ರಾಮುಲು ಆಸೆಗೆ ತಣ್ಣೀರು ಸುರಿದ ದೊಡ್ಡಗೌಡರು

ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ನವಿಲು ತೀರ್ಥ ಜಲಾಶಯಕ್ಕೆ ಭೇಟಿ ನೀಡಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ಆರ್ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದ ಮೈತ್ರಿ ನಮಗೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿ ಜಿಲ್ಲೆಯ ನಿವಾಸಿಗಳು ಕಷ್ಟ ಹಂಚಿಕೊಳ್ಳಲು ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಪಕ್ಷಕ್ಕೆ ಯಾವುದೇ ಲಾಭವಿಲ್ಲ.ಈ ಬಗ್ಗೆ ಎಚ್.ಡಿ.ಕುಮಾರಸ್ವಾಮಿಯವರು ಹೆಚ್ಚಿನ ವಿವರ ನೀಡುತ್ತಾರೆ ಎಂದು ದೇವೇಗೌಡರು ಜಾರಿಕೊಂಡರು.
ಬೆಳಗ್ಗೆ ಏನಾಗಿತ್ತು?: ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮತ್ತು ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಮಧ್ಯೆ ಚುನಾವಣೆ ಪೂರ್ವ ಮೈತ್ರಿ ನಿಶ್ಚಿತ ಎಂದು ಬಿಎಸ್ಆರ್ ಸಂಸ್ಥಾಪಕ ಬಿ ಶ್ರೀರಾಮುಲು ಹೇಳಿದ್ದರು.
BSR Congress ಜತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಇನ್ನೂ ಗೊಂದಲ ಇದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯ ಜೆಡಿಎಸ್ಗಿಲ್ಲ. ಆದರೆ ಬಿಎಸ್ಆರ್ ಕಾಂಗ್ರೆಸ್ನ ಹಿತೈಷಿಗಳು ಮೈತ್ರಿಗೆ ಆಸಕ್ತಿ ತೋರಿದ್ದು, ಚರ್ಚೆ ನಡೆಸಿದ್ದಾರೆ. ಅದು ಇನ್ನು ಚರ್ಚೆಯ ಹಂತದಲ್ಲಿದೆ. ಪಕ್ಷದ ಹಿರಿಯ ಮುಖಂಡರೊಂದಿಗೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದರು.
ದೊಡ್ಡಗೌಡರ ನಿರ್ಧಾರಕ್ಕೆ ಏನು ಕಾರಣ? : ಬಿಎಸ್ ಶ್ರೀರಾಮುಲು ಅವರ ಇಮೇಜ್ ಸದ್ಯಕ್ಕೆ ಸೀಮಿತವಾಗಿದ್ದು, ಅವರ ಹೆಸರು ಬಲವಿರುವ ಪ್ರದೇಶದಲ್ಲೂ ಈ ಬಾರಿ ಹೆಚ್ಚಿನ ಮ್ಯಾಜಿಕ್ ಮಾಡುವುದಿಲ್ಲ ಎಂಬುದು ಸಮೀಕ್ಷೆಗಳ ಮೂಲಕ ಗೌಡರಿಗೆ ತಿಳಿದು ಬಿಟ್ಟಿದೆ.
ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಬಿಟ್ಟರೆ ಶ್ರೀರಾಮುಲು ಪರ ನಿಲ್ಲಬಲ್ಲ ಸಮರ್ಥ ರಾಜಕಾರಣಿ, ಹೂಡಿಕೆದಾರರು ಕಾಣುತ್ತಿಲ್ಲ. ಅಲ್ಲದೆ, ಬಳ್ಳಾರಿ, ಗದಗ, ರಾಯಚೂರು, ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಎಸ್ ಆರ್ ಕಾಂಗ್ರೆಸ್ ಅಲೆ ನೆಲ ಕಚ್ಚಿದೆ ಇದೆಲ್ಲ ಅಂಶಗಳನ್ನು ಮನಗಂಡಿರುವ ಗೌಡರು ಸದ್ಯಕ್ಕೆ ಜೆಡಿಎಸ್ ಕೈಜೋಡಿಸುವುದು ಬೇಡ ಎಂದಿದ್ದಾರೆ.
ಮೈತ್ರಿ ಇಲ್ಲದೆ ಜೆಡಿಎಸ್ ಇಮೇಜ್ ಎಲ್ಲೆಡೆ ಚೆನ್ನಾಗಿ ಮೂಡಿ ಬರುತ್ತಿದೆ. ಹೀಗಾಗಿ ಹೆಚ್ಚಿನ ಬಲ ಅಥವಾ ಮೈತ್ರಿ ಪಡೆಯುವುದು ಪಕ್ಷಕ್ಕೆ ಬಲಕ್ಕಿಂತ ಹೊರೆಯಾಗಲಿದೆ. ಜೆಡಿಎಸ್ ಮೈತ್ರಿ ಲಾಭ ಬಿಎಸ್ ಆರ್ ಕಾಂಗ್ರೆಸ್ ಗೆ ಆಗುತ್ತದೆ ಹೊರತೂ ಜೆಡಿಎಸ್ ಗೆ ಆಗುವುದಿಲ್ಲ ಎಂಬ ಅರಿವು ಗೌಡರಿಗಿದೆ. ಆದರೂ ಕೊನೆ ಕ್ಷಣದ ಬದಲಾವಣೆಯಂತೆ ಉಪ ಚುನಾವಣೆಯಲ್ಲಿ ಶ್ರೀರಾಮುಲು ಬೆನ್ನಹಿಂದೆ ಕುಮಾರಸ್ವಾಮಿ ಅವರ ಶಿಷ್ಯ ಜಮೀರ್ ಅವರು ನಿಂತರೂ ಅಚ್ಚರಿಪಡಬೇಕಾಗಿಲ್ಲ.












Click it and Unblock the Notifications