ಸಮೀಕ್ಷೆ ಸುಳ್ಳಾಗಿಸುವುದು ಬಿಜೆಪಿಗೆ ಮಾತ್ರ ಸಾಧ್ಯ
ಮಾಧ್ಯಮಗಳ ಸಮೀಕ್ಷೆಗಳೇ ನಿರ್ಣಾಯಕ ಎನ್ನುವುದು ತಪ್ಪು ಸಂದೇಶ ಹೊರಡಿಸಿದ ಹಾಗೆ ಆಗುತ್ತದೆ. ಮಾಧ್ಯಮಗಳ ಪ್ರಯತ್ನ, ಶ್ರಮದ ಬಗ್ಗೆ ನನಗೆ ಗೌರವವಿದೆ. ಆದರೆ, ಚುನಾವಣಾ ಸಮೀಕ್ಷೆ ಸುಳ್ಳಾಗಲಿದೆ ಎಂದು ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಬಹುಮತ ಗಳಿಸಲಿದೆ. ಹೆಚ್ಚಿನ ಸ್ಥಾನ ಗಳಿಸಲಿದೆ ಎಂಬುದು ಸುಳ್ಳಾಗಲಿದೆ. ಸಮೀಕ್ಷೆಗಳನ್ನು ಸುಳ್ಳು ಮಾಡುವುದು ಬಿಜೆಪಿಗೆ ಮಾತ್ರ ಸಾಧ್ಯ.
2008ರಲ್ಲಿ ಕೂಡಾ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಅನೇಕ ಸಮೀಕ್ಷೆಗಳು ಹೇಳಿತ್ತು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂತು. ಇಂಥ ಸಮೀಕ್ಷೆಗಳು ಅದರ ಅಂಕಿ ಅಂಶ ಕೇಳಲು ಖುಷಿಯಾಗಿರುತ್ತೆ ಹೊರತೂ ಜನರ ನಂಬಿಕೆಯನ್ನು ಪಡೆಯುವುದಿಲ್ಲ. ಸಮೀಕ್ಷೆಗಳನ್ನು ಸುಳ್ಳಾಗಿಸಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಎಂಬುದನ್ನು ನೆನಪಿಡಿ
ಸಮೀಕ್ಷೆಗಳನ್ನು ನೋಡಿ ಜನ ಮತ ಹಾಕುವುದಿಲ್ಲ. ಬಿಜೆಪಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನ ನೋಡಿದ್ದಾರೆ. ಹೀಗಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಸಮೀಕ್ಷೆಗಳು ತಲೆಕೆಳಗಾಗಲಿದೆ ನೋಡುತ್ತಿರಿ ಎಂದು ಶೆಟ್ಟರ್ ಹೇಳಿದರು.
ಬಿಜೆಪಿಗೆ ಒಂದು ಸ್ಪಷ್ಟತೆಯಿದೆ. ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಹೈಕಮಾಂಡ್ ಘೋಷಿಸಿದೆ. ಇದೇ ರೀತಿ ಕಾಂಗ್ರೆಸ್ ಕೂಡಾ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುವ ಧೈರ್ಯ ತೋರಲಿ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸಿಗೆ ಇಲ್ಲ ಎಂದು ಶೆಟ್ಟರ್ ಗುಡುಗಿದರು.
ರಾಯಚೂರು, ಯಾದಗಿರಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಶೆಟ್ಟರ್ ಅವರು, ಚೀಟಿ ಅವ್ಯವಹಾರ ನಡೆದಿದ್ದೇ ಆದರೆ ಕಾನೂನು ಹೋರಾಟ ಮಾಡಲಿ, ವೃಥಾ ಆರೋಪ ಮಾಡುವ ಮೂಲಕ ಕೆಜೆಪಿ ಕೀಳು ಮಟ್ಟದ ರಾಜಕೀಯ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ ಎಂದರು.
ಉಪಮುಖ್ಯಮಂತ್ರಿ ಆರ್ ಅಶೋಕ, ಮಾಜಿಮುಖ್ಯಮಂತ್ರಿ ಸದಾನಂದ ಗೌಡ ಆಲ್ಲದೆ ಇಡೀ ರಾಷ್ಟ್ರದಲ್ಲೇ ಎಲ್ಲಾ ಪಕ್ಷದ ನಾಯಕರಿಂದ ಗೌರವಿಸಲ್ಪಡುವ ಎಲ್ ಕೆ ಅಡ್ವಾಣಿ ಅವರ ಹೆಸರಿಗೆ ಕಳಂಕ ಹೊರೆಸುತ್ತಿರುವ ಕೆಜೆಪಿ ಮುಖಂಡ ಧನಂಜಯ್ ಕುಮಾರ್ ಅವರು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು, ಈ ರೀತಿ ಅಗ್ಗದ, ಹತಾಶೆ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಲಿ ಎಂದು ಶೆಟ್ಟರ್ ಹೇಳಿದರು.