ಸತ್ಯದ ಹೆಸರಿನಲ್ಲಿ ಸಿದ್ದರಾಮಯ್ಯ ಪ್ರಮಾಣ ಸ್ವೀಕಾರ
ಬೆಂಗಳೂರು, ಮೇ 13 : ರಾಜ್ಯದ 28ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಸತ್ಯದ ಹೆಸರಿನಲ್ಲಿ ಪೂರ್ವನಿಗದಿತ ಸಮಯದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಪ್ರತಿಜ್ಞಾ ವಿಧಿ ಬೋಧಿಸಿದರು. ಅದಾಗುತ್ತಿದ್ದಂತೆ ವೇದಿಕೆಯ ಮೇಲಿದ್ದ ಗಣ್ಯರು ಸಿದ್ದರಾಮಯ್ಯ ಅವರಿಗೆ ಶುಭ ಹಾರೈಸಿದರು.
ಇದೇ ಮೊದಲ ಬಾರಿ ವಿಧಾನಸೌಧದ ಮುಂಭಾಗ ಹಾಗೂ ರಾಜಭವನ ಹೊರತುಪಡಿಸಿ, ಬೇರೆಡೆ ಮುಖ್ಯಮಂತ್ರಿಯ ಪದಗ್ರಹಣ ಸಮಾರಂಭ ನಡೆದಿದ್ದು, ಕ್ರೀಡಾಂಗಣದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಕೇವಲ ಹತ್ತು ನಿಮಿಷ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಸಿದ್ದರಾಮಯ್ಯ ಅವರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಿದ್ದರಾಮಯ್ಯ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ. ಕ್ರೀಡಾಂಗಣದಲ್ಲಿ ಸೇರಿರುವ ಸಾವಿರಾರು ಕಾರ್ಯಕರ್ತರು ಜಯಘೋಷದೊಂದಿಗೆ ಸಿದ್ದರಾಮಯ್ಯ ಅವರಿಗೆ ಸ್ವಾಗತ ಕೋರಿದರು. ವೇದಿಕೆ ಮೇಲಿರುವ ಗಣ್ಯರಿಂದ ಶುಭಾಶಯ ಸ್ವೀಕರಿಸಿದ ಸಿದ್ದರಾಮಯ್ಯ ಜನರತ್ತ ಕೈ ಬೀಸಿದರು.
ಗರಿ-ಗರಿ ರೇಷ್ಮೆ ಪಂಚೆ, ರೇಷ್ಮೆ ಶರ್ಟ್ ಧರಿಸಿರುವ ಸಿದ್ದರಾಮಯ್ಯ ವೇದಿಕೆಯ ಪಕ್ಕದಲ್ಲಿ ಕುಳಿತಿರುವ ಶಾಸಕರಿಂದ ಅಭಿನಂದನೆ ಸ್ವೀಕರಿಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂಧನ್ ಮಿಸ್ತ್ರೀ, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಹಿರಿಯ ನಟ ಮತ್ತು ಶಾಸಕ ಅಂಬರೀಶ್, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮಶ್ವರ್, ಸಚಿವ ವೀರಪ್ಪ ಮೊಯ್ಲಿ ಮುಂತಾದವರು ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು.
ಬೆಳಗ್ಗೆ 9 ಗಂಟೆಗೆ ತಮ್ಮ ನಿವಾಸದಿಂದ ಹೊರಟ ಸಿದ್ದರಾಮಯ್ಯ ಮೊದಲು ಜಯನಗರದಲ್ಲಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ನಂತರ ಚಾಲುಕ್ಯ ವೃತ್ತದಲ್ಲಿರುವ ಬಸವೇಶ್ವರ ಪುತ್ತಳಿಗೆ ಮಾಲಾರ್ಪಣೆ ಮಾಡಿದರು.
ನಂತರ ಮಾತನಾಡಿದ ಸಿದ್ದರಾಮಯ್ಯ, ಬಸವೇಶ್ವರ ಜಯಂತಿ ದಿನದಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದೇನೆ. ವಿಶ್ವಕ್ಕೆ ಸಮಾಜವಾದದ ಸಂದೇಶ ಸಾರಿದ ಮಹಾತ್ಮರು ಬಸವಣ್ಣ. ಸರ್ವರಿಗೂ ಸಮಪಾಲು ಎಂಬಂತೆ ಆಡಳಿತದಲ್ಲೂ ಸಾಮಾಜಿಕ ನ್ಯಾಯ ಕಾಪಾಡುತ್ತೇನೆ ಎಂದು ಭರವಸೆ ನೀಡಿದರು.
ನಂತರ ವಿಧಾನಸೌಧದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಜವಹಾರ್ ಲಾಲ್ ನೆಹರು ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ನಂತರ ಕೆಂಗಲ್ ಹನುಮಂತಯ್ಯ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಕೈ ಕಲರವ : ಕಂಠೀರವ ಕ್ರೀಡಾಂಗಣದ ಸುತ್ತಮುತ್ತಾ ಕೈ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯೂ ಸಂಪೂರ್ಣವಾಗಿ ತುಂಬಿ ಹೋಗಿದ್ದು, 10.3ರ ನಂತರ ಬಂದ ಜನರನ್ನು ಪೊಲೀಸರು ಒಳ ಪ್ರವೇಶಿಸಿಸಲು ಬಿಡುತ್ತಿಲ್ಲ.
ಆಗಮಿಸಿರುವ ಗಣ್ಯರು : ಸಾಹಿತಿಗಳಾದ ಚಂಪಾ, ಸಿ.ಪಿ.ಕೃಷ್ಣ ಕುಮಾರ್, ನಾಗತಿಹಳ್ಳಿ ಚಂದ್ರಶೇಖರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡೀಸ್, ಗಿರೀಶ್ ಕಾರ್ನಾಡ್ ಮುಂತಾದವರು ಈಗಾಗಲೇ ಕ್ರೀಡಾಂಗಣಕ್ಕೆ ಆಗಮಿಸಿದ್ದಾರೆ.
ಟ್ರಾಫಿಕ್ ಜಾಮ್ : ಸಿದ್ದರಾಮಯ್ಯ ಪ್ರಮಾಣ ವಚನ ಸಮಾರಂಭಕ್ಕೆ ಜನಸಾಗರ ಹರಿದು ಬರುತ್ತಿದ್ದು, ಕಬ್ಬನ್ ರಸ್ತೆ, ಮಲ್ಯ ರಸ್ತೆ, ಯುಬಿ ಸಿಟಿ ವೃತ್ತ ಮುಂತಾದ ಕಡೆ ಟ್ರಾಫಿಕ್ ಜಾಮ್ ಉಂಟಾಗಿದೆ. ಸಂಚಾರ ದಟ್ಟಣೆ ತಿಳಿಗೊಳಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.