ಸದಾನಂದಗೌಡರಿಗೆ ಹಣ ನೀಡಿದ್ದೇನೆ : ರೇಣುಕಾಚಾರ್ಯ
ಸದಾ ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ರೇಣುಕಾಚಾರ್ಯ ಹೋಳಿ ಹಬ್ಬದ ದಿನ ಡಿವಿಎಸ್ ಮೇಲೆ ಕಪ್ಪುಬಣ್ಣ ಎರಚುವ ಮೂಲಕ ರಾಜಕೀಯ ಹೋಳಿ ಆಡಲು ಪ್ರಾರಂಭಿಸಿದ್ದಾರೆ.
ದಾವಣಗೆರೆಯ ತಮ್ಮ ಸ್ವಕೇತ್ರ ಹೊನ್ನಾಳಿಯಲ್ಲಿ ಮಂಗಳವಾರ ಮಾತನಾಡಿದ ರೇಣುಕಾಚಾರ್ಯ, ಯಡಿಯೂರಪ್ಪ ನಮ್ಮ ನಾಯಕರು ಅವರನ್ನು ಭ್ರಷ್ಟರೆಂದು ದೂರುವ ಹಕ್ಕು ಸದಾನಂದ ಗೌಡರಿಗೆ ಇಲ್ಲ.
ನನ್ನಿಂದ ಕಣ್ಣೀರಿಟ್ಟು ಹಣ ಪಡೆದ ಡಿವಿಎಸ್ ಸಹ ಭ್ರಷ್ಟರು ಎಂದು ಆರೋಪಿಸಿದರು. ಗೌಡರು ಮುಖ್ಯಮಂತ್ರಿ ಆಗಿದ್ದಾಗ ಅವರಿಗೆ ನಾನು ಹಣ ನೀಡಿದ್ದೇನೆ. ಅದನ್ನು ಸಾಬೀತು ಮಾಡಲು ಸೂಕ್ತ ದಾಖಲೆಗಳು ನನ್ನ ಬಳಿ ಇವೆ ಎಂದು ಹೇಳಿದರು.
ಸದಾನಂದ ಗೌಡರಿಗೆ ನಾನು ಹಣ ನೀಡಿರುವುದಕ್ಕೆ ಇರುವ ದಾಖಲೆ ಮತ್ತು ಸಿಡಿಯನ್ನು ಎರಡು ದಿನಗಳಲ್ಲಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ ರೇಣುಕಾಚಾರ್ಯ, ಹಣ ನೀಡಿದ್ದೇನೆ ಎಂದು ಯಾವ ದೇವರ ಮುಂದೆ ಬೇಕಾದರೂ ಪ್ರಮಾಣ ಮಾಡುತ್ತೇನೆ. ಗೌಡರು, ನನ್ನಿಂದ ಹಣ ಪಡೆದಿಲ್ಲ ಎಂದು ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ಬಿಜೆಪಿ ಪಕ್ಷದ ಇಂದಿನ ಪರಿಸ್ಥಿತಿಗೆ ಅನಂತ ಕುಮಾರ್, ಸಂತೋಷ್ ಜಿ ಕಾರಣ ಅವರ ನಡುವಿನ ವೈಯಕ್ತಿಕ ಪ್ರತಿಷ್ಠೆಗಳೆ ಕಾರಣ. ಅವರ ಪ್ರತಿಷ್ಠೆಗಾಗಿ ಪಕ್ಷದ ವರ್ಚಸ್ಸನ್ನು ಅನಂತ ಕುಮಾರ್ ಹಾಳು ಮಾಡಿದರು ಎಂದು ರೇಣುಕಾಚಾರ್ಯ ದೂರಿದರು.
ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ನನ್ನ ನಾಯಕರು. ಎರಡು ದಿನದಲ್ಲಿ ಕೆಜೆಪಿ ಸೇರುವ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿ ತಮ್ಮ ನಿಜ ಬಣ್ಣ ಬಯಲುಗೊಳಿಸಿದರು.
ಬಿಜೆಪಿಯಲ್ಲಿರುವ ಅನೇಕ ನಾಯಕರು ಸತ್ಯ ಹರಿಶ್ಚಂದ್ರರಂತೆ ಮಾತನಾಡುತ್ತಾರೆ. ಆದರೆ, ಅವರೆಲ್ಲರೂ ಭ್ರಷ್ಟರು. ಎಲ್ಲಾ ನಾಯಕರ ಭ್ರಷ್ಟಾಚಾರದ ಕುರಿತ ದಾಖಲೆಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ರೇಣುಕಾಚಾರ್ಯ ಹೇಳಿದರು.
ಡಿವಿಎಸ್ ತಿರುಗೇಟು : ರೇಣುಕಾಚಾರ್ಯ ಅವರು ಭ್ರಷ್ಟರಾಗಿದ್ದರು. ಅವರ ಅಕ್ರಮಗಳಿಗೆ ಕಡಿವಾಣ ಹಾಕಿದ್ದರಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ರೇಣುಕಾಚಾರ್ಯ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ರೇಣುಕಾಚಾರ್ಯ ಸಣ್ಣ ಮನುಷ್ಯ. ನನ್ನ ವಿರುದ್ಧದ ದಾಖಲೆಗಳನ್ನು ಅವರು ಮೊದಲು ಬಿಡುಗಡೆ ಮಾಡಲಿ ಎಂದು ಡಿವಿಎಸ್ ಸವಾಲು ಹಾಕಿದ್ದಾರೆ.
ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಾ, ಬಣ್ಣ ಬದಲಿಸಿಸುವ ರೇಣುಕಾಚಾರ್ಯರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಎಂತಹ ಸಂಚಲನ ಮೂಡಿಸಲಿದೆ ಎಂದು ಕಾದು ನೋಡಬೇಕು. (ದಾವಣಗೆರೆ ಜಿಲ್ಲಾ ವಿಧಾನಸಭಾ ಕ್ಷೇತ್ರಗಳ ಪರಿಚಯ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