ಮತ್ತೆ ಅದೇ ಡೈಲಾಗ್ ಹೊಡೆದ ಉಮೇಶ್ ಕತ್ತಿ

ಈ ಬಾರಿ ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧದಲ್ಲಿಯೇ, ತಾವು ಮುಖ್ಯಮಂತ್ರಿ ಆಗುವುದಾಗಿ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ. ವಿಧಾನ ಮಂಡಲ ಕಲಾಪದಲ್ಲಿ ಭಾಗವಹಿಸಿದ್ದ ಅವರು ಸದನದಲ್ಲಿಯೇ ಮತ್ತೊಮ್ಮೆ ಪ್ರತ್ಯೇಕ ರಾಜ್ಯದ ಮಾತುಗಳನ್ನಾಡಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಕೋಪಕ್ಕೆ ತುತ್ತಾಗಿದ್ದಾರೆ.
ಸೋಮವಾರ (ಫೆ.11)ರಂದು ವಿಧಾನಮಂಡಲ ಕಪಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ, ನಾನು ಬಚ್ಚೇಗೌಡರಂತೆ ದೊಡ್ಡ ಆಸ್ತಿಯುಳ್ಳ ಕುಟುಂಬದವನಲ್ಲ. ರಾಜಕೀಯ ಹಿನ್ನಲೆಯೂ ನನ್ನ ಕುಟುಂಬಕ್ಕಿಲ್ಲ. ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು ಎಂದು ನಗುತ್ತಲೇ ಹೇಳಿದರು.
ಈ ವೇಳೆ ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ ಜೆಡಿಎಸ್ ಶಾಸಕ ಪುಟ್ಟರಾಜು ಬಚ್ಚೇಗೌಡರ ಹೆಸರು ಏಕೆ ಹೇಳುತ್ತೀರಿ? ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಿ, ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ಹೊರಟಿರುವ ಉಮೇಶ್ ಕತ್ತಿ ಅವರಿಲ್ಲವೇ ಎಂದು ಕತ್ತಿ ಅವರ ಹೆಸರು ಪ್ರಸ್ತಾಪಿಸಿದರು.
ಗಂಭೀರವಾಗಿ ಕುಳಿತು ಚರ್ಚೆ ಕೇಳಿಸಿಕೊಳ್ಳುತ್ತಿದ್ದ ಸಚಿವ ಉಮೇಶ್ ಕತ್ತಿ ತಕ್ಷಣ ಎದ್ದು ನಿಂತು, "ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ನನಗಿನ್ನೂ 50 ವರ್ಷ, ಅಖಂಡ ಕರ್ನಾಟಕಕ್ಕೆ ನಾನು ಮುಖ್ಯಮಂತ್ರಿಯಾಗುವುದು ಖಚಿತ. ಉತ್ತರ ಕರ್ನಾಟಕಕ್ಕೆ ನನ್ನ ಮಗ ಮುಖ್ಯಮಂತ್ರಿಯಾಗುವುದು ಸತ್ಯ" ಎಂದು ಪುನರುಚ್ಚರಿಸಿದರು.
ಇದರಿಂದ ಕೋಪಗೊಂಡ ಸಿದ್ಧರಾಮಯ್ಯ ನೀವು ಮುಖ್ಯಮಂತ್ರಿ ಆಗುವುದಿಲ್ಲ ಬಿಡಿ. ಪ್ರತ್ಯೇಕ ರಾಜ್ಯದ ಬಗ್ಗೆ ಪ್ರಸ್ತಾಪಿಸಬೇಡಿ ಎಂದು ತಾಕೀತು ಮಾಡಿದರು. ಆದರೂ ಸುಮ್ಮನಾಗದ ಉಮೇಶ್ ಕತ್ತಿ "ನನಗಿನ್ನೂ 50 ವರ್ಷ, ನಾನು ಇನ್ನೂ 20 ವರುಷ ರಾಜಕೀಯ ಮಾಡುತ್ತೇನೆ. ಮುಖ್ಯಮಂತ್ರಿ ಆಗುತ್ತೇನೆ" ಎಂದು ಮತ್ತೊಮ್ಮೆ ಹೇಳಿಕೆ ನೀಡಿ ನಂತರ ಮುಂದಿನ ಚೆರ್ಚೆಗೆ ಅವಕಾಶ ಮಾಡಿಕೊಟ್ಟರು.












Click it and Unblock the Notifications