ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಏ.7 ಕೊನೆ ದಿನ

ಬೆಂಗಳೂರು ಮಹಾನಗರ ವ್ಯಾಪ್ತಿ ಮತ್ತು ಕರ್ನಾಟಕದಲ್ಲಿ ಮತಪಟ್ಟಿಯಲ್ಲಿ ಸೇರಿಸಲು ಬಂದಿರುವ ಅರ್ಜಿಗಳ ಬಗ್ಗೆ ಮಂಗಳವಾರ ವಿವರಣೆಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ನೀಡಿದರು. ಹಾಗೆಯೆ, ಏ.7ರೊಳಗೆ ಎಲ್ಲ ಅರ್ಹ ಮತದಾರರು ಮತಪಟ್ಟಿಯನ್ನು ಪರಿಶೀಲಿಸಬೇಕೆಂದು ಅವರು ಆಗ್ರಹಿಸಿದರು.
ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 28 ಕ್ಷೇತ್ರಗಳ ಒಟ್ಟಾರೆ ಜನಸಂಖ್ಯೆಯಲ್ಲಿ ಜನವರಿ 28ರ ನಂತರ ಒಟ್ಟು 3.02 ಲಕ್ಷದ ಮೇಲ್ಪಟ್ಟು ಹೊಸ ಅರ್ಜಿಗಳು ಫಾರಂ 6ರಲ್ಲಿ ಬಂದಿವೆ. ಪ್ರಸ್ತುತ 64.41 ಲಕ್ಷ ಮತದಾರರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿದ್ದು ಒಟ್ಟಾರೆಯಾಗಿ ಶೇ. 65ರಷ್ಟು ಮತದಾರರ ಗುರಿ ಆಯೋಗದ ಮುಂದಿದೆ. ನಾವು ಈಗಾಗಲೇ ಶೇ. 62ರ ಗುರಿ ತಲುಪಿದ್ದೇವೆ ಎಂದು ಝಾ ತಿಳಿಸಿದರು.
ರಾಜ್ಯದಲ್ಲಿ ಒಟ್ಟಾರೆ 6.28 ಲಕ್ಷ ಹೊಸ ಅರ್ಜಿಗಳು ಬಂದಿದ್ದು, ಸರಾಸರಿ ಪ್ರತಿದಿನ 40,000 ಅರ್ಜಿಗಳು ಬರುತ್ತಿವೆ. ಅದರಲ್ಲಿ ಶೇ. 60ರಷ್ಟು ಈಗಾಗಲೇ ವಿಲೇವಾರಿಯಾಗಿದ್ದು ಪಟ್ಟಿಗೆ ಸೇರ್ಪಡೆಯಾಗಿದೆ. ಉಳಿದ ಅರ್ಜಿಗಳನ್ನು ಸಹಾ ಆದಷ್ಟು ಜಾಗ್ರತೆಯಾಗಿ ಪೂರ್ಣಗೊಳಿಸಲಾಗುವುದೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭಾರತ ಚುನಾವಣಾ ಆಯೋಗದ ಮಹಾ ನಿರ್ದೇಶಕರಾದ ಅಕ್ಷಯ್ ರಾವುತ್ ಅವರು ಮಂಗಳವಾರ ರಾತ್ರಿ ನಗರಕ್ಕೆ ಆಗಮಿಸಿದ್ದು ಬುಧವಾರ ಜರುಗಲಿರುವ ಚುನಾವಣಾ ಪ್ರಕ್ರಿಯೆಗಳ ಕುರಿತ ಮಾಧ್ಯಮ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಸಂದರ್ಭದಲ್ಲಿ ಯಾವುದೇ ಪ್ರಶ್ನೆಗಳಿದ್ದಲ್ಲಿ ಅವರೊಂದಿಗೆ ಪರಿಹರಿಸಿಕೊಳ್ಳಬಹುದಾಗಿದೆ ಎಂದರು.
ಚುನಾವಣೆಯನ್ನು ಜರುಗಿಸಲು ಒಟ್ಟಾರೆಯಾಗಿ 200 ಕೋಟಿ ಅಂದಾಜು ಬಜೆಟ್ನ್ನು ಮಾಡಿಕೊಳ್ಳಲಾಗಿದ್ದು ಸುಮಾರು 180 ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ ಎಂದರು. ಜಿಲ್ಲಾ ಕೇಂದ್ರಗಳಲ್ಲಿ ಚುನಾವಣೆಯ ಮಹತ್ವ, ಹೊಣೆ, ಮತದಾನದ ಹಕ್ಕು ಈ ಬಗ್ಗೆ ತಿಳಿವಳಿಕೆ ಮೂಡಿಸುವ ಸಲುವಾಗಿ ಪ್ರತಿ ಜಿಲ್ಲೆಗೆ 2.5 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಜಾಥಾಗಳು, ಬೀದಿ ನಾಟಕ, ಚರ್ಚಾಸ್ವರ್ಧೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ? ಮುಂದಿನ ಲೇಖನದಲ್ಲಿ ತಿಳಿದುಕೊಳ್ಳಿ. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನೊಂದಾಯಿಸಿಕೊಳ್ಳುವ ಬಗೆ ಇಲ್ಲಿ ವಿವರಿಸಲಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications