ರಾಮನಗರ ತೊರೆದು ಉ-ಕದತ್ತ ಕುಮಾರಸ್ವಾಮಿ ಗುಳೆ
ಬೆಂಗಳೂರು,ಮಾ.19: ಜೆಡಿಎಸ್ ಪಕ್ಷದ ಯುವನೇತ, ಪ್ರಸ್ತುತ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ಕಾರ್ಯಕ್ಷೇತ್ರವಾಗಿರುವ ರಾಮನಗರವನ್ನು ತೊರೆದು ಉತ್ತರ ಕರ್ನಾಟಕದತ್ತ ಒಲವು ತೋರಿದ್ದಾರೆ.
ಮೊನ್ನೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗೈ ಡಿಕೆಶಿ, ಜೆಡಿಎಸ್ ಗೆ ನೀರುಕುಡಿಸಿದ ನಂತರ ಎಚ್ ಡಿಕೆ ಉತ್ತರ ಕರ್ನಾಟಕದತ್ತ ಮನಸ್ಸು ಮಾಡಿರುವುದು ವಿಶೇಷವೇನೂ ಅಲ್ಲ. ಇತ್ತೀಚಿಗೆ ರಾಮನಗರ ನಗರಸಭೆ ಕಾಂಗ್ರೆಸ್ ಪಾಲಾಗಿರುವುದು ಕುಮಾರಸ್ವಾಮಿ ಅವರ ಆತಂಕ/ ಚಿಂತೆಯನ್ನು ಹೆಚ್ಚಿಸಿದೆ.
ಜತೆಗೆ ಇತ್ತೀಚಿನ ದಿನಗಳಲ್ಲಿ ಕುಮಾರಸ್ವಾಮಿ ಉತ್ತರ ಕರ್ನಾಟಕ ಭಾಗದಲ್ಲಿ ನಿರಂತರ ಪ್ರವಾಸ ಮಾಡಿದ್ದಾರೆ. ಇದರಿಂದ ಉ-ಕ ಮಂದಿಯ ನಾಡಿಮಿಡಿತ ಅರಿಯಲು ಅವರಿಗೆ ಸಹಾಯಕವಾಗಿದೆ.
ಇತ್ತೀಚೆಗೆ ಪ್ರಕಟಗೊಂಡ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಉ-ಕ ಭಾಗದಲ್ಲಿ ಜೆಡಿಎಸ್ ಮತ ಗಳಿಕೆ ಶೇ. 8ರಿಂದ 10ರಷ್ಟು ಹೆಚ್ಚಳ ಕಂಡಿದೆ. ಹಾಗಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ರಾಮನಗರ ಭಾಗ ತೊರೆದು ಬಾದಾಮಿ, ಬಸವಕಲ್ಯಾಣ ಅಥವಾ ಹುಮ್ನಾಬಾದ್ ಕ್ಷೇತ್ರದತ್ತ ಮನಸ್ಸು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕುಮಾರಸ್ವಾಮಿಗೆ 2 ಕಡೆ ಅಗ್ನಿಪರೀಕ್ಷೆ:
ರಾಮನಗರ ಬೇಡವೆಂದು ತೀರ್ಮಾನಿಸಿರುವ ಕುಮಾರಸ್ವಾಮಿ, ರಾಮನಗರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ತಮ್ಮನ್ನು ಬಿಂಬಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ. ಹಳೆ ಮೈಸೂರು ಭಾಗದ ಯಾವುದಾದರೂ ಒಂದು ಕ್ಷೇತ್ರ ಹಾಗೂ ಉತ್ತರ ಕರ್ನಾಟಕದಿಂದಲೂ ಸ್ಪರ್ಧಿಸಲು ಅವರು ಚಿಂತನೆ ನಡೆಸಿದ್ದಾರೆ.

ಅನಿತಕ್ಕ ಸ್ಪರ್ಧೆ ಎಲ್ಲಿಂದ?
