತ್ತರ ಪುದುಚೇರಿ, ಹೈದರಾಬಾದ್ ಜಿಲ್ಲೆ ಸೇರಿದಂತೆ ದೇಶದ ಒಟ್ಟು 20 ಜಿಲ್ಲೆಗಳ 76 ಲಕ್ಷ ಗ್ರಾಹಕರ ಖಾತೆಗೆ ಸಬ್ಸಿಡಿ ಹಣ ಜೂನ್ 1ರಿಂದ ನೇರವಾಗಿ ವರ್ಗಾವಣೆಯಾಗಲಿದೆ ಎಂದರು.
ಕರ್ನಾಟಕದ ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಪ್ರತಿ ಬಾರಿ ಸಿಲಿಂಡರ್ ಕಾಯ್ದಿರಿಸಿದಾಗ ಗ್ರಾಹಕನ ಖಾತೆಗೆ 435 ರೂ. ನಗದು ವರ್ಗಾವಣೆಯಾಗಲಿದೆ. ಈ ಮೂಲಕ ಇಲಾಖೆ ಸುಮಾರು 10 ಸಾವಿರ ಕೋಟಿಯಷ್ಟು ಸಬ್ಸಿಡಿ ಹಣದ ದುರುಪಯೋಗ ತಪ್ಪಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಾಯೋಗಿಕ ಜಾರಿ : ದೇಶದಾದ್ಯಂತ ಗ್ರಾಹಕರ ಖಾತೆಗೆ ನೇರವಾಗಿ ಸಬ್ಸಿಡಿ ಹಣ ವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಾಯೋಗಿಕವಾಗಿ 20 ಜಿಲ್ಲೆಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.
ಆಧಾರ್ ಕಡ್ಡಾಯ : ಸಬ್ಸಿಡಿ ಹಣವನ್ನು ಗ್ರಾಹಕರ ಖಾತೆಗೆ ವರ್ಗಾವಣೆ ಮಾಡಬೇಕಾದರೆ ಆ ಗ್ರಾಹಕರು ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕು. ಪ್ರಸ್ತುತ ಹೆಚ್ಚು ಜನರು ಆಧಾರ್ ಕಾರ್ಡ್ ಪಡೆದಿರುವ ಜಿಲ್ಲೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಸಬ್ಸಿಡಿ ಹಣವನ್ನು ಅವರ ಖಾತೆಗೆ ವರ್ಗಾಯಿಸಲಾಗುವುದು ಎಂದರು.
ಸಬ್ಸಿಡಿ ಹಣ ವರ್ಗಾವಣೆ ಮಾಡಲು ನಿರ್ಧರಿಸಿರುವ ಜಿಲ್ಲೆಗಳಲ್ಲಿ ಶೇ 89ರಷ್ಟು ಮಂದಿ ಆಧಾರ್ ಸಂಖ್ಯೆ ಹೊಂದಿದ್ದಾರೆ. ಯುಐಡಿ ಸಂಖ್ಯೆ ಪಡೆಯಲು ಕೆಲವು ಗ್ರಾಹಕರಿಗೆ ಮೂರು ತಿಂಗಳ ಕಾಲವಾಕಾಶ ನೀಡಲಾಗುವುದು ಎಂದರು.
ಮುಂದಿನ ಹಂತದಲ್ಲಿ ಗ್ರಾಹಕರ ಖಾತೆಗೆ ಸಬ್ಸಿಡಿ ಹಣ ವರ್ಗಾವಣೆಗೊಳಿಸಬೇಕಾದರೆ, ಅವರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬ್ಯಾಂಕಿಗೆ ನೀಡಬೇಕಾಗಿದೆ. ಆದ್ದರಿಂದ ಜನರು ತಕ್ಷಣ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. (ಆಧಾರ್ ಕಾರ್ಡ್ ಮಾಡಿಸುವುದು ಹೇಗೆ)
ಪೆಟ್ರೋಲ್ ದರ ಏರಿಕೆ : ನಾಲ್ಕು ಬಾರಿ ಇಳಿಕೆಯಾಗಿದ್ದ ಪೆಟ್ರೋಲ್ ದರ ಶೀಘ್ರದಲ್ಲೇ ಲೀ.ಗೆ 70 ಪೈಸೆಯಿಂದ 1ರೂ. ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮೊಯ್ಲಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ಕಚ್ಚಾ ತೈಲದ ದರ ಏರಿಕೆ ಆಗಿರುವುದರಿಂದ ತೈಲ ಕಂಪನಿಗಳು ಶೀಘ್ರದಲ್ಲೇ ದರ ಏರಿಸಬಹುದು ಎಂದರು.












Click it and Unblock the Notifications