ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಶೆಟ್ಟರು

ಬಿಜೆಪಿ ಶುಕ್ರವಾರ ಪ್ರಕಟಿಸಿದ್ದ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೃಷ್ಣಯ್ಯ ಶೆಟ್ಟಿ ಅವರ ಹೆಸರು ಇರಲಿಲ್ಲ. ಇದರಿಂದ ನೊಂದು ಶೆಟ್ಟರು ತಾವು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಸಮಾಜ ಸೇವೆಯೇ ನನ್ನ ಗುರಿ. ಶಾಸಕನಾಗಿರದಿದ್ದರೂ ಸಮಾಜ ಸೇವೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು.
ಶೆಟ್ಟರ ನಿರ್ಧಾರದಿಂದ ಕೆರಳಿದ ಅವರ ಬೆಂಬಲಿಗರು ಬಿಜೆಪಿ ಟಿಕೆಟ್ ಅವರಿಗೆ ನೀಡಬೇಕು. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಅಖಾಡಕ್ಕೆ ಇಳಿಸಿ ಗೆಲ್ಲಿಸುವುದಾಗಿ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.
ಕಣ್ಣೀರಿಟ್ಟ ಶೆಟ್ಟರು : ಸೋಮವಾರ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೃಷ್ಣಯ್ಯ ಶೆಟ್ಟಿ, ತಮ್ಮ ರಾಜಕೀಯ ನಿವೃತ್ತಿ ನಿರ್ಧಾರವನ್ನು ಕಾರ್ಯಕರ್ತರ ಒತ್ತಡಕ್ಕೆ ಮಣಿದು ಹಿಂಪಡೆಯುತ್ತಿದ್ದೇನೆ. ಬಿಜೆಪಿ ಅಭ್ಯರ್ಥಿಯಾಗಿ ಮಾಲೂರು ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ತಿಳಿಸಿದರು.
ಬಿಜೆಪಿ ಪಕ್ಷಕ್ಕೆ ಸಾಕಷ್ಟು ಸಹಾಯ ಮಾಡಿದ್ದೇನೆ. ಸಮಾವೇಶಗಳಿಗೆ ಕಾರ್ಯಕರ್ತರನ್ನು ಕರೆಂದಿದ್ದೇನೆ. ಆದರೆ, ನನ್ನಂತ ನಿಷ್ಟಾವಂತರಿಗೆ ಪಕ್ಷ ಟಿಕೆಟ್ ನೀಡದೆ ಸತಾಯಿಸುತ್ತಿದೆ ಎಂದು ಕೃಷ್ಣಯ್ಯ ಶೆಟ್ಟಿ ಗಳಗಳನೆ ಅತ್ತರು. ಅಂತೂ ಎರಡು ದಿನಗಳ ಬೃಹನ್ನಾಟಕ ಕೊನೆಗೊಂಡಿದ್ದು, ಶೆಟ್ಟರ ರಾಜಕೀಯ ನಿವೃತ್ತಿ ನಿರ್ಧಾರ ಬದಲಾಯಿಸಿಕೊಂಡಿದ್ದಾರೆ.
ಟಿಕೆಟ್ ಸಿಗುತ್ತಾ : ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪ ಸಾಬೀತಾಗಿ ಜೈಲಿಗೆ ಹೋಗಿ ಬಂದವರಿಗೆ ಟಿಕೆಟ್ ನೀಡಬಾರದು ಎಂಬುದು ಬಿಜೆಪಿಯ ನಿಯಮ. ಆದರೆ, ಕಟ್ಟಾ ಸುಬ್ರಮಣ್ಯ ನಾಯ್ಡ ಮತ್ತು ಕೃಷ್ಣಯ್ಯ ಶೆಟ್ಟಿ ಗೆಲ್ಲುವ ಅಭ್ಯರ್ಥಿಗಳೆಂದು ಅವರಿಗೆ ಟಿಕೆಟ್ ನೀಡುವ ಕುರಿತು ಚರ್ಚೆ ನಡೆದಿತ್ತು.
ಆದರೆ, ಪಕ್ಷದ ದೆಹಲಿ ಮೂಲಗಳ ಮಾಹಿತಿ ಪ್ರಕಾರ ಟಿಕೆಟ್ ಗಾಗಿ ರಾಜ್ಯ ನಾಯಕರು ಕಳುಹಿಸಿರುವ ಪಟ್ಟಿಯಲ್ಲಿ ಕೃಷ್ಣಯ್ಯ ಶೆಟ್ಟಿ ಮತ್ತು ಕಟ್ಟಾ ಹೆಸರು ಕಾಣೆಯಾಗಿದೆ. ಆದ್ದರಿಂದ ಉಭಯ ಮಾಜಿ ಸಚಿವರಿಗೂ ಟಿಕೆಟ್ ದೊರೆಯುವುದು ಖಚಿತವಾಗಿಲ್ಲ.
ರಾಜನಾಥ್ ಸಿಂಗ್ ಸ್ಪಷ್ಟನೆ : ರಾಜ್ಯ ನಾಯಕರು ಕಳುಹಿಸಿದ ಅಭ್ಯರ್ಥಿಗಳ ಶಿಫಾರಸ್ಸಿನ ಪಟ್ಟಿಯಲ್ಲಿ ಕಟ್ಟಾ ಮತ್ತು ಕೃಷ್ಣಯ್ಯ ಶೆಟ್ಟಿ ಹೆಸರು ಇರಲಿಲ್ಲ ಎಂದು ಸೋಮವಾರ ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ. ಇದರಿಂದ ರಾಜ್ಯ ನಾಯಕರು ಈ ಇಬ್ಬರು ಶಾಸಕರಿಗೆ ಟಿಕೆಟ್ ನೀಡಲು ನಿರ್ಧರಿಸಿಲ್ಲ ಎಂಬುದು ಸ್ಪಷ್ಟವಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications