600 ಕೋಟಿ ಒಡೆಯನ ಕೊಲೆಗೆ 2 ಕೋಟಿ ಸುಪಾರಿ?

ದೀಪಕ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಇಬ್ಬರು ಪ್ರಮುಖ ಆರೋಪಿಗಳಾದ ಪುರುಷೋತ್ತಮ್ ರಾಣಾ ಹಾಗೂ ಸುನಿಲ್ ಮನ್ ಎರಡು ಕೋಟಿ ರುಪಾಯಿ ಸುಪಾರಿ ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ಸುಪಾರಿ ನೀಡಿದವರ ವಿವರ ಸ್ಪಷ್ಟವಾಗಿ ಹೊರ ಬಿದ್ದಿಲ್ಲವಾದರೂ ದೀಪಕ್ ಅವರ ಕುಟುಂಬ ವರ್ಗದ ಸದಸ್ಯರದ್ದೇ ಈ ಕೃತ್ಯ ಎನ್ನಲಾಗಿದೆ.
ಈ ಮಧ್ಯೆ, ಪ್ರಕರಣದ ನಾಲ್ಕು ಆರೋಪಿಗಳ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದು, ಈ ಮೂವರನ್ನು ಇಂದು ಪಟಿಯಾಲ ಕೋರ್ಟಿಗೆ ಹಾಜರುಪಡಿಸಲಾಗಿದೆ. 30 ವರ್ಷದ ಪುರುಷೋತ್ತಮ್ ರಾಣಾ, 26 ವರ್ಷದ ಸುನಿಲ್ ಮನ್ ಅವರನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರಶಾಂತ್ ಶರ್ಮ ಎದುರು ಹಾಜರುಪಡಿಸಲಾಯಿತು. ಆರೋಪಿಗಳು test identification parade (TIP) ಗೆ ಒಳಪಡಲು ನಿರಾಕರಿಸಿದರು. ಹತ್ಯೆಗೆ ಬಳಸಲಾದ ಸ್ಕೋಡಾ ಕಾರ್ ಚಾಲಕ ಅಮಿತ್ ನನ್ನು ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ಯತ್ನಿಸಿದ್ದಾರೆ.
ದೀಪಕ್ಅವರ ಪತ್ನಿ ರಮೇಶ್ ಕುಮಾರಿ ಹಾಗೂ ಅವರ ಹಿರಿಯ ಪುತ್ರ ಹತ್ಯೆಗೆ ಸುಪಾರಿ ನೀಡಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಆ ಇಬ್ಬರನ್ನು ದೆಹಲಿ ಪೊಲೀಸರು ನಿನ್ನೆ ರಾತ್ರಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಗಂಡ-ಹೆಂಡತಿ ಮಧ್ಯೆ ಕಲಹ ಉಂಟಾಗಿ, ದೀಪಕ್ ಅವರನ್ನು ತೊರೆದು ಪತ್ನಿ ಕಳೆದ ಹಲವು ತಿಂಗಳಿನಿಂದ ಮಗ ನಿತೀಶ್ ಎಂಬುವವರ ಮನೆಯಲ್ಲಿ ವಾಸವಿದ್ದರು. ಇದಲ್ಲದೇ ಮಗ ನಿತೀಶ್ ತಂದೆಯ ವಿರುದ್ಧ ಕೆಲವು ತಿಂಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೀಪಕ್ ಅವರು ಮಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಪತ್ನಿ ಮತ್ತು ಮಗನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎನ್ನಲಾಗಿದೆ.
ಮಾ.26ರಂದು ನಿತೇಶ್ ಕುಂಜ್ ಫಾರ್ಮ್ಹೌಸ್ನಲ್ಲಿ 62 ವರ್ಷದ ಬಿಎಸ್ಪಿ ನಾಯಕ ದೀಪಕ್ ಭಾರದ್ವಾಜ್ ಅವರನ್ನು ಅಪರಿಚಿತ ವ್ಯಕ್ತಿಗಳು ಶೂಟ್ ಮಾಡಿ ಪರಾರಿಯಾಗಿದ್ದರು. 2009 ಲೋಕಸಭೆ ಚುನಾವಣೆಯ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದರು. ಸುಮಾರು 600 ಕೋಟಿ ರುಪಾಯಿ ಆಸ್ತಿ ಹೊಂದಿದ್ದ ದೀಪಕ್ ಅವರು ರಾಜಕಾರಣವಲ್ಲದೆ, ಹೋಟೆಲ್, ಶಿಕ್ಷಣ ಸಂಸ್ಥೆ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ದೀಪಕ್ ಅವರು ಹೆಸರುವಾಸಿಯಾಗಿದ್ದರು.












Click it and Unblock the Notifications