ಬಿಎಸ್ವೈ ಪುತ್ರ ರಾಘವೇಂದ್ರ ಬಿಜೆಪಿಯಿಂದ ಔಟ್?

ಯಡಿಯೂರಪ್ಪ ಅವರು ತಮ್ಮಂತೆ, ತಮ್ಮ ಪುತ್ರನಿಂದಲೂ ಬಿಜೆಪಿ ಸಂಸದನ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ ಎಂದು ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ನೂರೆಂಟು ಸಲ ಹೇಳಿದರೂ ಕ್ಯಾರೇ ಅನ್ನದ ಯಡಿಯೂರಪ್ಪಗೆ ಜಿಲ್ಲಾ ಬಿಜೆಪಿ ಘಟಕವು ಪಕ್ಷ ವಿರೋಧಿ ಚಟುವಟಿಕೆ ನೆಪವೊಡ್ಡಿ ಸಂಸದ ರಾಘವೇಂದ್ರ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ವಾನುಮತದ ನಿರ್ಣಯ ತೆಗೆದುಕೊಂಡಿದೆ.
ಈ ಸಂಬಂಧ ಶುಕ್ರವಾರ ಸಭೆ ಸೇರಿದ್ದ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯು ರಾಘವೇಂದ್ರ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಈಶ್ವರಪ್ಪ ಅವರಿಗೆ ಶಿಫಾರಸು ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಸಂಸದ ರಾಘವೇಂದ್ರ ಅವರು ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ. ಶಿಕಾರಿಪುರದಲ್ಲಿ ಅವರ ತಂದೆ ಯಡಿಯೂರಪ್ಪನವರ ಕೆಜೆಪಿ ಪಕ್ಷದ ಕಚೇರಿ ಕಟ್ಟಡದ ಶಂಕುಸ್ಥಾಪನೆಯನ್ನು ಸ್ವತಃ ರಾಘವೇದ್ರ ಅವರೇ ನೆರವೇರಿಸಿದ್ದಾರೆ. ಕೆಜೆಪಿ ಸಮಾವೇಶಕ್ಕೆ ಜನರನ್ನು ಸೇರಿಸಲು ಬಹಿರಂಗವಾಗಿ ಓಡಾಡಿದ್ದರು.
ಇನ್ನು ಕೆಜೆಪಿ ಸೇರುವಂತೆ ಬಿಜೆಪಿ ಪ್ರಮುಖರನ್ನು ಒತ್ತಾಯಿಸುತ್ತಿದ್ದಾರೆ. ಬಿಜೆಪಿಯ ಎಲ್ಲ ಹಂತದ ನಾಯಕರನ್ನು ಬಹಿರಂಗವಾಗಿ ಟೀಕಿಸುತ್ತಿದ್ದಾರೆ. ಕೆಜೆಪಿಯ ಬಹಳಷ್ಟು ಫ್ಲೆಕ್ಸ್ ಗಳಲ್ಲಿ ಅವರ ಚಿತ್ರ ರಾರಾಜಿಸುತ್ತಿದೆ.
ತಮ್ಮ ಸಂಸದ ಸ್ಥಾನವನ್ನು ಉಳಿಸಿಕೊಳ್ಳುವ ಸ್ವಾರ್ಥಕ್ಕಾಗಿ ತಾಂತ್ರಿಕವಾಗಿ ಬಿಜೆಪಿ ಸದಸ್ಯ ಎಂದು ಹೇಳಿಕೊಳ್ಳುತ್ತಾ ಭೌತಿಕವಾಗಿ ಕೆಜೆಪಿ ಪರ ವಾಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸದಸ್ಯರು ತಕ್ಷಣ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ರಾಜ್ಯಾದ್ಯಕ್ಷರಿಗೆ ಮನವಿ ಮಾಡಿದ್ದಾರೆ.












Click it and Unblock the Notifications