ಬಿಜೆಪಿ-ಜೆಡಿಎಸ್ ಕೂಡಿಕೆ ಡೇಂಜರ್ : ಯಡಿಯೂರಪ್ಪ

ಜನತೆ ದಿಕ್ಕು ತಪ್ಪಿಸುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಡಾಕ್ಟರೇಟ್ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ. 2012-13ನೆ ಸಾಲಿನಲ್ಲಿ ರೂಪಿಸಲಾಗಿದ್ದ ಬಜೆಟ್ನ ಯೋಜನೆಗಳು ಮತ್ತು ಯೋಜನೇತರ ವೆಚ್ಚದಲ್ಲಿ ಶೇ.45ರಷ್ಟು ಯೋಜನೆಗಳು ಸಹ ಅನುಷ್ಠಾನಗೊಂಡಿಲ್ಲ. ಇದಕ್ಕೆ ನೇರ ಹೊಣೆ ಡಿ.ವಿ.ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಅವರೇ ಎಂದು ಹೇಳಿದ್ದಾರೆ.
ನಾನು ಕಾವೇರಿಗಾಗಿ ಪಾದಯಾತ್ರೆ ನಡೆಸಿದರೆ ರಾಜಕೀಯ ಗಿಮಿಕ್ ಎಂದೇ ಕರೆಯಲಾಗುತ್ತಿದೆ. ಆದರೆ, ಅದೇ ಮಾಜಿ ಪ್ರಧಾನಿ ದೇವೇಗೌಡರು ಕಾವೇರಿಗಾಗಿ ಪಾದಯಾತ್ರೆ ಮಾಡಿದರೆ ಅಂತಹ ಆಕ್ಷೇಪಗಳು ವ್ಯಕ್ತವಾಗುವುದಿಲ್ಲ. ಇದಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಹೊಂದಾಣಿಕೆ ಕಾರಣವೇ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ಮುಂದಿನ ಎರಡು ದಿನಗಳಲ್ಲಿ ಕೆಜೆಪಿ ಪಕ್ಷಕ್ಕೆ ಚಿನ್ಹೆ ದೊರೆಯಲಿದ್ದು, ಮುಂದಿನ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿದರು. ಪ್ರಸ್ತುತ ಸರ್ಕಾರ ಕೃಷಿ, ನೀರಾವರಿ, ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರಕ್ಕೂ ಆದ್ಯತೆ ನೀಡುತ್ತಿಲ್ಲ. ಆದರೆ, ತಾವು ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೃಷಿ, ನೀರಾವರಿ, ಶಿಕ್ಷಣ, ಪರಿಶಿಷ್ಟ ಜಾತಿ-ಪಂಗಡ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಸಮಾನ ಪ್ರಾಮುಖ್ಯತೆ ನೀಡಿ ಅಭಿವೃದ್ಧಿಪಡಿಸಲು ಮುಂದಾಗಿದ್ದೆವು ಎಂದರು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಂಡಿಸಿರುವ 2013-14ನೆ ಸಾಲಿನ ಬಜೆಟ್ ಚುನಾವಣಾ ಪ್ರಣಾಳಿಕೆಯಂತಿದೆ ಎಂದು ಲೇವಡಿ ಮಾಡಿದ ಅವರು, ಪ್ರಸ್ತುತ ಬಜೆಟ್ನಲ್ಲಿ ಮಂಡಿಸಿರುವ ಯಾವುದೇ ಯೋಜನೆಗಳು ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಿರುವ ಹಿನ್ನೆಲೆಯಲ್ಲಿ ಕಾರ್ಯಗತಗೊಳ್ಳುವುದಿಲ್ಲ ಎಂದರು.
ಯಡಿಯೂರಪ್ಪ ಪ್ರವಾಸ : ಫೆ.16ರಂದು ಮೈಸೂರು, ಚಾಮರಾಜನಗರ, ತುಮಕೂರು, ಫೆ.17ರಂದು ಹುಬ್ಬಳ್ಳಿ, ಧಾರವಾಡ, ಹಾವೇರಿ, ಫೆ.18 ರಂದು ಬೆಳಗಾವಿ, ಸವದತ್ತಿ, ಫೆ.19ರಂದು ಬೀದರ್, ಗುಲ್ಬರ್ಗಾ, ಯಾದಗಿರಿ, ಫೆ.20ರಂದು ಬಳ್ಳಾರಿ, ಫೆ. 21ರಂದು ದಾವಣಗೆರೆ, ಚಿತ್ರದುರ್ಗ ಪ್ರವಾಸ ಕೈಗೊಂಡು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪ್ರಚಾರ ನಡೆಸುವುದಾಗಿ ಹೇಳಿದರು.
ಚುನಾವಣಾ ಆಯೋಗದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕಟಣೆಯನ್ನು ಸ್ವಾಗತಿಸಿದ ಅವರು, ಪಕ್ಷ ಎಲ್ಲ ರೀತಿಯಲ್ಲೂ ಇದಕ್ಕಾಗಿ ಸಿದ್ಧಗೊಂಡಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಸುರೇಶ್, ಎಂ.ಡಿ.ಲಕ್ಷ್ಮಿನಾರಾಯಣ್, ಧನಂಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.(ಪಿಟಿಐ)












Click it and Unblock the Notifications