ಗದಗ : ತಮ್ಮನಿಂದಲೇ ಅಣ್ಣ, ಅತ್ತಿಗೆ ಭೀಕರ ಕೊಲೆ
ಮಂಗಳವಾರ ಬೆಳಗ್ಗೆ ಬಸಪ್ಪ ಎಂಬವವರು ದೊಡ್ಡಪ್ಪನ ಮಗನಾದ ಶಿವಪ್ಪ ಹೊಸೂರು (೫೦) ಮತ್ತು ಅವಕ್ಕ (೪೮) ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆಮಾಡಿ ಪರಾರಿಯಾಗಿದ್ದಾನೆ. ತನ್ನ ಮಕ್ಕಳೊಂದಿಗೆ ಜಗಳವಾಡುತ್ತಿದ್ದ, ಬಸಪ್ಪ ಅವರನ್ನು ಶಿವಪ್ಪ ದಂಪತಿ ಬಿಡಿಸಲು ಹೋಗಿದ್ದರಿಂದ ಕೋಪಗೊಂಡು ಕೊಲೆ ಮಾಡಲಾಗಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ನಿವಾಸಿಯಾದ ಬಸಪ್ಪ ತನ್ನ ದೊಡ್ಡಪ್ಪನ ಮನೆಯ ಪಕ್ಕದಲ್ಲೇ ವಾಸವಾಗಿದ್ದಾರೆ. ಇತನಿಗೆ ಎರಡು ಮದುವೆಯಾಗಿದ್ದು, ಮೊದಲ ಪತ್ನಿ ಈತನ ಜಗಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಎರಡನೇ ಹೆಂಡತಿಯು ಮಕ್ಕಳನ್ನು ಬಸಪ್ಪ ಬಳಿ ಬಿಟ್ಟು ಗಂಡನಿಂದ ದೂರವಾಗಿದ್ದಾಳೆ. ಕುಡಿತದ ದಾಸನಾಗಿರುವ ಈತ ತನ್ನ ಜೊತೆ ವಾಸಿಸುತ್ತಿರುವ ಮಕ್ಕಳೊಂದಿಗೆ ದಿನವೂ ಜಗಳವಾಡುತ್ತಿದ್ದ ಎಂದು ತಿಳಿದುಬಂದಿದೆ.
ಮಂಗಳವಾರ ಬೆಳಗ್ಗೆಯೂ ಬಸಪ್ಪ ಮಕ್ಕಳೊಂದಿಗೆ ಜಗಳ ಪ್ರಾರಂಭಿಸಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ ಪಕ್ಕದ ಮನೆಯ ಶಿವಪ್ಪ ಬೆಳಗ್ಗೆ ಏಕೆ ಮಕ್ಕಳೊಂದಿಗೆ ಜಗಳವಾಡುತ್ತಿಯಾ? ಎಂದು ಬಸಪ್ಪನನ್ನು ಪ್ರಶ್ನಿಸಿದ್ದಾರೆ.
ಇದರಿಂದ ಕೋಪಗೊಂಡ ಆತ ಮಚ್ಚಿನಿಂದ ಹಲ್ಲೆಮಾಡಿ ಶಿವಪ್ಪನನ್ನು ಕೊಲೆ ಮಾಡಿದ್ದಾನೆ. ಗಂಡನ ಮೇಲೆ ಹಲ್ಲೆ ಆಗುವುದನ್ನು ತಪ್ಪಿಸಲು ಬಂದ ಅತ್ತಿಗೆಯನ್ನು ಕೊಲೆ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾನೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೋಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಾಗಿ ಶೋಧ ನಡೆಸುತ್ತಿದ್ದು, ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.