ನಂಗೂ ಕ್ಲೀನ್ ಚಿಟ್ ಸಿಗಲಿದೆ : 2ಜಿ ರಾಜಾ

2ಜಿ ತರಂಗಾಂತರ ಹಗರಣದ ಪ್ರಕರಣದಲ್ಲಿ ಜಂಟಿ ಸಂಸದೀಯ ಸಮಿತಿಯು (ಜೆಪಿಸಿ), ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ದೋಷಮುಕ್ತಗೊಳಿಸಿದ ಬೆನ್ನಲ್ಲೇ ಎ ರಾಜಾ ಈ ರೀತಿ ಹೇಳಿಕೆ ನೀಡಿದ್ದಾರೆ.
ಈ ಹಗರಣದಿಂದ ರಾಷ್ಟ್ರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರೂಪಾಯಿಗಳ ನಷ್ಟವಾಗಿದೆ ಎಂಬ ಮಹಾಲೇಖಪಾಲರ ಅಂದಾಜಿಗೆ ಜೆಪಿಸಿ ತನ್ನ ಕರಡು ವರದಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿರುವುದು ಇಡೀ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ.
ತರಂಗಾಂತರ ಹಂಚಿಕೆಗೆ ನಿಗದಿ ಮಾಡಿದ್ದ ಕಡೆಯ ದಿನಾಂಕವನ್ನು ಬದಲಾಯಿಸಿದ್ದು ಆಗ ದೂರಸಂಪರ್ಕ ಸಚಿವರಾಗಿದ್ದ ಎ.ರಾಜಾ ಅವರು. ತರಂಗಾಂತರ ಹಂಚಿಕೆಯಲ್ಲಿ ಅಕ್ರಮ ನಡೆಯಲು ರಾಜಾ ಅವರ ನಿರ್ಧಾರವೇ ಕಾರಣ ಎಂದು ಜೆಪಿಸಿ ಹೇಳಿದೆ.
ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಎಂಕೆ ಮುಖಂಡ ಎ ರಾಜಾ ನಾನು ಟೆಲಿಕಾಂ ಸಚಿವನಾಗಿ ತೆಗೆದುಕೊಂಡ ನಿರ್ಣಯಗಳೆಲ್ಲ ಪ್ರಧಾನಿ ಹಾಗೂ ಅಂದಿನ ವಿತ್ತ ಸಚಿವ ಪಿ ಚಿದಂಬರಂ ಅವರಿಗೆ ಗೊತ್ತಿತ್ತು. ಈಗ ಅವರಿಬ್ಬರು ದೋಷಮುಕ್ತರಾದರೆ ನಾನು ಕೂಡಾ ದೋಷಮುಕ್ತ ಎಂದಿದ್ದಾರೆ.
ಫೆ.2 ರಂದು, 2011 ರಂದು ತಿಹಾರ್ ಜೈಲು ಸೇರಿದ್ದ ಮಾಜಿ ಸಚಿವ ರಾಜಾ ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಕೇಂದ್ರ ಗೃಹ ಸಚಿವ ಪಿ ಚಿದಂಬರಂ ಪುತ್ರ ಕಾರ್ತಿಕ್ ಬಹುಕೋಟಿ 2ಜಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಹ್ಮಣ್ಯ ಸ್ವಾಮಿ ಗಂಭೀರ ಆರೋಪ ಮಾಡಿದ್ದರು.
ಈ ನಡುವೆ ಬಿಜೆಪಿ ಹಾಗೂ ಸಿಪಿಐ ಪಕ್ಷಗಳು ಜೆಪಿಸಿ ವರದಿಯನ್ನು ತಿರಸ್ಕರಿಸಿದೆ. ಜೆಪಿಸಿ ಚೇರ್ಮನ್ ಚಾಕೋ ಅವರು ಕಾಂಗ್ರೆಸ್ ನಾಯಕರಂತೆ ವರ್ತಿಸುತ್ತಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಪಿ ಚಿದಂಬರಂ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿವೆ.












Click it and Unblock the Notifications