ವಿದ್ಯಾರ್ಥಿ ಸಾವಿಗೆ ಫಲಿತಾಂಶ ಕಾರಣವಲ್ಲ: ಯುಪಿಎಸ್ಸಿ

ರಾಷ್ಟ್ರದ ವಿವಿಧ ಇಲಾಖೆಗಳಿಗೆ ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ಅಧಿಕಾರಿಗಳನ್ನು ನೇಮಕ ಮಾಡಲು ಪ್ರತಿಷ್ಠಿತ ಪರೀಕ್ಷೆಯನ್ನು ನಡೆಸಿದ್ದ ಯುಪಿಎಸ್ ಸಿ, ಅಂತಿಮ ಫಲಿತಾಂಶದಲ್ಲಿ ಲೋಪದೋಷವಾಗಿದೆ ಎನ್ನುವ ಮಾಧ್ಯಮ ವರದಿಯನ್ನು ತಳ್ಳಿ ಹಾಕಿದೆ.
ಐಎಎಸ್ ಪರೀಕ್ಷೆಯ ಫಲಿತಾಂಶದ ಪಟ್ಟಿಯಲ್ಲಿ ತನ್ನ ಹೆಸರಿಲ್ಲ ಎಂಬ ಕಾರಣಕ್ಕೆ ವಿ.ವೈ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ವರದಿಯನ್ನು ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ತಳ್ಳಿ ಹಾಕಿದೆ. [ಭಾರತದ ಕಷ್ಟಕರ ಪರೀಕ್ಷೆಗಳ ಪಟ್ಟಿ ನೋಡಿ]
ಐಎಎಸ್ ಪರೀಕ್ಷೆಯ ಫಲಿತಾಂಶದ ಪಟ್ಟಿಯಲ್ಲಿ ತನ್ನ ಹೆಸರಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ರಾಜ್ಯದ ವಿ.ವೈ ಮಂಜುನಾಥ್ ಅವರು ಪೂರ್ವಭಾವಿ ಪರೀಕ್ಷೆಯೇ ಪಾಸಾಗಿಲ್ಲ ಎಂದು ಸೋಮವಾರ ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ಸ್ಪಷ್ಟಪಡಿಸಿದೆ.
ಯಾದವ್ ಮೂರ್ತಿ ಪುತ್ರ ಯು.ವೈ.ಮಂಜುನಾಥ್ ಎನ್ನುವ ಅಭ್ಯರ್ಥಿಯು ನಾಗರಿಕ ಸೇವಾ ಪೂರ್ವ ಪರೀಕ್ಷೆಗೆ 2012ರಲ್ಲಿ ಹೆಸರು ನೋಂದಾಯಿಸಿದ್ದರು ಎನ್ನುವುದು ನಮ್ಮ ದಾಖಲೆಯಲ್ಲಿದೆ ಆದರೆ ಆತ ಪೂರ್ವಭಾವಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಲಿಲ್ಲ ಎಂದು ಯುಪಿಎಸ್ ಸಿ ಸ್ಪಷ್ಟಪಡಿಸಿದೆ.
ಮಂಜುನಾಥ್ ನೋಂದಣಿ ಸಂಖ್ಯೆ 538950 ಆಗಿದ್ದು, ಬೆಂಗಳೂರು ಕೇಂದ್ರವನ್ನು ಅವರು ಆರಿಸಿಕೊಂಡಿದ್ದರು. 2012ರಲ್ಲಿ ನಡೆದ ಪ್ರಾಥಮಿಕ ಪರೀಕ್ಷೆಯಲ್ಲಿ ಅವರು ಅನುತ್ತೀರ್ಣರಾದ ಕಾರಣ ಮುಂದಿನ ಹಂತಕ್ಕೆ ತೇರ್ಗಡೆ ಹೊಂದಲು ವಿಫಲರಾಗಿದ್ದರು ಎಂದು ಮಂಡಳಿ ಹೇಳಿದೆ.
