ಜೆಡಿಎಸ್ ಅಧಿಕಾರಕ್ಕೆ, ನಾನೇ ಕಿಂಗ್ : ಕುಮಾರಸ್ವಾಮಿ
ಬುಧವಾರ ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ನಾಯಕರಂತೆ ಪ್ರಚಾರ ಮಾಡುವುದು ಬಿಟ್ಟು ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ಜನರು ಬಿಜೆಪಿ ಸರ್ಕಾರದ ದುರಾಡಳಿತದಿಂದ ಬೇಸತ್ತು ಹೋಗಿದ್ದಾರೆ. ಅವರು ಜೆಡಿಎಸ್ ಗೆ ಮತ ನೀಡಲಿದ್ದಾರೆ. ಆದ್ದರಿಂದ ನಾನು ಈ ಬಾರಿ ಕಿಂಗ್ ಮೇಕರ್ ಆಗುವುದಿಲ್ಲ. ಕಿಂಗ್ ಆಗುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರ ಬಳಿ ಟಾರ್ಚ್ ಇದೆಯೇ : ಕಾಂಗ್ರೆಸ್ ನಾಯಕರು ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ನಾವು ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಅವರು ಟಾರ್ಚ್ ಹಾಕಿ ನೋಡಿದ್ದಾರೆಯೇ ಎಂದು ವ್ಯಂಗ್ಯವಾಡಿದರು.
ಐದು ವರ್ಷಗಳಲ್ಲಿ ಜನಸಾಮಾನ್ಯರಿಗೆ ಸ್ಪಂದಿಸುವ ಕೆಲಸ ರಾಜ್ಯದಲ್ಲಿ ಆಗಿಲ್ಲ. ಎರಡೂವರೆ ವರ್ಷಗಳಿಂದ ಇರುವ ಭೀಕರ ಬರಗಾಲ ನಿಭಾಯಿಸುವಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿವೆ.
ಅಧಿಕಾರ ದಾಹದಲ್ಲಿರುವ ಈ ಎರಡು ಪಕ್ಷಗಳಿಗೆ ಜನರು ಸರಿಯಾದ ಪಾಠ ಕಲಿಸುವ ಮೂಲಕ ರಾಜ್ಯದಲ್ಲಿ ಜನಪರ ಅಳ್ವಿಕೆ ಆರಂಭಿಸಲು ಜೆಡಿಎಸ್ಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.
ಜೆಡಿಎಸ್ ಅಧಿಕಾರಕ್ಕೆ ಬಂದರೆ, ರೈತರ ಎಲ್ಲ ಬೆಳೆಗೆ ಸರ್ಕಾರದಿಂದಲೇ ಬೆಂಬಲ ಬೆಲೆ ನಿಗದಿಪಡಿಸಲಾಗುತ್ತದೆ. ಬೆಳೆ ಹಾಗೂ ಬೆಲೆ ನಷ್ಟದಿಂದ ರೈತರನ್ನು ರಕ್ಷಿಸುವ ಸಲುವಾಗಿಯೇ ಪ್ರತಿ ಬಜೆಟ್ನಲ್ಲೂ 10 ಸಾವಿರ ಕೋಟಿ ತೆಗೆದಿರಿಸಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ರೈತರ ಅಭಿವೃದ್ದಿ ಮಾಡುತ್ತೇನೆ ಎಂದು ಬಂದ ಮುಖ್ಯಮಂತ್ರಿ ತಮ್ಮ ಅಭಿವೃದ್ದಿ ಮಾಡಿಕೊಂಡು ಜೈಲಿಗೆ ಹೋದರು. ಈಗ ಮತ್ತೆ ರೈತಪರ ಸರ್ಕಾರ ನೀಡುತ್ತೇನೆ ಎಂದು ಮತ ಕೇಳುತ್ತಿದ್ದಾರೆ. ಇಂತಹವರಿಗೆ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