ಕಾಂಗ್ರೆಸ್: 28 ಟಿಕೆಟಿಗೆ ಬೇಡಿಕೆಯಿಟ್ಟ ಮುಸ್ಲಿಂ ನಾಯಕರು

ಕೆಪಿಸಿಸಿ 124 ಸ್ಥಾನಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿಟ್ಟುಕೊಂಡಿದೆ ಎಂಬ ತಾಜಾ ವರ್ತಮಾನ ಮುಸ್ಲಿಂ ನಾಯಕರ ಕಿವಿಗೆ ಬಿದ್ದಿದ್ದು, ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಸಮುದಾಯದ ಅನೇಕ ನಾಯಕರು ಅಖಂಡ ನಿಷ್ಠೆ ತೋರುತ್ತಾ ಬಂದಿದ್ದಾರೆ. ಹಾಗಾಗಿ ನಮಗೆ ಕನಿಷ್ಠ 28 ಟಿಕೆಟುಗಳನ್ನು ನೀಡುವಂತೆ ಹಿರೊಯ ನಾಯಕರು ಕೆಪಿಸಿಸಿಗೆ ಮನವಿ ಮಾಡಿಕೊಂಡಿದ್ದಾರೆ.
ಹಿರಿಯರಾದ ಜಾಫರ್ ಷರೀಫ್, ರೆಹಮಾನ್ ಖಾನ್ ಮತ್ತು ರೋಶನ ಬೇಗ್ ಅವರು ಇತ್ತೀಚೆಗೆ ಸಭೆ ನಡೆಸಿ, ತಮ್ಮ ಸಮುದಾಯಕ್ಕೆ ಹೆಚ್ಚು ಸ್ಥಾನಗಳನ್ನು ನೀಡುವಂತೆ ಮನವಿ ಮಾಡಲು ನಿರ್ಧರಿಸಿದ್ದಾರೆ. ಈ ಸಂಬಂಧ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಹೊತ್ತಿರುವ ಮಧುಸೂದನ ಮಿಸ್ತ್ರಿ ಹಾಗೂ ಕೆಪಿಸಿಸಿ ಸಾರಥಿ ಡಾ. ಜಿ ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಗಮನಾರ್ಹವೆಂದರೆ ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳು ಸುಮಾರು 500 ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ. ಇದು ಸಮುದಾಯದ ನಾಯಕರನ್ನು ಹುರಿದುಂಬಿಸಿದ್ದು, ಹೆಚ್ಚು ಕ್ಷೇತ್ರಗಳಲ್ಲಿ ಟಿಕೆಟ್ ಬೇಡಿಕೆಗೆ ಕಾರಣವಾಗಿದೆ.
ಮುಸ್ಲಿಂ ಸಮುದಾಯದ 28 ಬೇಡಿಕೆ ಜತೆಗೆ ತಾವು ಸಿದ್ಧಪಡಿಸಿಟ್ಟುಕೊಂಡಿರುವ 124 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯೊಂದಿಗೆ ಮಧುಸೂದನ ಮಿಸ್ತ್ರಿ ಅವರು ಇಂದು ಸಂಜೆ ದೆಹಲಿಗೆ ತೆರಳಲಿದ್ದು, ಬುಧವಾರ AICC ಚುನಾವಣೆ ಸಮಿತಿ ಮುಂದೆ ಹಾಜರಾಗುವ ಸಾಧ್ಯತೆಯಿದೆ. ಈ ವಾರಾಂತ್ಯ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವ ಲಕ್ಷಣಗಳಿವೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications