ಮೋದಿ ವಿರುದ್ಧ ಮತ್ತೆ ಗುಡುಗಿದ ಜೆಡಿಯು

ಆರಂಭದಿಂದಲೂ ಮೋದಿ ಬಗ್ಗೆ ಅಪಸ್ವರ ಎತ್ತುತ್ತಿದ್ದ ಜೆಡಿಯು, ಅಧಿಕೃತವಾಗಿ ತನ್ನ ತೀರ್ಮಾನವನ್ನು ಶನಿವಾರ ಆರಂಭವಾದ ಪಕ್ಷದ ರಾಷ್ಟ್ರೀಯ ಕಾರ್ಯಾಕಾರಿಣಿ ಸಭೆಯಲ್ಲಿ ವ್ಯಕ್ತಪಡಿಸಿದೆ. 2002ರಲ್ಲಿ ಗೋಧ್ರಾ ಹತ್ಯಾಕಾಂಡದ ನಂತರದ ಹಿಂಸಾಚಾರವನ್ನು ನಿಭಾಯಿಸುವಲ್ಲಿ ನರೇಂದ್ರ ಮೋದಿ ವಿಫಲರಾಗಿದ್ದಾರೆ ಎಂದು ಜೆಡಿಯು ಆರೋಪಿಸಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಜೆಡಿಯು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲಿದೆ ಎನ್ನುವ ವಿಚಾರಗಳಿಗೂ ಪಕ್ಷ ತೆರೆಳೆದಿದ್ದು, ನಿತೀಶ್ ಕುಮಾರ್ ಪಕ್ಷದ ಪ್ರಧಾನಿ ಅಭ್ಯರ್ಥಿಯಲ್ಲ ಎಂದು ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಸ್ಪಷ್ಟ ಪಡಿಸಿದ್ದಾರೆ.
ಎನ್ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾರು ಎಂದು ಬಿಜೆಪಿಯ ಸಂಸದೀಯ ಮಂಡಳಿ ತೀರ್ಮಾನ ತೆಗೆದುಕೊಳ್ಳಬೇಕು. ನಂತರ ಪಕ್ಷ ನಿಲುವು ತಿಳಿಸುತ್ತೇವೆ. ಆದರೆ, ಬಿಜೆಪಿ ಮೋದಿ ಅವರ ಹೆಸರು ಸೂಚಿಸಿದರೆ ನಮ್ಮ ವಿರೋಧವಿದೆ ಎಂದು ತ್ಯಾಗಿ ತಿಳಿಸಿದ್ದಾರೆ.
ಜಾತ್ಯತೀತ ನಿಲುವು ಮುಖ್ಯ: ದೇಶದ ಪ್ರಧಾನಿ ಹುದ್ದೆ ಪವಿತ್ರವಾದುದು. ಪ್ರಧಾನಿ ಅಭ್ಯರ್ಥಿ ಸಂಬಂಧ ಜೆಡಿಯು ಕೆಲವು ತತ್ತ್ವಗಳನ್ನು ಅನುಸರಿಸಲಿದೆ. ಪ್ರಧಾನಿ ಅಭ್ಯರ್ಥಿಯು ಜಾತ್ಯತೀತ ನಿಲುವುಗಳನ್ನು ಹೊಂದಿರಬೇಕು ಎಂಬುದು ಮುಖ್ಯ ತತ್ವ.
ಅಲ್ಲದೇ ಹಿಂದುಳಿದ ರಾಜ್ಯಗಳ ಹಿತಕಾಯಲು ಬದ್ಧನಾಗಿರುವ ವ್ಯಕ್ತಿ ಪ್ರಧಾನಿ ಯಾಗಬೇಕು. ಪ್ರಧಾನಿ ಅಭ್ಯರ್ಥಿ ಬಗ್ಗೆ ಎನ್ಡಿಎ ಒಮ್ಮತದಿಂದ ತೀರ್ಮಾನ ಕೈಗೊಳ್ಳಲಿದೆ ಎಂದು ಜೆಡಿಯು ಕಾರ್ಯಕಾರಣಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಬಿಜೆಪಿ ಹೊರತುಪಡಿಸಿದರೆ ಎನ್ಡಿಎ ಮೈತ್ರಿಕೂಟದಲ್ಲಿ ಜೆಡಿಯು ಎರಡನೇ ದೊಡ್ಡ ಪಕ್ಷ. ಲೋಕಸಭೆಯಲ್ಲಿ 20 ಸಂಸದರನ್ನು ಜೆಡಿಯು ಹೊಂದಿದೆ. ಆದ್ದರಿಂದ ಪಕ್ಷದ ವಿರೋಧ ಕಟ್ಟಿಕೊಂಡು ಬಿಜೆಪಿ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿ ಚುನಾವಣೆ ಎದುರಿಸುವುದು ಅಷ್ಟು ಸುಲಭವಲ್ಲ.
ಎಲ್ಲಾ ಸರಿಹೋಗುತ್ತೆ : ಜೆಡಿಯು ನಮ್ಮ ಹಳೆಯ ಮಿತ್ರ. ನರೇಂದ್ರ ಮೋದಿಯನ್ನು ಬಿಜೆಪಿಯು 2014ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿಸಲು ಹೊರಟಿದೆ. ಈ ಬಗ್ಗೆ ಜೆಡಿಯುಗೆ ಅಸಮಾಧಾನವಿದೆ. ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳುತ್ತೇವೆ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications