ಸ್ಫೋಟ: ಅಮಾಯಕ ಗಾಯಾಳುಗಳಿಗೆ ಯಾರು ದಿಕ್ಕು?
ಬೆಂಗಳೂರು, ಏ.17: ಸಣ್ಣ ಪುಟ್ಟ ಅಪಘಾತ ನಡೆದರೂ ಗಾಯಾಳುಗಳತ್ತ ತಕ್ಷಣವೇ ಧಾವಿಸುತ್ತಿದ್ದ ರಾಜಕೀಯ ಮುಖಂಡರು ಇಂದೇಕೋ ಹಿಂದೇಟು ಹಾಕಿದ್ದರು. ಬಿಜೆಪಿ ಕಚೇರಿ ಬಳಿಯ ಸ್ಫೋಟದಲ್ಲಿ ಗಾಯಗೊಂಡವರಿಗೆ ಮಧ್ಯಾಹ್ನದ ತನಕ ಮುಂದೇನು ಎಂಬ ಪ್ರಶ್ನೆ ಕಾಡುತ್ತಿತ್ತು.
ಜನ ನಾಯಕರ ವಿಳಂಬ ನೀತಿಗೆ ಚುನಾವಣಾ ನೀತಿ ಸಂಹಿತೆ ಕಾರಣವೇ? ಗೃಹ ಆರ್ ಅಶೋಕ್ ಅವರು ನಿಧಾನಗತಿಯಿಂದ ಪ್ರತಿಕ್ರಿಯೆ ನೀಡಿ ಬಿಜೆಪಿ ನಾಯಕರೇ ಟಾರ್ಗೆಟ್ ಎಂದಿದ್ದಾರೆ. ಆದರೆ, ಸ್ಫೋಟದ ಬಗ್ಗೆ ಮುಂಚಿತವಾಗಿ ಮಾಹಿತಿ ಇತ್ತು ಇಲ್ಲ ಎಂಬುದರ ಬಗ್ಗೆ ತುಟಿ ಬಿಚ್ಚಿಲ್ಲ.
ಬಿಜೆಪಿ ನಾಯಕರೇ ಟಾರ್ಗೆಟ್ ಆಗಿದ್ದರೆ ನೇರ ಕಚೇರಿ ಹತ್ತಿರವೇ ಬಾಂಬ್ ಇಡುತ್ತಿದ್ದರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ನೆನಪಿರಲಿ ಬಿಜೆಪಿ ಕಚೇರಿಯಲ್ಲಿ ಬಿಟ್ಟರೆ ಆಯಕಟ್ಟಿನ ಜಾಗದಲ್ಲಿ ಎಲ್ಲೂ ಸಿಸಿಟಿವಿ ಕೆಮೆರಾ ಇಲ್ಲ.

ಆದರೆ, ಬಿಜೆಪಿ ಕಚೇರಿ ಕೆಮರಾದಿಂದ ಪಡೆದ ಮಾಹಿತಿ ಪ್ರಕಾರ 2 ಕೆಜಿ ಗ್ರೇಡ್ 1 ಸ್ಫೋಟಕ ವಸ್ತುಗಳನ್ನು ಬಳಸಲಾಗಿದೆ. ಸುಧಾರಿತ ಸ್ಫೋಟಕ ಸಾಧಕ ಇದಾಗಿದ್ದು ರಿಮೋಟ್ ಗುಂಡಿ ಅದುಮಿ ಸ್ಫೋಟ ಮಾಡಬಹುದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಂತ್ರಸ್ತರ ಪಾಡು: ಮಧ್ಯಾಹ್ನದ ನಂತರ ಸಚಿವ ಸುರೇಶ್ ಕುಮಾರ್, ಶಾಸಕ ಅಶ್ವಥನಾರಾಯಣ ಅವರು ಬಾಂಬ್ ಸ್ಫೋಟ ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ತೆರಳಿದರು. ನಂತರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಹಾಗೂ ಅರವಿಂದ ಲಿಂಬಾವಳಿ ಭೇಟಿ ನೀಡಿದರು.
ಕೆಸಿ ಜನರಲ್ ಆಸ್ಪತ್ರೆ, ವಿಠಲ್ ಮಲ್ಯ ಹಾಗೂ ನಿಮ್ಹಾನ್ಸ್ ನಲ್ಲಿ ದಾಖಲಾಗಿರುವ ಎಲ್ಲಾ ಸ್ಫೋಟ ಸಂತ್ರಸ್ಥ ಗಾಯಾಳುಗಳಿಗೆ ಉಚಿತ ಚಿಕಿತ್ಸೆ ಭರವಸೆಯನ್ನು ಬಿಜೆಪಿ ನಾಯಕರು ನೀಡಿದರು.
ಗಾಯಗೊಂಡವರು: ಮೇಲ್ನೊಟಕ್ಕೆ ಕೆಎಸ್ ಆರ್ಪಿ ಪೊಲೀಸರೇ ಟಾರ್ಗೆಟ್ ಎನ್ನಬಹುದು ಸುಮಾರು 11 ಜನ ಪೊಲೀಸರು ಗಾಯಗೊಂಡಿದ್ದಾರೆ. ರಾಮೇಗೌಡ, ವೆಂಕಟಪ್ಪ, ವಿಶ್ವೇಶ್ವರಯ್ಯ, ನಾಗರಾಜ್, ನಾಗೇಶ್ವರ್, ರಂಜಿತಾ, ಜೇಡ್ರಪ್ಪ ಗಾಯಗೊಂಡಿರುವ ಪೊಲೀಸರು. ಗಾಯಗೊಂಡವರಲ್ಲಿ ಮೂವರಿಗೆ ಕಿವಿ ಕೇಳಿಸುತ್ತಿಲ್ಲ. ನಿಷಾ ಹಾಗೂ ರಕ್ಷಿತಾ ಎಂಬ ವಿದ್ಯಾರ್ಥಿನಿಯರು ಸಿಇಟಿ ಪರೀಕ್ಷೆ ಟ್ಯೂಷನ್ ಗೆ ತೆರಳುತ್ತಿದ್ದವರು ಸ್ಫೋಟಕ್ಕೆ ಸಿಲುಕಿದ್ದಾರೆ. ಉಳಿದಂತೆ ಬಾಲಕೃಷ್ಣ, ಸದೀನ್ ಷಾ ಎಂಬುವರು ಕೂಡಾ ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಫೋಟಗೊಂಡ ಬೈಕ್ ಆಂಧ್ರಪ್ರದೇಶದ ಆದಿಲಾಬಾದ್ ನ ವ್ಯಕ್ತಿಗೆ ಸೇರಿದ್ದು ನಂತರ ಅದಕ್ಕೆ ತಮಿಳು ನಾಡಿನ ನೋಂದಣಿ ಸಂಖ್ಯೆ ಅಳವಡಿಸಲಾಗಿತ್ತು ಎಂದು ತಿಳಿದು ಬಂದಿದೆ. ಹತ್ತಿ ಉರಿದ ಓಮ್ನಿ ಕಾರು ಬಿಜೆಪಿ ಕಚೇರಿ ಸಿಬ್ಬಂದಿ ಕೃಷ್ಣ ಅವರಿಗೆ ಸೇರಿದ್ದು, ಅದರಲ್ಲಿ ಗ್ಯಾಸ್ ಸಿಲೆಂಡರ್ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications