'ಹಿಟ್ಲರ್ ಮೋದಿ ಗೋ ಬ್ಯಾಕ್ ಗೋ ಬ್ಯಾಕ್'
ವಿಧಾನಸಭೆ ಚುನಾವಣೆ ಬಿಜೆಪಿ ಪರ ಪ್ರಚಾರಕ್ಕೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಭಾನುವಾರ ಸಂಜೆ 5.30ಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಅವರು ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಭಾಷಣ ಮಾಡಬೇಕಿದೆ.
ಪ್ರಗತಿ ಪರ ಸಂಘಟನೆಗಳು, ಕೆಲ ರೈತ ನಾಯಕರು, ಕೋಮು ಸೌಹಾರ್ದ ವೇದಿಕೆ ಜೊತೆಗೂಡಿ ಪತ್ರಕರ್ತ ಅಗ್ನಿ ಶ್ರೀಧರ್, ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅಯ್ಯಂಗಾರ್ ಮುಂತಾದವರು ಮೋದಿ ಅವರು ಕರ್ನಾಟಕಕ್ಕೆ ಆಗಮಿಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ಅಗ್ನಿ ಶ್ರೀಧರ್, 'ಮೋದಿ ಅವರ ಹಿಂದೂತ್ವದ ಬಗ್ಗೆ ನಮಗೆ ವಿರೋಧವಿಲ್ಲ. ಅದು ಅವರ ವೈಯಕ್ತಿಕ ಮಾರ್ಗ. ಆದರೆ, ಒಬ್ಬ ಸಾಂವಿಧಾನಿಕ ವ್ಯಕ್ತಿಯಾಗಿ, ಮುಖ್ಯಮಂತ್ರಿಯಾಗಿ ಗೋಧ್ರ ಹತ್ಯಾಕಾಂಡ ಸಂದರ್ಭದಲ್ಲಿ ನಡೆದುಕೊಂಡ ರೀತಿ ಸರಿ ಇಲ್ಲ.
ಮೋದಿ ಅವರ ಸಂಪುಟದ ಸಚಿವೆ ಮಾಯಾ ಕೊಡ್ನಾನಿ ಅವರಿಗೆ ಗೋಧ್ರೋತ್ತರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಕೋಮು ಭಾವನೆ ಕಲಕುವ ಮೋದಿ ಅವರು ಕರ್ನಾಟಕಕ್ಕೆ ಬರುವುದರಿಂದ ಇಲ್ಲಿನ ಪರಿಸರ ಹಾಳಾಗಲಿದೆ ಎಂದರು.
ಬೆಂಗಳೂರಿನಲ್ಲಿ ಮೋದಿ : ಸಮಾವೇಶದಲ್ಲಿ ಒಂದು ಲಕ್ಷ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ರಾಜ್ಯದ ವಿವಿಧೆಡೆಗಳಿಂದ ಕಾರ್ಯರ್ತರು, ಬಿಜೆಪಿ ಅಭಿಮಾನಿಗಳು ಆಗಮಿಸಲಿದ್ದಾರೆ.
ಸಂಜೆ 5 ಗಂಟೆಗೆ ವಿಶೇಷ ವಿಮಾನದ ಮೂಲಕ ನರೇಂದ್ರ ಮೋದಿ ಅವರು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಸಂಜೆ 5.45ರ ವೇಳೆಗೆ ನ್ಯಾಷನಲ್ ಕಾಲೇಜು ಮೈದಾನ ತಲುಪುವರು. ರಾತ್ರಿ 7 ಗಂಟೆಯೊಳಗೆ ಪ್ರಚಾರ ಸಭೆ ಮುಗಿಸಿ ಅವರು ವಾಪಸ್ ಗುಜರಾತ್ಗೆ ತೆರಳಲಿದ್ದಾರೆ.
ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಭಾಗದಲ್ಲಿ ಬಿಜೆಪಿ ಅಲೆ ಎಬ್ಬಿಸಬೇಕಾಗಿರುವುದರಿಂದ ಇನ್ನೆರಡು ದಿನಗಳ ಕಾಲ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಗುಜರಾತ್ ಮುಖ್ಯಮಂತ್ರಿ ಮೋದಿ ಅವರನ್ನು ಕೇಳಿಕೊಳ್ಳಲು ಕರ್ನಾಟಕ ಬಿಜೆಪಿ ನಿರ್ಧರಿಸಿದೆ.