ಗೌಡರಿಬ್ಬರಿಂದ ಮೈಸೂರಿನಲ್ಲಿ ಜೆಡಿಎಸ್ ಸೇರ್ಪಡೆ?

ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯವರು ಹೇಳುವಂತೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಫೆ.25 ಅಥವ 26ರಂದು ಜೆಡಿಎಸ್ ನ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶದ ಮೂಲಕವೇ ಜೆಡಿಎಸ್ ಬಹಿರಂಗವಾಗಿ ಚುನಾವಣಾ ಪ್ರಚಾರ ಆರಂಭಿಸಲಿದೆ ಎನ್ನುವುದು ಪಕ್ಷದ ಮೂಲಗಳ ಮಾಹಿತಿ.
ಈ ಸಮಾವೇಶದಲ್ಲಿ ಬಿಜೆಪಿಯ ಚಾಮರಾಜ ಕ್ಷೇತ್ರದ ಶಾಸಕ ಎಚ್.ಎಸ್.ಶಂಕರಲಿಂಗೇಗೌಡ ಅಪಾರ ಬೆಂಬಲಿಗರೊಂದಿಗೆ ಜೆಡಿಎಸ್ ಸೇರಲಿದ್ದಾರೆ. ತಾವು ಜೆಡಿಎಸ್ ಸೇರುವುದಾಗಿ ಬಜೆಟ್ ಅಧಿವೇಶನ ಪ್ರಾರಂಭವಾಗುವ ಮುನ್ನವೇ, ತಲೆಯ ಮೇಲೆ ಬಾಟಲಿ ನೀರು ಸುರಿದುಕೊಂಡು ಶಂಕರಲಿಂಗೇಗೌಡ ಶಪಥ ಮಾಡಿದ್ದರು. ಇದರಿಂದಾಗಿ ಬಿಜೆಪಿಯಲ್ಲಿ ಮತ್ತೊಂದು ವಿಕೆಟ್ ಪತನವಾಗಲಿದೆ.
ಮತ್ತೊಬ್ಬ ಬಿಜೆಪಿ ಮುಖಂಡ, ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸಹ ಸಮಾವೇಶದಲ್ಲಿ ಮರಳಿ ಜೆಡಿಎಸ್ ಸೇರಲಿದ್ದಾರೆ. ಕೆಲವು ತಪ್ಪು ಗ್ರಹಿಕೆಗಳಿಂದಾಗಿ ದೇವೇಗೌಡರು ಜೆಡಿಎಸ್ ತೊರೆದಿದ್ದರು. ಅವರು ಮರಳಿ ಪಕ್ಷಕ್ಕೆ ಸೇಪರ್ಡೆಗೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇವರೊಂದಿಗೆ ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಡಕೊಳ ನಾಗರಾಜ್, ಕೋಟೆ ನಾಗರಾಜ್ ಮುಂತಾದ ನಾಯಕರು ಜೆಡಿಎಸ್ ಸೇರಲಿದ್ದಾರೆ. ಮೈಸೂರಿನ ಪಕ್ಷದ ಮುಖಂಡರೊಂದಿಗೆ ಜಿ.ಟಿ.ದೇವೇಗೌಡ ಮತ್ತು ಶಾಸಕ ಶಂಕರಲಿಂಗೇಗೌಡ ಸೇರ್ಪಡೆ ಕುರಿತು ಚರ್ಚೆ ನಡೆಸಿದ್ದು, ಎಲ್ಲರೂ ಸಹಮತ ಸೂಚಿಸಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಚುನಾವಣೆ ಸನಿಹವಾಗುತ್ತಿರುವ ಹೊತ್ತಿನಲ್ಲಿಯೇ ಜೆಡಿಎಸ್ ತನ್ನ ಭದ್ರಕೋಟೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ಪ್ರಾರಂಭಿಸಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಐಟಿ ಕ್ಷೇತ್ರದ ಮತದಾರರನ್ನು ಸೆಳೆಯಲು ಪಕ್ಷ ವೆಬ್ ಸೈಟ್ ಪ್ರಾರಂಭಿಸಿ, ಚುನವಾಣಾ ಸಿದ್ಧತೆ ಪ್ರಾರಂಭಿಸಿತ್ತು. ಸಮಾವೇಶದ ರಾಜ್ಯಾದ್ಯಂತ ಚುನಾವಣಾ ಪ್ರಚಾರ ಕಾರ್ಯವನ್ನು ಬಹಿರಂಗವಾಗಿ ಪ್ರಾರಂಭಿಸುವ ಸಂಭವವಿದೆ.












Click it and Unblock the Notifications