ಬಳ್ಳಾರಿ ಮಹಾನಗರಪಾಲಿಕೆ ಕೈವಶ

ಜಿಲ್ಲೆಯಲ್ಲಿ ಶೇ 65 ರಿಂದ 70 ರಷ್ಟು ಮತದಾನವಾಗಿತ್ತು. ಬಿಜೆಪಿ ತೊರೆದು ನೂತನ ಪಕ್ಷ ಸ್ಥಾಪಿಸಿದ್ದ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಇದು ಮೊದಲ ಚುನಾವಣೆಯಾಗಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ಬಿಎಸ್ಆರ್ ಪಕ್ಷದ ಅಭ್ಯರ್ಥಿಗಳಿಗೆ ಏಕರೂಪವಾದ ಚಿಹ್ನೆ ದೊರೆಯದೆ ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಬಿಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ನಡುವಿನ ಪ್ರತಿಷ್ಠೆಯ ಕಣವಾಗಿ ಬಳ್ಳಾರಿ ಮಹಾನಗರ ಪಾಲಿಕೆಯನ್ನು ಬಿಂಬಿಸಲಾಗಿತ್ತು. ಆದರೆ, ಲೆಕ್ಕಾಚಾರಗಳು ಸುಳ್ಳಾಗಿದ್ದು, ಬಿಜೆಪಿ ತನ್ನ ಖಾತೆಯನ್ನೆ ತೆರೆಯಲಿಲ್ಲ. ಬಿಎಸ್ಆರ್ ಕಾಂಗ್ರೆಸ್ ಗೆ ಭಾರೀ ಮುಖಭಂಗ ಉಂಟುಮಾಡಿ ಕಾಂಗ್ರೆಸ್ ಗೆಲುವು ಸಾಧಿಸಿದೆ.
ಮೊದಲನೆ ಸುತ್ತಿನ ಮತ ಎಣಿಕೆಯಿಂದ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿತ್ತು. ಕೊನೆಯದಾಗಿ ಕಾಂಗ್ರೆಸ್ 26 ಸ್ಥಾನಗಳನ್ನು ಗೆಲ್ಲುವ ಮೂಲಕ ಮಹಾನಗರ ಪಾಲಿಕೆ ಅಧಿಕಾರ ಪಡೆದಿದೆ. ಬಳ್ಳಾರಿಯಲ್ಲಿ ಕೇವಲ 1 ಸ್ಥಾನದಲ್ಲೂ ಬಿಜೆಪಿ ಜಯಗಳಿಸಿಲ್ಲ ಇದರಿಂದ, ಬಿಜೆಪಿ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿರುವ ಆನಂದ್ ಸಿಂಗ್ ಅವರಿಗೆ ತೀವ್ರ ಹಿನ್ನೆಡೆ ಉಂಟಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎನ್ನುವ ಲೆಕ್ಕಾಚಾರ ಸುಳ್ಳಾಗಿ ಬಿ.ಶ್ರೀರಾಮುಲು ಅವರಿಗೆ ತವರಿನಲ್ಲೇ ಭಾರೀ ಮುಖಭಂಗ ಉಂಟಾಗಿದೆ.
ಘೋಷಣೆಯಾದ ಒಟ್ಟಾರೆ ಫಲಿತಾಂಶ
ಕಾಂಗ್ರೆಸ್ - 26
ಬಿಜೆಪಿ-0
ಬಿಎಸ್ಆರ್ ಕಾಂಗ್ರೆಸ್- 6
ಜೆಡಿಎಸ್-1
ಪಕ್ಷೇತರ-2
ಮಂಗಳಮುಖಿ ಆಯ್ಕೆ : ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಂಗಳಮುಖಿಯೊಬ್ಬಳು ಸ್ಪರ್ಧಿಸಿ ಜಯಗಳಿಸಿದ್ದಾಳೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪರ್ ವಿನ್ ಬಾನು ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದಾಳೆ. ಕಾಂಗ್ರೆಸ್ ಪಾಲಿಕೆಯಲ್ಲೂ ಜಯಭೇರಿ ಬಾರಿಸಿದ್ದು, ಬಿಎಸ್ಆರ್ ಕಾಂಗ್ರೆಸ್ ಗೆ ಭಾರಿ ಹಿನ್ನೆಡೆಯಾಗಿದೆ.












Click it and Unblock the Notifications