ಶಾಸಕರ ಆಸ್ತಿ ಮೇಲೆ ಲೋಕಾಯುಕ್ತರ ಕಣ್ಣು

ಸೋಮವಾರ ಲೋಕಾಯುಕ್ತ ವೈ.ಭಾಸ್ಕರರಾವ್ ರಾಜ್ಯಪಾಲರು ಮತ್ತು ಸ್ಪೀಕರ್ ಗೆ ಪತ್ರ ಬರೆದಿದ್ದು, ವಿಧಾನಸಭೆ ಚುನಾವಣೆ ಘೋಷಣೆಯಾಗಿ ಶಾಸಕತ್ವದ ಅವಧಿ ಮುಗಿಯುತ್ತಾ ಬಂದರೂ, 12 ಶಾಸಕರು ಇದುವರೆಗೂ ಲೋಕಾಯುಕ್ತಗೆ ಆಸ್ತಿ ವಿವರ ಸಲ್ಲಿಸಿಲ್ಲ, ಇವರ ವಿರುದ್ಧ ಕ್ರಮ ಜರುಗಿಸಲು ಅನುಮತಿ ನೀಡಬೇಕೆಂದು ಕೋರಿದ್ದಾರೆ.
ಶಾಸಕರು ಮತ್ತು ವಿಧಾನ ಪರಿಷತ್ ಸದಸಸ್ಯರು ಲೋಕಾಯುಕ್ತರಿಗೆ ಆಸ್ತಿ ವಿವರ ಸಲ್ಲಿಸುವುದು ನಿಯಮ. ಆದರೆ, ಕೆಲವು ಶಾಸಕರು 2008 ಚುನಾವಣೆ ವೇಳೆ ನಾಮಪತ್ರ ಸಲ್ಲಿಸುವಾಗ ನೀಡಿದ ಆಸ್ತಿ ವಿವರನ್ನು ಲೋಕಾಯುಕ್ತರಿಗೆ ಸಲ್ಲಿಸಿಲ್ಲ. ಈ ಬಗ್ಗೆ ಲೋಕಾಯುಕ್ತರು ನೀಡಿದ ನೋಟೀಸ್ ಗಳಿಗೂ ಉತ್ತರಿಸಿಲ್ಲ. ಕೊನೆಯ ಹಂತವಾಗಿ ಲೋಕಾಯುಕ್ತರು ರಾಜ್ಯಪಾಲರ ಮೊರೆ ಹೋಗಿದ್ದಾರೆ.
ರಾಜ್ಯಪಾಲರು ಯಾವ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂಬುದು ಚುನಾವಣಾ ಸಮಯದಲ್ಲಿ ಕುತೂಹಲ ಮೂಡಿಸಿದೆ. ಸತತವಾಗಿ ಲೋಕಾಯುಕ್ತರು ನೀಡಿದ ಮೂರು ನೋಟೀಸ್ ಗಳಿಗೂ ಉತ್ತರಿಸಿದ ಶಾಸಕರು ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಏನು ಕ್ರಮ ಕೈಗೊಳ್ಳಬಹುದು : ಆಸ್ತಿ ವಿವರ ಸಲ್ಲಿಸದ ಶಾಸಕರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧ ಹೇರಬಹುದು. ತಕ್ಷಣವೇ ವಿವರ ನೀಡಿ ಎಂದು ಕೊನೆಯ ನೋಟೀಸ್ ಜಾರಿಗೊಳಿಸಬಹುದು.
ಎಲ್ಲಾ ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸ್ಪೀಕರ್ ಗೆ ಶಿಫಾರಸ್ಸು ಮಾಡಬಹುದು. ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಸಬಹುದು. ಆದರೆ ಈ ನಿರ್ಧಾರ ಸ್ಪೀಕರ್ ಮತ್ತು ರಾಜ್ಯಪಾಲರ ಅಂತಿಮ ಆದೇಶದ ಮೇಲೆ ನಿರ್ಧರಿತವಾಗಿರುತ್ತದೆ.
ಹಿಂದೆಯೂ ಆಗಿತ್ತು : 2008 ಚುನಾವಣೆ ವೇಳೆಯಲ್ಲಿಯೂ 44 ಶಾಸಕರು ಹಿಂದಿನ ಚುನಾವಣೆಯ ಆಸ್ತಿ ವಿವರ ಸಲ್ಲಿಸಿಲ್ಲ ಎಂದು ಲೋಕಾಯುಕ್ತರಾಗಿದ್ದ ಸಂತೋಷ್ ಹೆಗ್ಡೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾಗಿದ್ದರು. ಈಗ ಅದು ಪುನಾರಾವರ್ತನೆ ಆಗುತ್ತಿದೆ. ಈ ಬಾರಿ 12 ಶಾಸಕರು ಲೋಕಾಯುಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಆಸ್ತಿ ವಿವರ ಸಲ್ಲಿಸದ ಶಾಸಕರು
* ವಿಠಲ ಕಟಕದೊಂಡ
* ರಾಮಣ್ಣ ಲಾಮಣಿ
* ಶ್ರೀ ಶೈಲಪ್ಪ ಬಿದರೂರು
* ಚಂದ್ರಕಾಂತ ಬೆಲ್ಲದ್
* ಅನಿತಾ ಕುಮಾರಸ್ವಾಮಿ
* ಪುಟ್ಟರಂಗಶೆಟ್ಟಿ
ವಿಧಾನಪರಿಷತ್ ಸದಸ್ಯರು
* ಅಮರನಾಥ್ ಪಾಟೀಲ್
* ರಘುನಾಥ್ ವಲ್ಯಾಪುರೆ
* ಶಶಿಲ್ ನಮೋಶಿ
* ಸೋಮಣ್ಣ ಬೇವಿನ ಮರದ
* ಬಿ.ಎಸ್.ಸುರೇಶ್
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ











Click it and Unblock the Notifications