ರೈಲ್ವೆ ಬಜೆಟ್ ಭಾರ : ಶೆಟ್ಟರ್ ಖಾರ ಪ್ರತಿಕ್ರಿಯೆ

ರೈಲ್ವೆ ಸಂಪರ್ಕದಲ್ಲಿ ರಾಷ್ಟ್ರೀಯ ಸರಾಸರಿಗಿಂತ ಅತ್ಯಂತ ಕಡಿಮೆ ಸಂಪರ್ಕ ಹೊಂದಿರುವ ಕರ್ನಾಟಕಕ್ಕೆ ಹೊಸ ರೈಲು ಮಾರ್ಗಗಳು ಮತ್ತು ಹೊಸ ರೈಲುಗಳನ್ನು ಮಂಜೂರು ಮಾಡುವಲ್ಲಿ ರೈಲ್ವೆ ಸಚಿವರು ವಿಫಲರಾಗಿದ್ದಾರೆ. ರೈಲ್ವೆ ಜಾಲದಲ್ಲಿ ರಾಷ್ಟ್ರೀಯ ಸರಾಸರಿ ಶೇ.24 ಕಿ.ಮೀ. ಇದ್ದರೆ ಕರ್ನಾಟಕ ಹೊಂದಿರುವ ರೈಲ್ವೆ ಸಂಪರ್ಕದ ಪ್ರಮಾಣ ಶೇ.16.9 ಮಾತ್ರ. ನೆರೆಯ ತಮಿಳುನಾಡು ಶೇ.31 ಕಿ.ಮೀ. ರೈಲ್ವೆ ಸಂಪರ್ಕ ಜಾಲ ಹೊಂದಿದೆ.
ಕರ್ನಾಟಕ ರೈಲ್ವೆ ಯೋಜನೆಗಳ ಅನುಷ್ಠಾನದಲ್ಲಿ ಶೇ.50ರಷ್ಟು ವೆಚ್ಚ ಭರಿಸಲು ಮತ್ತು ರೈಲ್ವೆ ಮಾರ್ಗಕ್ಕೆ ಅಗತ್ಯವಾದ ಭೂಮಿಯನ್ನು ರಾಜ್ಯ ಸರ್ಕಾರದ ವೆಚ್ಚದಲ್ಲಿ ಭೂ-ಸ್ವಾಧೀನ ವೂಡಿ ಒದಗಿಸುತ್ತಿರುವ ಏಕೈಕ ರಾಜ್ಯವಾಗಿದೆ. ಆದರೂ ಕೂಡಾ ಕರ್ನಾಟಕಕ್ಕೆ ಸಿಗಬೇಕಾದ ಆದ್ಯತೆ ಸಿಕ್ಕಿಲ್ಲ. ಇದು ವಿಷಾದನೀಯ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಸಿಕ್ಕಿದ್ದಾವುದು, ಸಿಗದಿದ್ದಾವುದು? : ನಾವು ಪ್ರಸ್ತಾಪಿಸಿರುವ 7 ಹೊಸ ಯೋಜನೆಗಳ ಪೈಕಿ ಕೇವಲ ಗದಗ - ವಾಡಿ, ಶ್ರೀನಿವಾಸಪುರ ಮದನಪಲ್ಲಿ, ಚಿಕ್ಕಬಳ್ಳಾಪುರ - ಪುಟ್ಟಪರ್ತಿ ಮಾರ್ಗಗಳನ್ನು ಮಾತ್ರ ಮಂಜೂರು ಮಾಡಿದ್ದು, ಗದಗ-ಹಾವೇರಿ, ಕದರಿ-ಪುಟ್ಟಪರ್ತಿ, ಧಾರವಾಡ-ಬೆಳಗಾವಿ, ಕೆ.ಆರ್. ನಗರ-ಕುಶಾಲನಗರ ಮಾರ್ಗಗಳನ್ನು ಪರಿಗಣಸಿರುವುದಿಲ್ಲ. ಅದೇ ರೀತಿ ಬಿಜಾಪುರ-ಶಹಾಬಾದ್, ತಾಳಗುಪ್ಪ-ಹೊನ್ನಾವರ, ಹುಬ್ಬಳ್ಳಿ-ಅಂಕೋಲ ಮಾರ್ಗಗಳನ್ನು ಪಿಪಿಪಿ ಆಧಾರದ ಮೇಲೆ ಕೈಗೊಳ್ಳುವಂತೆ ಕೋರಲಾಗಿತ್ತು. ಇದನ್ನೂ ಪರಿಗಣಿಸಿಲ್ಲ.
ತಿಪಟೂರು-ದುದ್ದ, ಗದಗ-ಮುಂಡರಗಿ-ಹರಪನಹಳ್ಳಿ, ಮಂಗಳೂರು-ಗುಲ್ಬರ್ಗಾ, ಆಲಮಟ್ಟಿ-ಕೊಪ್ಪಳ, ಆಲಮಟ್ಟಿ-ಯಾದಗಿರಿ, ಬಿಜಾಪುರ-ಅಥಣ, ಬೆಂಗಳೂರು-ಮಂಗಳೂರು ಡಬ್ಲಿಂಗ್, ಬೆಂಗಳೂರು-ಶಿರಡಿ (ವಯಾ ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಬಾಗಲಕೋಟೆ, ಬಿಜಾಪುರ), ರಾಯಚೂರು-ಬಾಗಲಕೋಟೆ, ಬೆಂಗಳೂರು-ಮಂಗಳೂರು (ಮೈಸೂರು ಮಾರ್ಗವಾಗಿ ಹಗಲು ರೈಲು) ಯೋಜನೆಗಳನ್ನು ಕೈಗೆತ್ತಿಕೊಳ್ಳುವಂತೆಯೂ ಕೋರಲಾಗಿತ್ತು. ಇವುಗಳನ್ನೂ ಕೂಡಾ ಮಂಜೂರು ಮಾಡದಿರುವುದು ಶೋಚನೀಯ ಎಂದಿದ್ದಾರೆ ಶೆಟ್ಟರ್.
ಕೆಲವು ಮಾರ್ಗಗಳಲ್ಲಿ ರೈಲು ಸಂಚಾರವನ್ನು ವಿಸ್ತರಿಸಲಾಗಿದ್ದರೂ ಅದು ಅತ್ಯಲ್ಪ ದೂರದ್ದಾಗಿದ್ದು ರಾಜ್ಯಕ್ಕಿಂತಲೂ ಬೇರೆ ರಾಜ್ಯಗಳಿಗೆ ಹೆಚ್ಚು ಅನುಕೂಲವಾಗಿದೆ. ಆದ್ದರಿಂದ ಕೇಂದ್ರ ರೈಲ್ವೆ ಸಚಿವರು ಕರ್ನಾಟಕಕ್ಕೆ ರೈಲ್ವೆ ಯೋಜನೆಗಳಲ್ಲಿ ಈಗಾಗಲೇ ಆಗಿರುವ ಅನ್ಯಾಯವನ್ನು ಸರಿಪಡಿಸುವುದಿರಲಿ, ಹೊಸದಾಗಿ ಮತ್ತೆ ಅನ್ಯಾಯ ಎಸಗಿದಂತಾಗಿದೆ ಎಂದು ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications