ವೈಎಸ್ಆರ್ ಗೆ 500 ಕೋಟಿ ಕೊಟ್ಟಿದ್ದೆ: ರೆಡ್ಡಿ ತಪ್ಪೊಪ್ಪಿಗೆ

ಗಂಗಾನಗರದಲ್ಲಿರುವ ಸಿಬಿಐ ಕಚೇರಿಯಲ್ಲಿ 6 ದಿನಗಳಿಂದ ತೀವ್ರ ವಿಚಾರಣೆಗೊಳಪಟ್ಟಿರುವ ರೆಡ್ಡಿಯನ್ನು ಇಂದು ಕೋರ್ಟಿಗೆ ಹಾಜರುಪಡಿಸಬೇಕಾಗಿದ್ದು, ಈ ಹೊಸ ಸಂಗತಿಯಿಂದ ಅವರನ್ನು ಮತ್ತೆ ಸಿಬಿಐ ಕಸ್ಟಡಿಗೇ ಒಪ್ಪಿಸುವ ಸಾಧ್ಯತೆ ಹೆಚ್ಚಾಗಿದೆ.
ರೆಡ್ಡಿಗಾರು ಸಿಬಿಐಗೆ ಏನು ಹೇಳಿದ್ದಾರೆಂದರೆ... ಆಂಧ್ರದ ಮಾಜಿ ಸಿಎಂ, ದಿವಂಗತ ವೈಎಸ್ಆರ್ ರಾಜಶೇಖರ ರೆಡ್ಡಿಗೆ 500 ಕೋಟಿ ರೂ. ದೇಣಿಗೆ ನೀಡಿದ್ದೆ. ಇದನ್ನು ವೈಎಸ್ಸಾರ್, 2009ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಳಸಿಕೊಂಡರು ಎಂದು ಜನಾ ರೆಡ್ಡಿ ಹೇಳಿರುವುದಾಗಿ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ, ಆಂಧ್ರದಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು, ಇದು ಆಂಧ್ರ ರಾಜಕೀಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಈಗಾಗಲೇ ಅಕ್ರಮ ಆಸ್ತಿ ಪ್ರಕರಣದಲ್ಲಿ ಚಂಚಲಗೂಡ ಜೈಲಿನಲ್ಲಿರುವ ವೈಎಸ್ಆರ್ ಪುತ್ರ ಜಗನ್ ಅವರ ಮೇಲೂ ಪರಿಣಾಮ ಬೀರಿದೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ 30 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಜನಾರ್ದನ ರೆಡ್ಡಿ ಹಾಗೂ ಸಹಚರರು ಅಕ್ರಮವಾಗಿ ದಾಸ್ತಾನು ಮಾಡಿದ್ದರು. ಇದರಿಂದ ಎರಡೂವರೆ ಸಾವಿರ ಕೋಟಿ ರೂ. ಅಕ್ರಮವಾಗಿ ಸಂಪಾದನೆ ಮಾಡಿದ್ದರು. ಹೀಗೆ ಸಂಪಾದಿಸಿದ ಹಣದಲ್ಲಿ ರಾಜಶೇಖರ ರೆಡ್ದಿಗೆ ಜನಾರ್ದನ ರೆಡ್ಡಿ ಪಾಲು ನೀಡಿದ್ದರು ಎಂಬುದು ಸಿಬಿಐ ವಿಚಾರಣೆ ವೇಳೆ ಜನಾ ರೆಡ್ಡಿಯ ನೀಡಿರುವ ತಪ್ಪೊಪ್ಪಿಗೆಯ ಸಾರಾಂಶ.
500 ಕೋಟಿ ದೇಣಿಗೆ ನೀಡಿದ್ದೂ ಅಲ್ಲದೇ ಚುನಾವಣೆಯಲ್ಲಿ ಅನಂತಪುರ ಕಾಂಗ್ರೆಸ್ ಅಭ್ಯರ್ಥಿಗಳ ಖರ್ಚು ವೆಚ್ಚ ಭರಿಸಿರುವುದಾಗಿಯೂ ರೆಡ್ಡಿ ಬಾಯ್ಬಿಟ್ಟಿದ್ದಾರೆ.












Click it and Unblock the Notifications