ಬರೆದಿಟ್ಕೊಳ್ಳಿ ಯಡಿಯೂರಪ್ಪನೇ ಕಿಂಗ್ ಆಗ್ತಾರೆ: ಶೋಭಾ
ಬೆಂಗಳೂರು, ಏ.30: (ಸಾಲುಸಾಲಾಗಿ ಬೇರೆಯವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡುತ್ತಾ) ಕಿಂಗ್ ಮೇಕರ್ ಎನಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಈ ಬಾರಿ ಸ್ವತಃ ತಾವೇ ಕಿಂಗ್ ಆಗುತ್ತಾರೆ ಎಂದು ಕೆಜೆಪಿ ಮುಖಂಡರಾದ ಶೋಭಾ ಕರಂದ್ಲಾಜೆ ಅವರು ತುಂಬು ಭರವಸೆ ವ್ಯಕ್ತಪಡಿಸಿದ್ದಾರೆ.
ವರದಿಗಾರರ ಕೂಟ ಮತ್ತು ಪ್ರೆಸ್ ಕ್ಲಬ್ ಜಂಟಿಯಾಗಿ ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶೋಭಾ ಅವರು ಯಡಿಯೂರಪ್ಪ ಅವರೇ ಜಗದೀಶ್ ಶೆಟ್ಟರ್, ಸದಾನಂದ ಗೌಡ, ಕುಮಾರಸ್ವಾಮಿ ಅಂಥವರನ್ನು ಉನ್ನತ ಸ್ಥಾನದಲ್ಲಿ ಕುಳ್ಳರಿಸಿದ್ದು. ಆದರೆ ಇನ್ನು ಮುಂದೆ ಅವರೇ ಕಿಂಗ್ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಕೆಜೆಪಿ ನಿರ್ಣಾಯಕ ಪಾತ್ರ ವಹಿಸಲಿದೆ. ಬಹಳಷ್ಟು ಕಡೆ ಚತುಷ್ಕೋನ, ತ್ರಿಕೋನ, ಸ್ಪರ್ಧೆಗಳು ಏರ್ಪಡಲಿದ್ದು, ಕೆಲವೆಡೆ ನೇರ ಸ್ಪರ್ಧೆಯೂ ಇದೆ ಎಂದು ಶೋಭಾ ಅಭಿಪ್ರಾಯಪಟ್ಟರು.

ಕೆಜೆಪಿಗೆ ಉಘೇ ಉಘೇ:
ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಒಂದು ವೇಳೆ ಕೆಜೆಪಿ ಮೊದಲ ಸ್ಥಾನದಿಂದ ವಂಚಿತವಾದರೆ ವಿರೋಧ ಪಕ್ಷದಲ್ಲಿರಲು ಸಿದ್ಧವಿದೆ. ಆದರೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ಯಾರ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದನ್ನು ಚುನಾವಣೆಯ ನಂತರವಷ್ಟೇ ನಿರ್ಧರಿಸಿಸುತ್ತೇವೆ ಎಂದೂ ಶೋಭಾ ತಿಳಿಸಿದರು.

ಕ್ಷೇತ್ರ ಬದಲಾವಣೆ ಯಾಕೆಂದರೆ:
ಪಕ್ಷ ಬಿಟ್ಟಿದ್ದರಿಂದ ಯಶವಂತಪುರ ಕ್ಷೇತ್ರವನ್ನು ಬಿಟ್ಟುಕೊಡಬೇಕಾಯಿತು. ಆದರೆ ಇದರಿಂದ ಆ ಕ್ಷೇತ್ರದ ಕಾರ್ಯಕರ್ತರಿಗೆ ಬೇಸರ ಉಂಟಾಗಿದೆ. ರಾಜಾಜಿನಗರದ ಕಾರ್ಯಕರ್ತರ ಒತ್ತಡಕ್ಕೆ ಒಲಿದು ಅಲ್ಲಿಂದಲೇ ಈ ಬಾರಿ ಕಣಕ್ಕಿಳಿದಿದ್ದೇನೆ ಎಂದು ಶೋಭಾ ವಿವರಿಸಿದರು.