ಒಂದೆಡೆ ಡಿಕೆಶಿ ಮತ್ತೊಂದೆಡೆ ಯೋಗೀಶಿ ಅವರ ಹೊಡೆತ ತಾಳಲಾರದೆ ಎಚ್ಡಿಕೆ ತಮ್ಮ ಕರ್ಮಭೂಮಿಯನ್ನು ತೊರೆಯಲು ನಿರ್ಧರಿಸಿರುವ ಬೆನ್ನಲ್ಲೇ ಮಧುಗಿರಿ ಶಾಸಕಿ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧಿಸುವ ವಿಷಯ ಎಲ್ಲಿಗೆ ಬಂತು ಎಂದು ಕೇಳುವಂತಾಗಿದೆ. ಊರಿಗೆ ಮುಂಚೆ ರಾಮನಗರ-ಚನ್ನಪಟ್ಟಣದಲ್ಲಿ ಬಿಡಾರ ಹೂಡಿ, ಮನೆಮನೆಗೂ ತೆರಳಿ, ಪ್ರಚಾರ ನಡೆಸಿದ್ದ ದಂಪತಿಗೆ ಭ್ರಮನಿರಸನವಾಗಿದೆ. ಹಾಗಾಗಿ ಕುಮಾರಸ್ವಾಮಿ ರಾಮನಗರ ಬಿಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ಅನಿತಕ್ಕ ಸ್ಪರ್ಧೆ ಎಲ್ಲಿಂದ?

150 ಅಭ್ಯರ್ಥಿಗಳ ಆಯ್ಕೆ ಇಂದು
ಜೆಡಿಎಸ್ ಸಂಸದೀಯ ಮಂಡಳಿ ಸಭೆ ಇಂದು ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮಗೊಳ್ಳಲಿದೆ. 150 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಸಭೆಯಲ್ಲಿ ಅಂತಿಮಗೊಳಿಸಲಾಗುವುದು. 110 ಕ್ಷೇತ್ರಗಳಲ್ಲಿ ಯಾವುದೇ ಗೊಂದಲ ಇಲ್ಲ. ಉಳಿದ 40 ಕ್ಷೇತ್ರಗಳಲ್ಲಿ ಇಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳು ಇದ್ದಾರೆ. ಅಭ್ಯರ್ಥಿಗಳ ಆಯ್ಕೆಗೆಂದು ರಚಿಸಲಾಗಿದ್ದ ನಾಲ್ಕು ಪ್ರತ್ಯೇಕ ಸಮಿತಿಯ ವರದಿ, ಅಭ್ಯರ್ಥಿಯ ವರ್ಚಸ್ಸು ಮತ್ತು ಕಳೆದ ಒಂದು ವರ್ಷದಿಂದ ಅವರು ಕ್ಷೇತ್ರದಲ್ಲಿ ನಡೆಸಿಕೊಂಡು ಬಂದಿರುವ ಕಾರ್ಯಕ್ರಮಗಳ ಆಧಾರದ ಮೇಲೆ ಉಳಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಪಟ್ಟಿ ಮಾ. 22 ಅಥವಾ 23ರಂದು ಅಧಿಕೃತವಾಗಿ ಪ್ರಕಟವಾಗಲಿದೆ- ಮಂಡಳಿಯ ಸದಸ್ಯ ಬಸವಗೌಡ ಪಾಟೀಲ್ ಯತ್ನಾಳ್.

ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸುವೆ: ಎಚ್ಡಿಕೆ
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಭರವಸೆ ನೀಡದಿದ್ದಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆಯನ್ನೊಡ್ಡಿದ್ದಾರೆ. ದಿನದ 20 ಗಂಟೆ ದುಡಿಯುತ್ತೇನೆ. ನನ್ನ ನಾಯಕತ್ವ ಬೇಡ ಎಂದಾದರೆ ಬೇರೆಯವರನ್ನು ಆಯ್ಕೆ ಮಾಡಿಕೊಳ್ಳಿ ಎಂದಿದ್ದಾರೆ.
