ಸೆಲ್ ಹಿಂದೆ ಬಿದ್ದ ಶುಭಂ ಸಾವಿನಲ್ಲಿ ಅಂತ್ಯ

ತನ್ನ ಮೊಬೈಲ್ ಫೋನನ್ನು ಹಿಂತಿರುಗಿಸುವಂತೆ ಕೇಳಿದ ಖಾಸಗಿ ಶಾಲೆಯೊಂದರ ಎಂಟನೆ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಆತನ ಇಬ್ಬರು ಸಹಪಾಠಿಗಳು ಹತ್ಯೆಗೈದ ಘಟನೆ ಹರ್ಯಾಣದ ಸೋನೆಪತ್ನಲ್ಲಿ ನಡೆದಿದೆ.
ಕೊಲೆಯಾದ ವಿದ್ಯಾರ್ಥಿ 14 ವರ್ಷ ವಯಸ್ಸಿನ ಶುಭಂ, ಒಂದು ವಾರದ ಹಿಂದೆ ತನ್ನ ಮೊಬೈಲ್ ಫೋನನ್ನು, ತನ್ನ ಸಹಪಾಠಿ ಗೆಳೆಯನಿಗೆ ನೀಡಿದ್ದ. ಅದನ್ನು ಹಿಂತಿರುಗಿಸುವಂತೆ ಆತ ಕೇಳಿದ್ದಾನೆ. ಆರೋಪಿ ವಿದ್ಯಾರ್ಥಿಗಳಲ್ಲೊಬ್ಬ ವಾಪಸ್ ಕೊಡ್ತೀನಿ, ಶಾಲೆ ಹಿಂಭಾಗಕ್ಕೆ ಇಷ್ಟು ಗಂಟೆಗೆ ಬಾ ಎಂದು ಹೇಳಿದ್ದಾನೆ.
ಮೊಬೈಲ್ ಪಡೆಯುವ ಆತುರದಲ್ಲಿದ್ದ ಶುಭಂ ಹೇಳಿದ ಸ್ಥಳಕ್ಕೆ ಬಂದಿದ್ದಾನೆ. ಅಲ್ಲಿದ್ದ ಇಬ್ಬರು ಸಹಪಾಠಿ ವಿದ್ಯಾರ್ಥಿಗಳು, ಮೊಬೈಲ್ ಕೊಡುವುದಿಲ್ಲ ಎಂದು ಹೇಳಿದ್ದಾರೆ. ಮೂವರಿಗೂ ಜೋರು ಜಗಳ ನಡೆದಿದೆ. ಇಬ್ಬರು ಆರೋಪಿ ವಿದ್ಯಾರ್ಥಿಗಳು ಶುಭಂ ಕತ್ತು ಹಿಸುಕಿ ಕೊಂದಿದ್ದಾರೆ. ನಂತರ ಆತನ ಶವವನ್ನು ಅವರು ಶಾಲಾ ಕಟ್ಟಡದ ಆವರಣ ಗೋಡೆಯ ಬಳಿಯಿರುವ ಪೊದೆಗೆ ಎಸೆದು ಹೋಗಿದ್ದಾರೆ.
ಶಾಲೆಗೆ ಹೋದ ಶುಭಂ ಮನೆಗೆ ಮರಳದೆ ಇದ್ದಾಗ, ಗಾಬರಿಗೊಂಡ ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕ ಶುಭಂನ ಮೃತದೇಹವನ್ನು ನಂತರ ಪತ್ತೆ ಹಚ್ಚಲಾಗಿದೆ. ಘಟನೆಯ ವಿವರ ನೀಡಿರುವ ಸೋನೆಪತ್ ಪೊಲೀಸ್ ಅಧೀಕ್ಷಕ ಅರುಣ್ ನೇಹ್ರಾ ತಿಳಿಸಿದ್ದಾರೆ. ಆರೋಪಿ ವಿದ್ಯಾರ್ಥಿಗಳಿಬ್ಬರೂ 14 ವರ್ಷ ವಯಸ್ಸಿನವರಾಗಿದ್ದು, ಅವರನ್ನು ಅಂಬಾಲದ ಬಾಲ ದುರಾಚಾರ ನಿವಾರಣಾ ಗೃಹದಲ್ಲಿರಿಸಲಾಗಿದೆ. (ಪಿಟಿಐ)












Click it and Unblock the Notifications