ಸುರೇಶ್ ಬಗ್ಗೆ ಚಕಾರವಿಲ್ಲ:
ಸುಮಾರು 25 ವರ್ಷಗಳಿಂದ ಸುರೇಶ್ ಕುಮಾರ್ ಅವರು ಕ್ಷೇತ್ರದಲ್ಲಿದ್ದಾರೆ. ಅವರ ಬಗ್ಗೆ ಟೀಕೆ ಮಾಡುವುದಿಲ್ಲ. ಆದರೆ ನಾನೂ ಸೇವೆ ಮಾಡುತ್ತೇನೆ ಎಂದಷ್ಟೇ ಮತಯಾಚಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಚುನಾವಣೆ ಸಾಕಾಗಿತ್ತು:
ಈ ಬಾರಿ ಚುನಾವಣೆಯಲ್ಲಿ ಸ್ಪರ್ಧರಿಸಲೇ ಬಾರದು ಎಂದು ನಿರ್ಧರಿಸಿದ್ದೆ. ಆದರೆ ನಮ್ಮ ನಾಯಕರ ನಿರ್ಧಾರದಂತೆ ಸ್ಪರ್ಧಿಸುತ್ತಿದ್ದೇನೆ. ಈ ಬಾರಿ ಚುನಾವಣೆಯಲ್ಲಿ 4 ಪಕ್ಷಗಳು ಪ್ರಮುಖವಾಗಿವೆ. ಆದ್ದರಿಂದ ಸ್ಪರ್ಧೆ ಹೆಚ್ಚಾಗಿದ್ದು ಕೆಜೆಪಿ ನಿರ್ಣಾಯಕವಾಗಲಿದೆ ಎಂದು ಶೋಭಾ ಹೇಳಿದರು.

ನಾನವಳಲ್ಲ, ನಾನವಳಲ್ಲ:
ಯಡಿಯೂರಪ್ಪ ಬೆಂಬಲಿಗರು ಪಕ್ಷಕ್ಕೆ ಬಾರದಿರಲು ನಾನೇ ಕಾರಣ ಎಂದು ಆರೋಪಿಸಲಾಗುತ್ತಿದೆ. ಆದರೆ ಇದು ಕುಂಟು ನೆಪವಷ್ಟೇ. ಮೊದಲೇ ಹತ್ತಾರು ಬಾರಿ ಸಭೆ ಸೇರಿ ಒಮ್ಮತದ ನಿರ್ಣಯ ಕೈಗೊಂಡಿದ್ದ ಅವರು ಕೊನೆಯಲ್ಲಿ ಹಿಂದೆ ಸರಿದಿದ್ದಾರೆ. ಇದಕ್ಕೆ ನಾನು ಕಾರಣಳಲ್ಲ ಎಂದು ಶೋಭಾ ಸ್ಪಷ್ಟನೆ ನೀಡಿದರು.

ಮತ್ತೆ ಯಡಿಯೂರಪ್ಪ ಪಕ್ಷ ಬಿಟ್ಟಿದ್ದೇಕೆ?:
ರಾಜ್ಯ ಮತ್ತು ಕೇಂದ್ರದ ನಾಯಕರೇ ಇದಕ್ಕೆ ಕಾರಣ. ಅಧ್ಯಕ್ಷ ಸೇರಿದಂತೆ ಯಾವುದೇ ಸ್ಥಾನ ನೀಡದಿರಲು ಮತ್ತು ಚುನಾವಣೆಗಾಗಿ ಬಿ ಫಾರಂ ಕೊಡುವ ಅಧಿಕಾರವನ್ನು ಮೊಟಲುಗೊಳಿಸಲು ನಾಯಕರು ಆಲೋಚಿಸಿದ್ದರು. ಹಿರಿಯ ನಾಯಕರ ವರ್ತನೆಗೆ ಬೇಸತ್ತು ಪಕ್ಷ ತ್ಯಜಿಸಿದರು ಅಷ್ಟೇ ಎಂದು ಶೋಭಾ ಮೇಡಂ ವಿವರಣೆ ನೀಡಿದರು.












Click it and Unblock the Notifications