ಆನೇಕಲ್ : ರಮ್ಯಾ ಲವ್ ಸ್ಟೋರಿ ದುರಂತ ಅಂತ್ಯ

ಪ್ರಿಯಕರನಿಂದ ಹಲ್ಲೆಗೊಳಗಾಗಿ ಏ.24ರಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಮ್ಯಾ(24) ಸೋಮವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈಕೆಯ ಮೇಲೆ ಹಲ್ಲೆ ಮಾಡಿದ್ದ ಪ್ರಿಯಕರ ಮೃತಪಟ್ಟು ವಾರಗಳೇ ಕಳೆದಿವೆ.
ಆನೇಕಲ್ ತಾಲೂಕಿನ ಮತ್ತಿಗಟ್ಟೆದಿಣ್ಣೆ ಗ್ರಾಮದ ಮಾವಿನ ತೋಪಿನಲ್ಲಿ ಏ.24ರಂದು ರಮ್ಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಪೊಲೀಸರು ಈಕೆಯನ್ನು ವಿಕ್ಟೋರಿಯಾ ಆಸ್ಪತ್ರಗೆ ದಾಖಲಿಸಿದ್ದರು. ಅಜ್ಜಿ ಮನೆಗೆ ಹೋಗುವುದಾಗಿ ಮನೆಯಿಂದ ಹೊರಟ್ಟಿದ್ದ ರಮ್ಯಾ ಎರಡು ದಿನಗಳ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು.
ಪ್ರೇಮ ಪುರಾಣವೇನು : ಹಾಸನ ಮೂಲದವಳಾದ ರಮ್ಯಾ ಪೀಣ್ಯ ಬಳಿಯ ಬಾಲಾಜಿ ನಗರದಲ್ಲಿ ವಾಸವಾಗಿದ್ದಳು. ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ ಆನೇಕಲ್ ಮೂಲದ ಮುನಿರಾಜು ಮತ್ತು ರಮ್ಯಾ ಪರಸ್ಪರ ಪ್ರೀತಿಸುತ್ತಿದ್ದರು.
ಆದರೆ, ರಮ್ಯಾ ಕುಟುಂಬದವರು ಇಬ್ಬರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಇಬ್ಬರು ಏ.22ರಂದು ಮನೆಯಿಂದ ಕಾಣೆಯಾಗಿದ್ದರು. ಊರು ಬಿಟ್ಟು ಪರಾರಿಯಾಗುವ ಅವರ ಆಲೋಚನೆ ಫಲಿಸದೇ ಪ್ರೇಮಿಗಳ ನಡುವೆ ಜಗಳ ನಡೆದಿತ್ತು.
ನಂತರ ಎರಡು ದಿನಗಳ ಬಳಿಕ ರಮ್ಯಾ ಆನೇಕಲ್ ಬಳಿಯ ಮಾವಿನ ತೋಪಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಮ್ಯಾ ಮೇಲೆ ಹಲ್ಲೆ ನಡೆಸಿದ ಮುನಿರಾಜು, ಏ.24ರಂದು ಮನೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದ.
ತಕ್ಷಣ ಅಂತ್ಯಸಂಸ್ಕಾರ : ಮುನಿರಾಜುವಿನ ಲವ್ ಸ್ಪೋರಿ ತಿಳಿದಿದ್ದರೂ ಅವರ ಕುಟುಂಬ ಸದಸ್ಯರು ಆತನ ಶವದ ಅಂತ್ಯ ಸಂಸ್ಕಾರವನ್ನು ತಕ್ಷಣ ನಡೆಸಿದ್ದರು. ಚುನಾವಣಾ ಕಾರ್ಯದಲ್ಲಿ ಪೊಲೀಸರು ಮತ್ತು ತಹಶೀಲ್ದಾರ್ ತೊಡಗಿದ್ದರಿಂದ ಬುಧವಾರ ಚುನಾವಣೆ ಫಲಿತಾಂಶ ಪ್ರಕಟಗೊಂಡ ತಕ್ಷಣ ಆತನ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಮುನಿರಾಜು ಸಾವಿನ ಮೇಲೆ ಶಂಕೆ : ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಯಲ್ಲಿದ್ದ ರಮ್ಯಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಆದರೆ, ಆಕೆಯ ಪ್ರಿಯಕರ ಮುನಿರಾಜು ಸಾವಿನ ಸುತ್ತಾ ಅನುಮಾನದ ಹೊಗೆಯಾಡುತ್ತಿದೆ. ಪೊಲೀಸರ ಸೂಚನೆ ಉಲ್ಲಂಘಿಸಿಯೂ ಕುಟುಂಬದವರು ತಕ್ಷಣ ಆತನನ್ನು ಮಣ್ಣಿಗೆ ಸೇರಿಸಿರುವುದು ಹಲವು ಅನುಮಾನ ಹುಟ್ಟು ಹಾಕಿದೆ.
ವಿವಿರವಾದ ತನಿಖೆ : ರಮ್ಯಾ ಮತ್ತು ಆಕೆಯ ಪ್ರಿಯಕರ ಮುನಿರಾಜು ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಜೀನೇಂದ್ರ ಕಣಗಾವಿ ಹೇಳಿದ್ದಾರೆ. ಚುನಾವಣೆ ಕಾರ್ಯದಲ್ಲಿ ತಹಶೀಲ್ದಾರ್ ಮತ್ತು ಪೊಲೀಸರು ತೊಡಗಿದ್ದರು.
ಚುನಾವಣೆ ಫಲಿತಾಂಶ ಪ್ರಕವಾದ ನಂತರ ಸಮಾಧಿಯಿಂದ ಮುನಿರಾಜು ಶವವನ್ನು ಹೊರತೆಗೆದು ವಿವರವಾದ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. ಮುನಿರಾಜು ಕುಟುಂಬದವರಿಗೂ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications