ಕೊಲೆಗೆ ಕಾರಣ ಕೇವಲ 1100 ರೂ.

ಬೆಂಗಳೂರು, ಫೆ.11: "ಐಷಾರಾಮಿ ಜೀವನ ಸಾಗಿಸಲು ಮನೆಗೆ ನುಗ್ಗಿ ದರೋಡೆ ಮಾಡಿದೆವು. ಕೈಗೆ ಕೇವಲ 1100 ರೂ. ದೊರಕಿದ್ದರಿಂದ ಕೋಪಗೊಂಡು ಕೊಲೆ ಮಾಡಿ ಪರಾರಿಯಾದೆವು." ಇದು ನಗರದಲ್ಲಿ ಇತ್ತೀಚೆಗೆ ನಡೆದ ಹಿರಿಯ ವಕೀಲ ಅಮರ್ ದೀಪ್ ಖೈಂತ್ ಕೊಲೆ ಪ್ರಕರಣದ ಬಂಧಿತರು ಪೊಲೀಸರಿಗೆ ನೀಡಿದ ಹೇಳಿಕೆ.
ಐಟಿಪಿಎಲ್ ಸಮೀಪದ ವಿಂಡ್ ಮಿಲ್ ಆಫ್ ಯುವರ್ ಡ್ರೀಮ್ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ವಕೀಲ ಡಾ. ಅಮರ್ ದೀಪ್ ಖೈಂತ್ ಕೊಲೆ ಪ್ರಕರಣ ಭೇದಿಸಿರುವ ಮಹದೇವಪುರ ಪೊಲೀಸರು, ವಿಂಡ್ ವಿಲ್ ಆಫ್ ಯುವರ್ ಡ್ರೀಮ್ ಅಪಾರ್ಟ್ ಮೆಂಟ್ ನ ಸೆಕ್ಯೂರಿಟಿ ಗಾರ್ಡ್ ಗಳಾದ ಅಸ್ಸಾಂ ಮೂಲದ ರೂಪಮ್ ಬೋರ ಮತ್ತು ಸಂಜಯ್ ಹಜಾರಿಕಾರನ್ನು ಕೋಲ್ಕತಾ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಬಂಧಿತರು ರಾತ್ರಿ ಮತ್ತು ಬೆಳಗಿನ ಪಾಳಿಯಲ್ಲಿ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಗಾರ್ಡ್ ಗಳಾಗಿ ಕೆಲಸ ಮಾಡುತ್ತಿದ್ದರು. ಒಂಟಿಯಾಗಿ ವಾಸಿಸುತ್ತಿದ್ದ ಖೈಂತ್ ಮನೆಗೆ ನುಗ್ಗಿ ದೊರೆಯುವ ಹಣ, ಚಿನ್ನಾಭರಣ ದೋಚಿ ಅಸ್ಸಾಂನಲ್ಲಿ ನೆಲೆಸಿ ಐಷಾರಾಮಿ ಜೀವನ ನಡೆಸುವ ಯೋಜನೆ ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.
ಈ ಹಿಂದೆ ಮೂರು ಬಾರಿ ದರೋಡೆಗೆ ಯೋಜನೆ ರೂಪಿಸಿ ನಿರಾಶರಾಗಿದ್ದ ಇವರು, ಶುಕ್ರವಾರ (ಫೆ.8)ರಂದು ರಾತ್ರಿ ಖೈಂತ್ ಒಬ್ಬರೇ ಮನೆಯಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡು ರಾತ್ರಿ 11.30 ರ ಮನೆಗೆ ನುಗ್ಗಿದ್ದಾರೆ. ಖೈಂತ್ ಅವರ ಕೈಕಾಲು ಕಟ್ಟಿಹಾಕಿ ಮನೆ ಹುಡುಕಾಡಿದ್ದಾರೆ. ಕೇವಲ 1100 ರೂ. ಮತ್ತು ಡೆಬಿಟ್, ಕ್ರೆಡಿಟ್ ಕಾರ್ಡ್ ಗಳು ಮಾತ್ರ ದೊರಕಿವೆ. ಇದರಿಂದ ಕೋಪಗೊಂಡು ಚೂರಿಯಿಂದ ಇರಿದು ಅಮರ್ ದೀಪ್ ಖೈಂತ್ ರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಹೇಗೆ ಸಿಕ್ಕಿ ಬಿದ್ದರು : ಕೊಲೆ ಪ್ರಕರಣದ ಬೆಳಕಿಗೆ ಬಂದ ನಂತರ ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳು ನಾಪತ್ತೆಯಾಗಿದ್ದರು. ಪೊಲೀಸರ ಇಬ್ಬರ ಮೊಬೈಲ್ ನೆಟ್ ವರ್ಕ್ ಜಾಲಾಡಿದ್ದಾರೆ. ಇಬ್ಬರು ಕೋಲ್ಕತ್ತಾ ಸಮೀಪ ರೈಲಿನಲ್ಲಿ ತೆರಳುತ್ತಿರುವುದು ಪತ್ತೆಯಾಗಿದೆ. ನಂತರ ಅವರ ಫೋಟೋ ಪಡೆದು ವಿಶೇಷ ವಿಮಾನ ವೇರಿದ ಮಹದೇವಪುರ ಪೊಲೀಸರು, ಕೋಲ್ಕತ್ತಾದಲ್ಲಿ ಅವರನ್ನು ಬಂಧಿಸಿ ಬಂಧಿಸಿ ಕರೆತಂದಿದ್ದಾರೆ.












Click it and Unblock the Notifications