ಬಜೆಟ್ : ನನ್ನ ಕನಸು ಭಗ್ನ ಗೊಂಡಿದೆ, ಯಡಿಯೂರಪ್ಪ
ಮಂಡ್ಯ, ಫೆ.8: ಎಲ್ಲಾ ಸರಿಯಾಗಿದ್ರೆ ಈ ಬಾರಿ ನಾನೇ ಬಜೆಟ್ ಮಂಡಿಸಬೇಕಿತ್ತು. ಆದ್ರೆ.. ಹೋಗ್ಲಿ ಯಾಕೆ ಇವಾಗ ಅದೆಲ್ಲಾ? ಎಂದು ದುಃಖ ತೋಡಿಕೊಂಡವರು ಬೇರೆ ಯಾರೂ ಅಲ್ಲ.. ಆರು ಬಾರಿ ಬಜೆಟ್ ಮಂಡಿಸಿದ ದಾಖಲೆ ಹೊಂದಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ.
ನನಗೆ ಬಜೆಟ್ ಮಂಡಿಸಲು ಆಗುತ್ತಿಲ್ಲವಲ್ಲ, ರಾಜ್ಯದ ಜನರಿಗೆ ಇನ್ನಷ್ಟು ಕೊಡುಗೆ, ರೈತಾಪಿ ಜನರಿಗೆ ಇನ್ನಷ್ಟು ಸೌಕರ್ಯ ಒದಗಿಸಲು ಆಗುತ್ತಿಲ್ಲವಲ್ಲ ಎಂಬ ಕೊರಗಿದೆ. ಇರಲಿ ನಾನು ಹಾಕಿಕೊಟ್ಟ ಅಡಿಪಾಯದಲ್ಲೇ ಶೆಟ್ಟರ್ ಅವರು ಬಜೆಟ್ ಮಂಡಿಸಿದ್ದಾರೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕಾವೇರಿ ನೀರಿಗಾಗಿ ಮೈಸೂರಿನಿಂದ ಬೆಂಗಳೂರು ಕಡೆಗೆ ಪಾದಯಾತ್ರೆ ನಡೆಸಿರುವ ಯಡಿಯೂರಪ್ಪ ಅವರಿಗೆ ಸಕ್ಕರೆ ನಾಡು ಮಂಡ್ಯದಲ್ಲಿ ಶುಕ್ರವಾರ(ಫೆ.8) ಭರ್ಜರಿ ಸ್ವಾಗತ ಸಿಕ್ಕಿದೆ. ಅಪಾರ ಜನಸ್ತೋಮ ಕಂಡು ಪುಳಕಿತಗೊಂಡ ಯಡಿಯೂರಪ್ಪ ಅವರು ಶೆಟ್ಟರ್ ಬಜೆಟ್ ನಿಂದ ತಮ್ಮ ಕನಸು ಭಗ್ನಗೊಂಡಿದೆ ಎಂದರು.

"ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಪಟ್ಟಕ್ಕೇರಿಸಿದ್ದು ನಾನೆ, ಆದರೆ, ರಾಜ್ಯವನ್ನು ಅವರು ಅವನತಿಗೆ ಕೊಂಡೊಯ್ದಿದ್ದಾರೆ. ಕಲ್ಯಾಣ ಕರ್ನಾಟಕದ ಕನಸು ಹೊತ್ತು ಅಭಿವೃದ್ಧಿಯೇ ಸರ್ಕಾರದ ಮಂತ್ರ ಎಂದು ಬಿಜೆಪಿ ನೀಡಿದ ಹೇಳಿಕೆ ಅರ್ಥಹೀನವಾಗಿದೆ ಎಂದು ಯಡಿಯೂರಪ್ಪ ಹೇಳಿದರು.
ಕರ್ನಾಟಕವನ್ನು ನಂ.1 ಸ್ಥಾನಕ್ಕೇರಿಸುವ ಗುರಿ ಹೊಂದಿದ್ದ ನಾನು, ಇಂಧನ, ಗ್ರಾಮೀಣಾಭಿವೃದ್ಧಿ, ನೀರಾವರಿ ಸೇರಿದಂತೆ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೆ. ಆದರೆ, ಜಗದೀಶ್ ಶೆಟ್ಟರ್ ಅವರು ಈಗ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ 13ನೇ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ. ಆದರೆ, ಬಜೆಟ್ ನಲ್ಲಿ ರಾಜ್ಯ ಸುಭಿಕ್ಷವಾಗಿದೆ ಎಂದು ಹೇಳಿಕೊಂಡಿರುವುದು ದುರಂತ ಎಂದರು.
ಚುನಾವಣೆಗೆ ಮೂರು ತಿಂಗಳು ಕೂಡಾ ಇಲ್ಲ. ಹೀಗಿರುವಾಗ ಜಗದೀಶ್ ಶೆಟ್ಟರ್ ಅವರು ಮಂಡಿಸಿದ ಬಜೆಟ್ ಗೆ ಬೆಲೆ ಇಲ್ಲ. ಇದು ಬಿಜೆಪಿ ಸರ್ಕಾರದ ಕಟ್ಟ ಕಡೆಯ ಬಜೆಟ್. ಇದನ್ನು ನಾನು ಹೇಳುತ್ತಿಲ್ಲ, ಮಾಧ್ಯಮಗಳಲ್ಲಿ ಹೀಗೆಂದೆ ಬಂದಿದೆ. ಮುಂದೆ ಬಿಜೆಪಿ ಸರ್ಕಾರ ಬಂದು ಬಜೆಟ್ ಯೋಜನೆಗಳು ಅನುಷ್ಠಾನಗೊಳ್ಳುವುದು ಕನಸಿನ ಮಾತು.
ಪಾದಯಾತ್ರೆ ಜನರಿಗೆ, ರೈತರಿಗಾಗಿ ಹೊರತೂ ರಾಜಕೀಯ ಉದ್ದೇಶಕ್ಕಾಗಿ ಅಲ್ಲ. ಶೆಟ್ಟರ್ ಅವರು ಕಷ್ಟಪಟ್ಟು ಬಜೆಟ್ ಮಂಡಿಸಿದ್ದಾರೆ. ಆದರೆ, ಅದರಲ್ಲಿ ಜನರು ಇಷ್ಟಪಡುವ ಅಂಶಗಳೇ ಇಲ್ಲ ಎಂದು ಯಡಿಯೂರಪ್ಪ ಟೀಕಿಸಿದರು.












Click it and Unblock the Notifications