ತನ್ನ ನೋಂದಣಿ ಸಂಖ್ಯೆಯಲ್ಲಿ ಇನ್ನೊಬ್ಬರ ಹೆಸರನ್ನು ಕಂಡ ಮಂಜುನಾಥ್ ಇದರಿಂದ ತೀವ್ರ ನೊಂದಿದ್ದರು. ಐಎಎಸ್ ಪರೀಕ್ಷೆಯಲ್ಲಿ 264ನೇ ಶ್ರೇಯಾಂಕ ಪಡೆದಿದ್ದಾರಾದರೂ ಅಂತಿಮ ಸಂದರ್ಶನದಲ್ಲಿ ತನ್ನ ನೋಂದಣಿ ಸಂಖ್ಯೆಯಲ್ಲಿ ಇನ್ನೊಬ್ಬ ಅಭ್ಯರ್ಥಿಯ ಹೆಸರು ಪ್ರಕಟವಾದುದರಿಂದ ಅವರು ನಿರಾಶೆಗೊಳಗಾಗಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಬಳಿಕ ಮಂಜುನಾಥ್ ಸತತವಾಗಿ ಯುಪಿಎಸ್ ಸಿಯೊಂದಿಗೆ ಸಂಪರ್ಕವಿಟ್ಟುಕೊಂಡು ಫಲಿತಾಂಶದಲ್ಲಿ ಉಂಟಾಗಿರುವ ಅಚಾತುರ್ಯವನ್ನು ಸರಿಪಡಿಸಿಕೊಡಬೇಕು ಎಂದು ಕೋರಿದ್ದರು. ಆದರೆ ಮಂಡಳಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕುಟುಂಬ ಹಿನ್ನೆಲೆ ಏನು?: ಕುಣಿಗಲ್ ನ ವಣಿಗೆರೆ ಮೂಲದ ಮಂಜುನಾಥ್ ಅವರು ತಮ್ಮ ತಾಯಿ ವಿಎಸ್ ನಾಗರತ್ನ ಹಾಗೂ ಇಬ್ಬರು ತಮ್ಮಂದಿರಾದ ರಾಮಚಂದ್ರ ಹಾಗೂ ಮಧು ಯಾದವ್ ಜೊತೆ ಬೆಂಗಳೂರಿನ ಶ್ರೀರಾಮಪುರದ ಆರ್ ಗೋಪಾಲಸ್ವಾಮಿ ಅಯ್ಯರ್ ಕಾಲೋನಿಯಲ್ಲಿ ಚಿಕ್ಕ ಮನೆಯೊಂದರಲ್ಲಿ ನೆಲೆಸಿದ್ದರು.
5 ಲಕ್ಷ ಶಿಕ್ಷಣ ಸಾಲ ಪಡೆದು ಜೈನ್ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ವಿಷಯದಲ್ಲಿ ಇಂಜಿನಿಯರ್ ಮುಗಿಸಿದ್ದ. ನಂತರ ಒಂದು ವರ್ಷ ಸಂಪೂರ್ಣವಾಗಿ ಸಿವಿಲ್ ಸರ್ವೀಸ್ ಪರೀಕ್ಷೆಗೆ ತಯಾರಿ ನಡೆಸಿದ್ದ. ಹತ್ತಿರದ ಸರ್ಕಾರಿ ಗ್ರಂಥಾಲಯದಲ್ಲಿ 12 ಗಂಟೆಗಳ ಕಾಲ ಓದಿನಲ್ಲಿ ಕಾಲ ಕಳೆಯುತ್ತಿದ್ದ.
ಅಂಕಲ್ ಗವಿಸಿದ್ದಯ್ಯ ಅವರಿಂದ 30 ಸಾವಿರ ಸಾಲ ಪಡೆದು ಯುಪಿಎಸ್ಸಿ ಸಂದರ್ಶನಕ್ಕೂ ಹೋಗಿ ಬಂದಿದ್ದ ಆದರೆ, ಕುಟುಂಬದ ಬದುಕು ಬದಲಾಯಿಸುವ ಆಸೆ ಹೊಂದಿದ್ದ ಮಂಜುನಾಥ್ ಸಾವು ಈಗ ಕುಟುಂಬಕ್ಕೆ ಆಘಾತ ಉಂಟು ಮಾಡಿದೆ.
ನನ್ನ ಮಗ ಫೇಲ್ ಎಂದು ಹೇಳಿದ್ದರೂ ಪರ್ವಾಗಿಲ್ಲ ಬದುಕುತ್ತಿದ್ದ ಎಂದು ಮಂಜುನಾಥ್ ತಂದೆ ಯಾದವ ಮೂರ್ತಿ ಕಣ್ಣೀರಿಡುತ್ತಿದ್ದಾರೆ. ವಿವೈ ಮಂಜುನಾಥ್ ಬದಲಿಗೆ ವಿವಿ ಮಂಜುನಾಥ್ ಎಂದು ತಪ್ಪಾಗಿ ಹಾಲ್ ಟಿಕೆಟ್ ಮುದ್ರಿಸಿದ್ದ ಯುಪಿಎಸ್ಸಿ ಎಚ್ಚೆತ್ತುಕೊಳ್ಳುವಷ್ಟರಲ್ಲಿ ತಡವಾಯಿತೇ? ಅಥವಾ ಮುಂಜುನಾಥ್ ಆತುರವಾಗಿ ತನ್ನ ಬದುಕು ಅಂತ್ಯಗೊಳಿಸಿಕೊಂಡನೇ? ಗೊತ್ತಿಲ್ಲ ಯಾದವ ಮೂರ್ತಿ ಕುಟುಂಬದ ಗೋಳು ಅಂತ್ಯಕಾಣುತ್ತಿಲ್ಲ.












Click it and Unblock the Notifications