ಬಳ್ಳಾರಿ ನಗರಸಭೆಗೆ ಮಂಗಳಮುಖಿ ಪರ್ವೀನ್ ಬಾನು

ಪರವೀನ್ ಭಾನುರವರು ತಮ್ಮ ರಾಜಕೀಯ ಪ್ರವೇಶಕ್ಕೂ ಮುನ್ನ ಸಮಾಜ ಸೇವೆ ಮತ್ತು ಜನಸೇವೆ ಮಾಡಿಕೊಂಡಿದ್ದು, ಸ್ಥಳೀಯ ಜನರ ಕಷ್ಟ ಸುಖಗಳಿಗೆ ನೆರವಾಗಿ ವೃದ್ದಾಪ್ಯ ವೇತನ, ವಿಧವಾ ವೇತನ, ಬ್ಯಾಂಕ್ ಖಾತೆ ಹಾಗೂ ನಾನಾ ಪ್ರಮಾಣಪತ್ರಗಳನ್ನು ಮಾಡಿಸಿಕೊಡಲು ನೆರವಾಗುತ್ತಿದ್ದರು.
ಇವರ ಮೂಲ ಹೆಸರು ನಬೀಸಾಬ್. ಓದಿದ್ದು ಎರಡನೇ ತರಗತಿ. ಎಂಟನೇ ವಯಸ್ಸಿನ ನಂತರ ಪರ್ವೀನ್ ಆಗಿ ಪರಿವರ್ತನೆ ಹೊಂದಿದರು. ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ ಪರ್ವೀನ್ ರವರಿಗೆ ಕಾಂಗ್ರೇಸ್ ಪಕ್ಷ "ಬಿ" ಫಾರಂ ನೀಡುವ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿತ್ತು. ಬಳ್ಳಾರಿ ನಗರದ 4ನೇ ವಾರ್ಡಿನಿಂದ ಸ್ಪರ್ಧಿಸಿ, ಪಕ್ಷೇತರ ಸೈಯದ್ ಕಲೀಂ ಅವರನ್ನು ಸೋಲಿಸಿ 968 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಅವಕಾಶವನ್ನು ಕೊಟ್ಟ ರಾಷ್ಟ್ರೀಯ ಕಾಂಗ್ರೇಸ್ ಪಕ್ಷ ಅಭಿನಂದನಾರ್ಹ. 35 ವಾರ್ಡ್ಗಳಲ್ಲಿ 26 ಸ್ಥಾನಗಳನ್ನು ಗೆಲ್ಲುವ ಮುಖಾಂತರ ಬಳ್ಳಾರಿ ನಗರಸಭೆಯನ್ನು ಕಾಂಗ್ರೆಸ್ ತನ್ನ ವಶ ಮಾಡಿಕೊಂಡಿದೆ. ತನ್ನ ಭದ್ರಕೋಟೆ ಎಂದು ನಂಬಿದ್ದ ಬಿಜೆಪಿಗೆ ಇಲ್ಲಿ ಒಂದೂ ಸ್ಥಾನವನ್ನು ಗಳಿಸಲು ಸಾಧ್ಯವಾಗದೆ ಭಾರೀ ಮುಖಭಂಗವಾಗಿದೆ.
ಇದರಂತೆ ಇನ್ನಿತರ ಪ್ರಗತಿಪರ ರಾಷ್ಟ್ರೀಯ ಪಕ್ಷಗಳು ಈ ಉದಾಹರಣೆಯನ್ನು ಅನುಸರಿಸಿದರೆ ಸಮಾಜದಲ್ಲಿ ಇನ್ನಷ್ಟು ಬದಲಾವಣೆಯನ್ನು ನಿರೀಕ್ಷಿಸಬಹುದು. ಈ ಮೊದಲು 2010ರಲ್ಲಿ ಬೆಂಗಳೂರು ನಗರದ ಬಿ.ಬಿ.ಎಂ.ಪಿ. ಚುನಾವಣೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತೆ ವೀಣಾರವರು ಸ್ಪರ್ಧಿಸಿದ್ದನ್ನು ಸ್ಮರಿಸಬಹುದು. ಹಲವಾರು ಲಿಂಗತ್ವ ಅಲ್ಪಸಂಖ್ಯಾತರು ರಾಜಕೀಯಕ್ಕೆ ಪ್ರವೇಶಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಇದು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವರು ಸಮಾಜದ ಮುಖ್ಯವಾಹಿನಿಗೆ ಬರಲು ಮತ್ತು ಮುಖ್ಯವಾಹಿನಿ ಸಮಾಜವು ಈ ಸಮುದಾಯವನ್ನು ಒಪ್ಪಿಕೊಳ್ಳಲು ಸಹಕಾರಿಯಾಗಿದೆ. ಅದಲ್ಲದೇ ಕರ್ನಾಟಕದಲ್ಲಿ ಹಲವಾರು ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುವ ಸಂಸ್ಥೆಗಳಿಗೆ ಸಿಕ್ಕ ಜಯವಾಗಿದೆ. ಎಲ್ಲಾ ಶೋಷಿತ ಸಮುದಾಯದವರಿಗೂ ಪರ್ವೀನ್ ಬಾನುರವರ ಗೆಲವು ಮಾದರಿಯಾಗಲಿ.












Click it and Unblock the Notifications