ಫೇಸ್ ಬುಕ್ ಫ್ರೆಂಡ್ ಕೊಂದವರು ಬಲೆಗೆ ಬಿದ್ರು

ಇತ್ತೀಚೆಗೆ ಫೇಸ್ ಬುಕ್ ಮೂಲಕ ಸ್ನೇಹಿತನಾಗಿದ್ದ ವ್ಯಕ್ತಿಯೊಬ್ಬನನ್ನು ಭೇಟಿ ಮಾಡಿದ ಕಾಲೇಜು ವಿದ್ಯಾರ್ಥಿಗಳು ಆತನನ್ನು ಕಿಡ್ನಾಪ್ ಮಾಡಿ ನಂತರ ಕೊಲೆಗೈದಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುದ್ವೀರ್ ಸಿಂಗ್ ಹಾಗೂ ಜಿತೇಂದರ್ ಸಿಂಗ್ ಎಂಬುವವರನ್ನು ಸ್ಥಳೀಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಪುಷ್ಪೇಂದರ್ ಸಿಂಗ್ ಎಂಬ ವ್ಯಕ್ತಿಯನ್ನು ಫೇಸ್ ಬುಕ್ ಮೂಲಕ ಸಂಪರ್ಕಿಸಿ ಈ ಇಬ್ಬರು ಆರೋಪಿಗಳು ಸ್ನೇಹ ಬೆಳೆಸಿದ್ದರು.
ಮಾ.6ರಂದು ಆಮ್ರುಪಲ್ಲಿ ಸರ್ಕಲ್ ಬಳಿ ಬರುವಂತೆ ಹೇಳಿದ್ದಾರೆ. ಗೆಳೆಯ ಆಹ್ವಾನಕ್ಕೆ ಓಗೊಟ್ಟ ಪುಷ್ಪೇಂದರ್ ಸಿಂಗ್ ಸರ್ಕಲ್ ಬಳಿ ಬಂದು ಕಾದಿದ್ದಾನೆ. ಮೂವರು ಸೇರಿ ಹತ್ತಿರದ ಬಾರ್ ಗೆ ತೆರಳಿ ಮದ್ಯ ಸೇವಿಸಿ ಸಂತೋಷ ಕೂಟ ನಡೆಸಿದ್ದಾರೆ.
ಆದರೆ, ಕೆಲ ಹೊತ್ತಿನ ನಂತರ ಪುಷ್ಪೇಂದರ್ ತಲೆಗೆ ಹಿಂದಿನಿಂದ ಬಲವಾದ ಹೊಡೆತ ಬಿದ್ದಿದೆ. ಏನಾಯಿತು ಎಂದು ನೋಡುವಷ್ಟರಲ್ಲಿ ಪುಷ್ಪೇಂದರ್ ಗೆ ಪ್ರಜ್ಞೆ ತಪ್ಪಿದೆ. ಪುಷ್ಪೇಂದರ್ ಗೆ ಮತ್ತೆ ಪ್ರಜ್ಞೆ ಬಂದಾಗ ತಾನು ಕಿಡ್ನಾಪ್ ಆಗಿದ್ದೇನೆ. ಕೈ ಕಾಲು ಬಂಧಿಸಲಾಗಿದೆ. ತನ್ನ ಫೇಸ್ ಬುಕ್ ಗೆಳೆಯರೇ ಈ ಕೃತ್ಯ ಎಸಗಿದ್ದಾರೆ ಎಂಬುದು ಅರಿವಿಗೆ ಬಂದು ಗಾಬರಿಯಾಗಿದೆ.
ಪುಷ್ಪೇಂದರ್ ಬಳಿ ದುಡ್ಡಿಗಾಗಿ ಪೀಡಿಸಿದ ಇಬ್ಬರು ಆರೋಪಿಗಳು ಆತನನ್ನು ಅಮಾನುಷವಾಗಿ ಕೊಂದಿದ್ದಾರೆ. ಮೃತ ದೇಹವನ್ನು ಬಟ್ಟೆಯಲ್ಲಿ ಸುತ್ತಿ ರೈಲಿನಲ್ಲಿ ಕೊಂಡೊಯ್ದು ಪುಲೇರಾ ಜಂಕ್ಷನ್ ಬಳಿ ಬಿಸಾಡಿದ್ದಾರೆ.
ಈ ನಡುವೆ ಪುಷ್ಪೇಂದರ್ ಕುಟುಂಬವನ್ನು ಸಂಪರ್ಕಿಸಿ 16,000 ಯುರೋ ಕೊಡುವಂತೆ ಬೆದರಿಸಿದ್ದಾರೆ. ಆದರೆ, ಕುಟುಂಬದವರು ಈ ಬಗ್ಗೆ ನಿರ್ಣಯ ಕೈಗೊಳ್ಳುವ ಮೊದಲೇ ಇಬ್ಬರು ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.
ವಿಚಾರಣೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. 16 ಸಾವಿರ ಯುರೋ ಏಕೆ ಬೇಡಿಕೆ ಇಟ್ಟಿದ್ದರು. ಯುರೋ ಕರೆನ್ಸಿಯಲ್ಲೇ ದುಡ್ಡು ಬೇಕು ಎಂದು ತಾಕೀತು ಮಾಡಿದ್ದು ಏಕೆ? ಪುಷ್ಪೇಂದರ್ ಸಿಂಗ್ ಹಿನ್ನೆಲೆಯೇನು? ಎಂಬ ಪ್ರಶ್ನೆಗಳನ್ನು ಹೊತ್ತು ತನಿಖೆ ಮುಂದುವರೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಗಿರಿರಾಜ್ ಮೀನ ಹೇಳಿದ್ದಾರೆ. ಈ ನಡುವೆ ಫೇಸ್ ಬುಕ್ ಫ್ರೆಂಡ್ಸ್ ಯುವಜನತೆ ಬಗ್ಗೆ ಎಚ್ಚರವಿರಬೇಕು ಎಂದು ಮೀನ ಕೋರಿದ್ದಾರೆ. (ಪಿಟಿಐ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications