ಎಲೆಕ್ಷನ್ ಬಸ್ ಮಿಸ್; ವಿದೇಶಕ್ಕೆ ಹೊರಟುನಿಂತ ಕೃಷ್ಣ

ಮಾಜಿ ವಿದೇಶ ಸಚಿವ, ಮಂಡ್ಯದ ವರ್ಚಸ್ವಿ ನಾಯಕ ಎಸ್ಎಂ ಕೃಷ್ಣ ಅವರು ಬರೋಬ್ಬರಿ 10 ದಿನಗಳ ಕಾಲ ವಿದೇಶಕ್ಕೆ ಹೊರಟಿದ್ದಾರೆ. ಮುಖ್ಯವಾಗಿ ಸ್ವಕ್ಷೇತ್ರ ಮಂಡ್ಯದಲ್ಲಿ ತಮ್ಮ ವಿರುದ್ಧವೇ ಬಂಡಾಯ ಎದ್ದಿರುವುದರ ವಿರುದ್ಧ ತೀವ್ರವಾಗಿ ಅಸಮಾಧಾನಗೊಂಡಿರುವ ಹಿರಿಯ ನಾಯಕ ಕೃಷ್ಣ ಅವರು ಇದೇ ಏಪ್ರಿಲ್ 21 ರಂದು ವಿದೇಶಕ್ಕೆ ಹೊರಡಲಿದ್ದಾರೆ.
ಪ್ರಚಾರಕ್ಕೆ 'ಕೈ' ಕೊಟ್ಟ ಕೃಷ್ಣ: ಅನಾರೋಗ್ಯದ ನೆಪವೊಡ್ಡಿ ರಾಜ್ಯ ಚುನಾವಣೆ ಬಸ್ ಮಿಸ್ ಮಾಡಿಕೊಳ್ಳಲು ನಿರ್ಧರಿಸಿರುವ ಕೃಷ್ಣ, ಸೂಕ್ತ ಚಿಕಿತ್ಸೆಗಾಗಿ ವಿದೇಶಕ್ಕೆ ಹೊರಡಲು ಅನುವಾಗಿದ್ದಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಪಕ್ಷವನ್ನು ತಮ್ಮ ವಿಷಯದಲ್ಲಿ ಕೆಟ್ಟದಾಗಿ ನಡೆಸಿಕೊಂಡಿದೆ ಎಂದು ಬೇಸತ್ತು, ಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವುದು ಬೇಡವೆಂದು 80 ವರ್ಷದ ಕೃಷ್ಣ ಅವರು ಅನಾರೋಗ್ಯದ ನೆಪವೊಡ್ಡಿ ವಿದೇಶಕ್ಕೆ ತೆರಳಲಿದ್ದಾರೆ.
ರಾಜ್ಯದ ಗೊಡವೆಯೇ ಬೇಡ: ಸ್ವ ಕ್ಷೇತ್ರದಲ್ಲಿ ತಮ್ಮ ಕೈ ಮೇಲಾಗಲಿಲ್ಲ, ಬೆಂಬಲಿಗ ರವೀಂದ್ರ ಶ್ರೀಕಂಠಯ್ಯಗೆ ನೀಡಿದ್ದ ಟಿಕೆಟ್ ವಾಪಸ್ ತೆಗೆದುಕೊಂಡಿದ್ದು, ನಟ ಅಂಬರೀಷ್ ಗೆ ಮಣೆ ಹಾಕಿದ್ದು, ಪುತ್ರಿ ಶಾಂಭವಿಗೆ ಟಿಕೆಟ್ ಸಿಗದಿರುವುದು, ಇನ್ನು ಮಂಡ್ಯ ಬಿಟ್ಟು ರಾಜ್ಯದ ಇತರೆ ಕ್ಷೇತ್ರಗಳಲ್ಲೂ ತಾವು ಸೂಚಿಸಿದ ಅಭ್ಯರ್ಥಿಗೆ ಟಿಕೆಟ್ ನೀಡದಿರುವುದು, ಪಕ್ಷದಲ್ಲಿ ತಮಗೆ ಮಹತ್ವದ ಆಯಕಟ್ಟಿನ ಸ್ಥಾನ ನೀಡದಿರುವುದು...
ಇವೇ ಮುಂತಾದ ಕಾರಣಗಳಿಂದಾಗಿ ತೀವ್ರವಾಗಿ ಅಸಮಾಧಾನಗೊಂಡಿರುವ ಕೃಷ್ಣ ರಾಜ್ಯದ ಗೊಡವೆಯೇ ಬೇಡವೆಂದು ನಾಳೆಯಿಂದಲೇ ವಿದೇಶಕ್ಕೆ ಹಾರಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications