ಮಾ.2 : ಕರ್ನಾಟಕದ ಸೂಪರ್ ಫಾಸ್ಟ್ ಜಿಲ್ಲಾಸುದ್ದಿ

ಇವು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನಡೆದಿರುವ ವಿವಿಧ ಸುದ್ದಿಗಳ ತುಣುಕುಗಳು. ದುರಾದೃಷ್ಟದ ಸಂಗತಿಯೆಂದರೆ, ಎಲ್ಲ ಘಟನೆಗಳು ದುರಂತದಲ್ಲಿ ಕೊನೆಗೊಂಡಿವೆ. ಒಂದು ಘಟನೆಯಲ್ಲಿ ನಾಲ್ವರು ಅಪಘಾತದಲ್ಲಿ ಸಾವಿಗೀಡಾಗಿದ್ದರೆ, ಮತ್ತೊಂದು ಘಟನೆಯಲ್ಲಿ ಓರ್ವ ರೈತ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಚಾಮರಾಜನಗರದಲ್ಲಿ ಭೀಕರ ಅಪಘಾತ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಾಡರಹಳ್ಳಿ ಬಳಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಮತ್ತು ಇಂಡಿಕಾ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರನ್ನು ಚಲಾಯಿಸುತ್ತಿದ್ದ ಅಶೋಕ್ (40), ಅವರ ತಾಯಿ ಬೋರಮ್ಮ (60) ಮತ್ತು ಮಗಳಾದ ಸೋನು (6), ಸಹೋದರನ ಮಕ್ಕಳಾದ ಯಶವಂತ (3) ಮತ್ತು ವೈಭವ್ (ಒಂದೂವರೆ ವರ್ಷ) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಶೋಕ್ ಅವರ ಪತ್ನಿ ನಳಿನಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಲ್ಲಿ ಅಗ್ನಿ ಆಕಸ್ಮಿಕ : ಬಾಣಸವಾಡಿ ಪೊಲೀಸ್ ಠಾಣೆ ಬಳಿಯಿರುವ ಹರ್ಯಾಣ ಹ್ಯಾಂಡ್ ಲೂಮ್ ಬಟ್ಟೆ ಅಂಗಡಿ ಮತ್ತು ಗೋಡೌನಿನಲ್ಲಿ ಭಾರೀ ಅಗ್ನಿ ಆಕಸ್ಮಿಕ ಸಂಭವಿಸಿದೆ. ಈ ಘಟನೆ ಶನಿವಾರ ಮಧ್ಯಾಹ್ನ 2.15ರ ಸುಮಾರಿಗೆ ಸಂಭವಿಸಿದ್ದು, 12ರಿಂದ 13 ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಯತ್ನಿಸುತ್ತಿದ್ದಾರೆ. ಈ ಘಟನೆ ಹೇಗೆ ಸಂಭವಿಸಿತು ಎಂದು ತಿಳಿದುಬಂದಿಲ್ಲ.
ರಾಮನಗರ ರೈತನಿಂದ ಆತ್ಮಹತ್ಯೆಗೆ ಯತ್ನ : ಜಮೀನಿಗೆ ಸಂಬಂಧಿಸಿದ ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದ ಸರ್ವೇ ಮತ್ತು ಕಂದಾಯ ಅಧಿಕಾರಿಗಳ ಧೋರಣೆಯಿಂದ ಬೇಸತ್ತು ವಾಸು ಎಂಬ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಜಾಲಮಂಗಲದ ರೈತ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಶುಕ್ರವಾರ ವಾಸು ಅವರ ಸಂಬಂಧಿ ಗಂಗಯ್ಯ ಅವರು ಮಿನಿ ವಿಧಾನಸೌಧದಿಂದ ಹಾರಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯವನ್ನು ವಿರೋಧಿಸಿ ನೂರಾರು ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ಬಿದ್ದ ಶ್ರೀರಂಗಪಟ್ಟಣ ಗುಡಿ ಮೇಲಿನ ಕಳಶ : ಒಂದೂವರೆ ಸಾವಿರ ವರ್ಷ ಹಳೆಯ ಶ್ರೀರಂಗಪಟ್ಟಣ ರಂಗನಾಥ ದೇಗುಲದ ರಾಜಗೋಪುರದ ಮೇಲಿದ್ದ ಪಂಚಲೋಹದ ಎರಡು ಕಳಶಗಳು ಶುಕ್ರವಾರ ಬಿದ್ದಿದ್ದು, ಮುಜರಾಯಿ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸುಮಾರು 60 ಅಡಿ ಎತ್ತರವಿರುವ ಗೋಪುರದ ಮೇಲಿದ್ದ 50 ಕೆಜಿ ತೂಕವಿರುವ ಕಳಶಗಳು ಬಿದ್ದಿರುವುದು ಅಪಶಕುನದ ಸಂಕೇತ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಐತಿಹಾಸಿಕ ದೇವಸ್ಥಾನದ ಕಟ್ಟಡ ಶಿಥಿಲಾವಸ್ಥೆಯಲ್ಲಿ ಇದ್ದರೂ ಮುಜರಾಯಿ ಇಲಾಖೆ ಅದರ ಜೀರ್ಣೋದ್ಧಾರಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಗುಡಿಯ ಗೋಪುರ ಅನೇಕ ಕಡೆಗಳಲ್ಲಿ ಬಿರುಕುಬಿದ್ದಿದೆ. ಈಗಲೇ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಮತ್ತಷ್ಟು ಅನಾಹುತವಾಗುವ ಸಂಭವನೀಯತೆಯಿದೆ. ತುಕ್ಕು ಹಿಡಿದಿದ್ದ ಕಳಶ ಬಿದ್ದಿರುವುದು ಮುಂದೆ ಜರುಗುವ ಭಾರೀ ಅನಾಹುತದ ಸಂಕೇತ ಎಂದೂ ಹಳ್ಳಿ ಜನರು ಆಡಿಕೊಳ್ಳುತ್ತಿದ್ದಾರೆ.
ಓದುಗರಲ್ಲಿ ವಿನಂತಿ : ನಿಮ್ಮ ಜಿಲ್ಲೆಯಲ್ಲಿ ಸಂಭವಿಸುವ ಸಣ್ಣಸಣ್ಣ ಸುದ್ದಿಗಳನ್ನು ನಮಗೆ ಕಳಿಸಿ. ಫೋಟೋ ಇದ್ದರೆ ಲಗತ್ತಿಸಿ. ಧನ್ಯವಾದಗಳು. - ಸಂಪಾದಕ.











Click it and Unblock the Notifications