ಬಳ್ಳಾರಿ: ಭೀಕರ ಅಪಘಾತಕ್ಕೆ ಆರು ಮಂದಿ ಬಲಿ

ಸೋಮಸಮುದ್ರದ ಬಳಿಯಿರುವ ರಾಜ್ಯ ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುತ್ತಿದ್ದ ಟ್ರ್ಯಾಕ್ಸ್ ವಾಹನ, ರಸ್ತೆಯ ತಿರುವಿನಲ್ಲಿ ತಡೆಗೋಡೆಗೆ ಡಿಕ್ಕಿ ಹೊಡೆದು ಮಗುಚಿಕೊಂಡಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕ ಸೇರಿದಂತೆ 6 ಮಂದಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಅಪಘಾತಕ್ಕೊಳಗಾದ ಟ್ರ್ಯಾಕ್ಸ್ ವಾಹನ ಕುರುಗೋಡು ಪಟ್ಟಣದಿಂದ ಬಳ್ಳಾರಿಯ ಕಡೆಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದು ಎಂದು ಪ್ರತ್ಯಕ್ಷದರ್ಶಿ ಸ್ವಾಮಿ ಎಂಬುವವರು ಖಾಸಗಿ ಸುದ್ದಿವಾಹನದ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಮೃತಪಟ್ಟವರಲ್ಲಿ ಮೂವರು ಪುರುಷರು, ಇಬ್ಬರು ಮಹಿಳೆಯರು ಮತ್ತು ಒಂದು ಮಗು ಸೇರಿ ಒಟ್ಟು ಆರು ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ ವಾಹನದಲ್ಲಿದ್ದ 8-10 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮೃತರ ಗುರುತು ಪರಿಚಯ ಇನ್ನೂ ಲಭ್ಯವಾಗಿಲ್ಲ. ಮೃತರು ಕುರುಗೋಡು ಮೂಲದವರು ಇರಬಹುದು ಎನ್ನಲಾಗಿದೆ.
ವಾಹನದಲ್ಲಿ ಎಷ್ಟು ಮಂದಿ ಪ್ರಯಾಣಿಕರಿದ್ದರು ಎನ್ನುವ ಕುರಿತು ಖಚಿತ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಆದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ ಜಾತ್ರೆ ಸಂದರ್ಭವಾದ್ದರಿಂದ ವಾಹನದಲ್ಲಿ ಸುಮಾರು 15 ರಿಂದ 18 ಮಂದಿ ಪ್ರಯಾಣಿಕರು ಇದ್ದಿರಬಹುದಾದ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದ್ದು, ಘಟನಾ ಸ್ಥಳಕ್ಕೆ ಮೂರು 108 ಆಂಬುಲೆನ್ಸ್ಗಳು ದೌಡಾಯಿಸಿವೆ. ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications