ಭ್ರಷ್ಟ ಕರ್ನಾಟಕ ಬಿಜೆಪಿಗೆ NO ಅಂದ ಮೋದಿ
ನವದೆಹಲಿ, ಏ.6: ಕರ್ನಾಟಕದ ಭಾರತೀಯ ಜನತಾ ಪಕ್ಷಕ್ಕೆ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಸ್ಪಷ್ಟವಾಗಿ NO ಅಂದಿದ್ದಾರೆ. ರಾಜ್ಯ ಬಿಜೆಪಿ ಚುನಾವಣೆಯ ಹೊಸ್ತಿಲಲ್ಲಿದೆ. ನೀವೊಬ್ಬ ಯಶಸ್ವೀ ಮುಖ್ಯಮಂತ್ರಿ. ನಮ್ಮಲ್ಲಿಗೆ ಬಂದು ಒಂದೆಷ್ಟು ಪ್ರಚಾರ ಮಾಡಿ. ನಮ್ಮನ್ನು ದಡ ಸೇರಿಸಿ ಎಂದು ರಾಜ್ಯ ಬಿಜೆಪಿ ನಾಯಕರು ಮೋದಿಯನ್ನು ಅಲವತ್ತುಕೊಂಡಿದ್ದರು.
ಆದರೆ ವಾಸ್ತವದ ಅರಿವಿರುವ ಮೋದಿ ನಾ ಒಲ್ಲೆ ಅಂದುಬಿಟ್ಟಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯದ್ದು lost cause. ಅಲ್ಲಿಗೆ ಬಂದು ನನ್ನ ಕೈ ಕೆಸರು ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಕರ್ನಾಟಕ ಚುನಾವಣೆಗೆ ಸಂಬಂಧಪಟ್ಟಂತೆ ಶುಕ್ರವಾರ ಬಿಜೆಪಿ ಪಕ್ಷ ಮಹತ್ವದ ಸಭೆ ನಡೆದಿದೆ. ಬಿಜೆಪಿ ಕೇಂದ್ರ ಚುನಾವಣೆ ಸಮಿತಿಯಲ್ಲಿ ಸ್ಥಾನ ಪಡೆದಿರುವ ಮೋದಿ ಈ ಸಭೆಯಲ್ಲಿ ಆದ್ಯವಾಗಿ ಪಾಲ್ಗೊಳ್ಳಬೇಕಿತ್ತು. ಆದರೆ ಸಭೆಗೆ ಅವರು ಬರಲೇ ಇಲ್ಲ.
ಚುನಾವಣೆ ಸಮಿತಿ ಮತ್ತು ಸಂದೀಯ ಮಂಡಳಿಯಲ್ಲಿ ಸ್ಥಾನ ಪಡೆದು ಪ್ರಧಾನಿ ಪೀಠದತ್ತ ದೃಢ ಜೆಹ್ಹೆ ಹಾಕುತ್ತಿರುವ ಮೋದಿಗೆ ಕರ್ನಾಟಕದ್ದು ಚೊಚ್ಚಲ ಚುನಾವಣೆ. ಹಾಗಾಗಿ ಪ್ರಥಮ ಚುಂಬನಂ ದಂತ ಭಗ್ನಂ ಅನ್ನಿಸಿಕೊಂಡು ಕಳಂಕ ಮೆತ್ತಿಕೊಳ್ಳಲು ಮೋದಿಗೆ ಸುತರಾಂ ಇಷ್ಟವಿಲ್ಲ. ಹಾಗಾಗಿ ಸಭೆಯಿಂದ ದೂರವುಳಿಯುವ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ಹಿರಿಯ ನಾಯಕರು ಹೇಳಿದ್ದಾರೆ.
ಈ ಮಧ್ಯೆ, ಏಪ್ರಿಲ್ 9ರಂದು ಕರ್ನಾಟಕ ಚುನಾವಣೆ ಕುರಿತು ಬಿಜೆಪಿ ಕೇಂದ್ರ ಚುನಾವಣೆ ಸಮಿತಿ ಸಭೇ ಸೇರಲಿದೆ. ಆದರೆ ಮೋದಿ ಅದರಲ್ಲಿ ಪಾಲ್ಗೊಳ್ಳುತ್ತಾರೋ, ಇಲ್ಲವೋ ಇನ್ನು ತಿಳಿದುಬಂದಿಲ್ಲ.
ಕುತೂಹಲಕಾರಿ ಸಂಗತಿಯೆಂದರೆ ಕರ್ನಾಟಕ ಬಿಜೆಪಿ ಎರಡನೆಯ ವಿಜಯ ಸಂಕಲ್ಪ ಸಮ್ಮೇಳನ ಆಯೋಜಿಸಿದೆ. ಮೈಸೂರಿನಲ್ಲಿ ನಡೆದ ಮೊದಲ ಸಮ್ಮೇಳನದ ನಂತರ ಸೋಮವಾರ ಬೆಂಗಳೂರಿನಲ್ಲಿ ಈ ಸಮಾವೇಶವನ್ನು ನಡೆಸಲಿದ್ದು, ಕೇಂದ್ರದಿಂದ ಘಟಾನುಘಟಿಗಳೇ ಅರಮನೆ ಮೈದಾನದತ್ತ ಧಾವಿಸುತ್ತಿದ್ದಾರೆ.
ಆದರೆ ಗಮನಿಸಿ. ನರೇಂದ್ರ ಮೋದಿ ಮಾತ್ರ ಅದರಲ್ಲಿ ಪಾಲ್ಗೊಳ್ಳುತ್ತಿಲ್ಲ. ಏಕೆಂದರೆ ಮೋದಿ ಅವರು ದೆಹಲಿಯಲ್ಲಿ ಅಂದು ನಡೆಯುವ FICCI ಮಹಿಳಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.












Click it and Unblock the Notifications