ಜೆಡಿಎಸ್ ಅಂದರೆ ಅಪ್ಪ ಮಕ್ಕಳ ಪಕ್ಷ ಎಂದು ರಾಷ್ಟ್ರೀಯ ಪಕ್ಷಗಳು ಹೇಳುತ್ತಿವೆ. ಈ ಬಗ್ಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಗೊಂದಲಗಳಿದ್ದಲ್ಲಿ ತಕ್ಷಣ ತಿಳಿಸಬೇಕು. ನಮಗೆ ಅಧಿಕಾರ ಮುಖ್ಯವಲ್ಲ. ಪಕ್ಷ ಸಂಘಟನೆ ಹಾಗೂ ರಾಜ್ಯದ ಜನತೆಯ ಹಿತ ಕಾಪಾಡುವುದೆ ಮುಖ್ಯವಾಗಿದೆ. ಹಾಗಾಗಿ ನಾಯಕತ್ವದಲ್ಲಿ ಗೊಂದಲಗಳಿದ್ದಲ್ಲಿ ತಕ್ಷಣ ರಾಜ್ಯಾಧ್ಯಕ್ಷರ ಸ್ಥಾನವನ್ನು ತ್ಯಜಿಸಿ ಅಪ್ಪ ಮಕ್ಕಳ ಪಕ್ಷ ಎಂಬುದ ಸುಳ್ಳು ಎಂದು ಸಾಬೀತು ಪಡಿಸುತ್ತೇನೆ ಎಂದು ಅವರು ಘರ್ಜಿಸಿದರು.

ಲೂಟಿ ಹೊಡೆಯಲು ಅಧಿಕಾರ ಕೇಳುತ್ತಿಲ್ಲ
ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಗಿರಬಹುದಾದ ತಪ್ಪು ತಿದ್ದಿಕೊಂಡು ಮುಂದಿನ 45 ದಿನಗಳ ಕಾಲ ಶ್ರಮವಹಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತನ್ನಿ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕರೆ ನೀಡಿದ್ದಾರೆ. ಜೆಡಿಎಸ್ಗೆ ಅಪ್ಪ ರಾಷ್ಟ್ರೀಯ ಅಧ್ಯಕ್ಷ, ಮಗ ರಾಜ್ಯಾಧ್ಯಕ್ಷ ಎಂಬ ಟೀಕೆ ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳಬೇಡಿ. ನಮ್ಮ ಗುರಿ ಅಧಿಕಾರ ಪಡೆಯುವುದು. ಆ ನಿಟ್ಟಿನಲ್ಲಿ ಹೋರಾಟಕ್ಕೆ ಸಜ್ಜಾಗಿ ಎಂದು ಹೇಳಿದರು.
ಕೃಷ್ಣಾ -ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯ ಜನತೆಗೆ ತಿಳಿಸಿ. ನಿಮ್ಮ ಜತೆ ನಾನಿದ್ದೇನೆ. ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡಲೂ ಈ ದೇವೇಗೌಡ ಸಿದ್ಧ. ಇದು ನನ್ನ ಕೊನೆಯ ಹೋರಾಟ. ನಮ್ಮ ಕುಟುಂಬ ಆಸ್ತಿ ಮಾಡಿಕೊಳ್ಳಲು, ಲೂಟಿ ಹೊಡೆಯಲು ಅಧಿಕಾರ ಕೇಳುತ್ತಿಲ್ಲ. ರಾಜ್ಯದ ಹಿತಾಸಕ್ತಿ ಕಾಪಾಡಲು ಜೆಡಿಎಸ್ ಅಧಿಕಾರಕ್ಕೆ ಬರಬೇಕಿದೆ ಎಂದೂ ಅವರು ಹೇಳಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications