ಕರಾವಳಿ ಕೆಜೆಪಿಯಲ್ಲಿ ಎದ್ದಿದೆ ಕಿರಿಕ್ ಅಲೆ

ವಿಷಯ ತಿಳಿದ ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಇರಸು ಮುರುಸಾಗಿದೆಯಂತೆ. ಜಿಲ್ಲಾ ಉಸ್ತುವಾರಿ ಹಾಗೂ ಪಕ್ಷದ ವಕ್ತಾರ ವಿ ಧನಂಜಯ್ ಕುಮಾರ್ ಅವರು ಸರ್ವಾಧಿಕಾರಿ ಧೋರಣೆ ತೋರಿಸುತ್ತಿದ್ದಾರೆ ಪರಿಸ್ಥಿತಿ ಬದಲಾಗದಿದ್ದಾರೆ ನಾವು ಸಾಮೂಹಿಕ ರಾಜೀನಾಮೆ ಕೊಡುತ್ತೀವಿ ಮರಾಯ್ರೆ ಎಂದು ದ.ಕ. ಕೆಜೆಪಿ ಘಟಕದ ಎಲ್ಲಾ ಸದಸ್ಯರು ಬೆದರಿಕೆ ಒಡ್ಡಿದ್ದಾರೆ.
ಏನಿದು ಕಿರಿಕ್?: ಧನಂಜಯ್ ಕುಮಾರ್ ಅವರು ಜಿಲ್ಲೆಯಲ್ಲಿ ಅರ್ಹ ಅಭ್ಯರ್ಥಿಗಳನ್ನು ಬಿಟ್ಟು ತಮ್ಮ ಆಪ್ತರನ್ನು ಪಟ್ಟಿಯಲ್ಲಿ ಸೇರಿಸಿ ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಗೆ ಕಳಿಸಿದ್ದಾರೆ. ಜಿಲ್ಲಾ ಘಟಕ ನೀಡಿದ್ದ ಒಂದು ಹೆಸರನ್ನೂ ಕೂಡಾ ಪಟ್ಟಿಯಲ್ಲಿ ಸೇರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲಾ ಘಟಕದ ಮುಖ್ಯಸ್ಥ ರವೀಂದ್ರ ಶೆಟ್ಟಿ ಸೇರಿದಂತೆ ಜಿಲ್ಲಾ ಮುಖಂಡರು ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಯತ್ನಿಸಿ ವಿಫಲರಾಗಿದ್ದಾರೆ.
ದ.ಕ ಜಿಲ್ಲಾ ಘಟಕದ ಸದಸ್ಯರಿಗೆ ನಿರಾಸೆಯ ಉತ್ತರ ಕೇಳಿ ಬಂದಿದೆ. ಸ್ವಾಮೀಜಿ ಗಳೊಬ್ಬರ ಶಿಫಾರಸು ಪತ್ರ ಪಡೆದು ಬಂದಿದ್ದ ಅಭ್ಯರ್ಥಿಯೊಬ್ಬರಿಗೆ ತಕ್ಷಣ ಟಿಕೆಟ್ ನೀಡುವ ಭರವಸೆ ನೀಡಲಾಗಿದೆ.
ಜಿಲ್ಲಾ ಘಟಕ ಯೋಗೀಶ್ ಶೆಟ್ಟಿ ಹೆಸರನ್ನು ಒಕ್ಕೊರಲಿನಿಂದ ಒಪ್ಪಿಗೆ ಪಡೆದು ಪಟ್ಟಿಗೆ ಸೇರಿಸಿತ್ತು. ಆದರೆ, ಕಾರ್ಯಕರ್ತರಿಗೂ ತಿಳಿಯದ ದಯಾನಂದ ಶೆಟ್ಟಿ ಎಂಬುವರ ಹೆಸರು ಕಾಣಿಸಿಕೊಂಡಿದೆ. ಜೊತೆಗೆ ಸುಳ್ಯದಲ್ಲಿ ಕುಞ ರಾಮನ್ ಬದಲಿಗೆ ಚಂದ್ರಾವತಿ ಹೆಸರು ಸೇರಿದೆ. ಉದ್ಯಮಿಗಳು, ಸ್ಥಿತಿವಂತರು, ಶಿಫಾರಸು ಪತ್ರದ ಲಾಬಿಗೆ ಮಣೆ ಹಾಕಲಾಗಿದೆ ಎಂದು ದಕ ಘಟಕ ಆರೋಪಿಸಿದೆ.
ಈ ನಡುವೆ ಮಂಗಳೂರು ಸಿಟಿ(ದಕ್ಷಿಣ) ಟಿಕೆಟ್ ಆಕಾಂಕ್ಷಿ ಮಾರಿಯಂ ಥಾಮಸ್ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ತಕ್ಷಣಕ್ಕೆ ಗೊಂದಲ ಬಗೆಹರಿಯದಿದ್ದರೆ, ಮಂಗಳೂರು ಘಟಕ ಯುದ್ಧಕ್ಕೆ ಮುನ್ನವೇ ಶಸ್ತ್ರತ್ಯಾಗ ಮಾಡಿ ಬಾಗಿಲು ಮುಚ್ಚುವ ಭೀತಿ ಎದುರಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications